ETV Bharat / state

ಕಾಂಗ್ರೆಸ್ ಆಡಳಿತಕ್ಕೆ ಬಂದಾಗೆಲ್ಲ ಮತೀಯ ಗಲಭೆಗಳಿಗೆ ಪ್ರಚೋದನೆ: ಕಟೀಲ್

author img

By

Published : Feb 7, 2023, 10:02 PM IST

Etv BharatNalin Kumar Kateel reaction on congress
ಕಾಂಗ್ರೆಸ್ ಆಡಳಿತಕ್ಕೆ ಬಂದಾಗೆಲ್ಲ ಮತೀಯ ಗಲಭೆಗಳಿಗೆ ಪ್ರಚೋದನೆ ಕೊಟ್ಟಿದೆ:ನಳೀನ್​ ಕುಮಾರ್ ಕಟೀಲ್

ಕಾಂಗ್ರೆಸ್​ ಸರ್ಕಾರದ ಆಡಳಿತಾವಧಿಯಲ್ಲಿ ಮತೀಯ ಗಲಭೆಗಳು ಹೆಚ್ಚಾಗಿದ್ದವು ಎಂದು ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಕಾರವಾರ: ಭಯೋತ್ಪಾದನಾ ಚಟುವಟಿಕೆಗೆ ಕಾಂಗ್ರೆಸ್ ಬೆಂಬಲವಾಗಿ ನಿಂತು ರಕ್ಷಿಸಿದ್ದು, ಅವರ ಅವಧಿಯಲ್ಲಿ ಹೆಚ್ಚು ಮತೀಯ ಗಲಭೆ ಪ್ರಕರಣಗಳು ನಡೆದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ಮತೀಯ ಗಲಭೆಗಳಿಗೆ ಪ್ರಚೋದನೆ ಕೊಟ್ಟಿದೆ. ಅವರ ತುಷ್ಟೀಕರಣ ನೀತಿಯಿಂದಾಗಿ ಅವರ ಅಧಿಕಾರಾವಧಿಯಲ್ಲಿ ಮತೀಯ ಗಲಭೆಗಳು ಹೆಚ್ಚಾಗಿತ್ತು ಎಂದರು.

ಪಿಎಫ್ಐನ ಎರಡು ಸಾವಿರ ಕಾರ್ಯಕರ್ತರನ್ನು ಸಿದ್ರಾಮಣ್ಣ ಬಿಡುಗಡೆಗೊಳಿಸಿದರು. ಅವರ ಕಾಲದಲ್ಲಿಯೇ ಅತಿ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ. ಆದರೆ ಯಾರೊಬ್ಬರ ಮನೆಗೂ ಹೋಗದ ಅವರು ಶೃಂಗೇರಿಯಲ್ಲಿ ಗೋಹಂತಕನೊಬ್ಬನ ಎನ್​ಕೌಂಟರ್ ಆದಾಗ ಅವರ ಮನೆಗೆ ಹೋಗಿ 10 ಲಕ್ಷ ರೂ ಕೊಟ್ಟಿದ್ದರು. ಆ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಮತೀಯ ಗಲಭೆಗಳಿಗೆ ಅವಕಾಶ ಮಾಡಿಕೊಟ್ಟರು. ಮತೀಯ ಗಲಭೆಗಳನ್ನು ಸೃಷ್ಟಿಸಿ ಅಧಿಕಾರ ಪಡೆದಿರುವುದು ಕಾಂಗ್ರೆಸ್​ನ ಇತಿಹಾಸ ಎಂದು ಹೇಳಿದರು.

ಮಂಗಳೂರಿನ ಕುಕ್ಕರ್ ಬ್ಲಾಸ್ಟ್​ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಮತ್ತು ಕಾಂಗ್ರೆಸ್​ನವರು ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತವರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದರು. ಇವತ್ತಿಗೂ ಕಾಂಗ್ರೆಸ್ ಅವರನ್ನು ಉಚ್ಛಾಟನೆ ಮಾಡಿಲ್ಲ. ಪಿಎಫ್ಐ, ಕೆಎಫ್​ಡಿಯನ್ನ ನಿಷೇಧ ಮಾಡಿದರೂ ಪ್ರಶ್ನಿಸುತ್ತಾರೆ. ಇವರದೇ ಶಾಸಕನ ಮೇಲೆ ಚೂರಿ ಇರಿತವಾಗಿತ್ತು ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ಒಬ್ಬ ಮಾಜಿ ಮುಖ್ಯಮಂತ್ರಿ ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಮಾತನಾಡಬೇಕು. ಸಮುದಾಯಗಳನ್ನು ಕೆರಳಿಸುವ, ಸಮಾಜಗಳನ್ನು ಹೀನವಾಗಿ ಕಾಣುವಂಥದ್ದು ಸರಿಯಲ್ಲ. ಮಹಾತ್ಮ ಗಾಂಧಿ ಕೊಲೆಯನ್ನು ಒಂದು ಸಮುದಾಯಕ್ಕೆ ಇವರು ಕಟ್ಟಿದ್ದಾರೆ. ಇವರ ಆಡಳಿತವೇ ಹಾಗೆ, ರಾಮಕೃಷ್ಣ ಹೆಗಡೆಯವರಿಗೆ ಹೊಡೆದವರು ಯಾರು? ಅವರ ರಕ್ತದಲ್ಲೇ ಬ್ರಾಹ್ಮಣ ವಿರೋಧಿ ಎಂದು ಟೀಕಿಸಿದರು.

ಇವರು ರಾಮಕೃಷ್ಣ ಹೆಗಡೆಯವರ ಕಾಲದಿಂದಲೇ ದಾಳಿ ಮಾಡುತ್ತಾ ಬಂದವರು. ಈಗ ಬಾಯಲ್ಲಿ ನೇರವಾಗಿ ಹೇಳಿದ್ದಾರೆ, ಇಷ್ಟು ದಿನ ಕಲ್ಲಲ್ಲಿ ಹೊಡೆಯುತ್ತಿದ್ದರು. ಬ್ರಾಹ್ಮಣ ಸಮುದಾಯವನ್ನು ಕೀಳಾಗಿ ನೋಡುವ, ಸಮುದಾಯಕ್ಕೆ ಅಪಮಾನ ಮಾಡುವ, ತುಚ್ಛವಾಗಿ ಕಾಣುವುದು ಒಬ್ಬ ಮಾಜಿ ಮುಖ್ಯಮಂತ್ರಿಗೆ ಶೋಭೆಯಲ್ಲ.

ಅವರು ಮೂರು ಜಿಲ್ಲೆಗಳನ್ನಿಟ್ಟುಕೊಂಡು ಇಡೀ ರಾಜ್ಯ ಗೆಲ್ಲುವ ಕನಸು ಕಾಣುತ್ತಾರೆ. ಈ ಬಾರಿ ಕಳೆದ ಬಾರಿಯಷ್ಟೂ ಅವರು ಗೆಲ್ಲಲ್ಲ. ಕಳೆದ ಬಾರಿ ಯಾರ್ಯಾರದ್ದೋ ಸಹಾಯದಿಂದ ಗೆದ್ದಿದ್ದಾರೆ. ಈ ಬಾರಿ 20ಕ್ಕಿಂತ ಮೇಲೆ ಅವರು ಹೋಗಲ್ಲ. ಸರ್ವೇ ರಿಪೋರ್ಟ್​ನಲ್ಲಿ ಅವರಿಗೆ 20 ಸ್ಥಾನವನ್ನೂ ಮುಟ್ಟಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಮಾನಸಿಕ ಚಂಚಲತೆಯಿಂದ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಕಾಂಗ್ರೆಸ್​ ಶಾಸಕರಲ್ಲಿ ಆತಂಕ ಮೂಡಿಸಿದ ಸಿದ್ದರಾಮಯ್ಯ ಮಾತು.. ಅಷ್ಟಕ್ಕೂ ಅವರು ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.