ETV Bharat / state

ಕಾಂಗ್ರೆಸ್​ ಶಾಸಕರಲ್ಲಿ ಆತಂಕ ಮೂಡಿಸಿದ ಸಿದ್ದರಾಮಯ್ಯ ಮಾತು.. ಅಷ್ಟಕ್ಕೂ ಅವರು ಹೇಳಿದ್ದೇನು?

author img

By

Published : Feb 7, 2023, 7:02 PM IST

ನೂರು ಪ್ರತಿಶತ ಗೆಲ್ಲುವ ಶಾಸಕರಿಗೆ ಮಾತ್ರ ಟಿಕೆಟ್​ ನೀಡಲಾಗುವುದು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಈ ಮಾತು ಪಕ್ಷದ ಹಲವು ಶಾಸಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಶಾಸಕರಿಗೆ ಮಾತ್ರ ಟಿಕೆಟ್ ನೀಡುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆ ಪಕ್ಷದಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಜಾಧ್ವನಿ ಯಾತ್ರೆ ನೇತೃತ್ವ ವಹಿಸಿರುವ ಸಿದ್ದರಾಮಯ್ಯ, ಬೀದರ್​ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಮಾಹಿತಿ ನೀಡಿದ್ದು, ಶೇಕಡಾ ನೂರರಷ್ಟು ಸೋಲುವ ಶಾಸಕರಿಗೆ ಈ ಸಾರಿ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಈ ಮಾತು ಪಕ್ಷದ ಹಾಲಿ 72 ಶಾಸಕರು ಹಾಗೂ ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಸೇರಲು ಬಯಸುತ್ತಿರುವವರ ಜೊತೆ ಕಳೆದ ಸಾರಿ ಸೋಲು ಅನುಭವಿಸಿ ಮರಳಿ ಟಿಕೆಟ್ ಆಕಾಂಕ್ಷಿಗಳಾಗಿರುವ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಿಗೆ ದೊಡ್ಡ ಮಟ್ಟದ ಆತಂಕವನ್ನು ಉಂಟು ಮಾಡಿದೆ. ಶತಾಯಗತಾಯ ಈ ಬಾರಿ ಟಿಕೆಟ್ ಗಿಟ್ಟಿಸಿ ವಿಧಾನಸಭೆಗೆ ಪ್ರವೇಶಿಸಲು ಮುಂದಾಗಿರುವ ಹಲವು ಕಾಂಗ್ರೆಸ್​ನ ಜನಪ್ರತಿನಿಧಿಗಳಿಗೆ ಸಿದ್ದರಾಮಯ್ಯ ಈ ಹೇಳಿಕೆ ಒಂದು ಹಂತದ ಆತಂಕವನ್ನು ಮೂಡಿಸಿದೆ. ಟಿಕೆಟ್​ಗಾಗಿ ತಾವು ಇನ್ಯಾವ ವಿಧದ ಪ್ರಯತ್ನ ನಡೆಸಬೇಕು ಎಂಬ ಚಿಂತೆಗೆ ಒಳಗಾಗಿದ್ದಾರೆ.

ಈಗಾಗಲೇ ನಾಲ್ಕಾರು ಬಾರಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಹಾಗೂ ಒಂದೆರಡು ಬಾರಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಬಂದಿರುವ ಹಾಲಿ ಶಾಸಕರು ಹಾಗೂ ಟಿಕೆಟ್ ನಿರೀಕ್ಷೆಯಲ್ಲಿರುವ ಹಿರಿಯ ನಾಯಕರು ತಮ್ಮ ಮುಂದಿನ ಪ್ರಯತ್ನ ಯಾವ ರೀತಿ ಇರಬೇಕು ಎಂಬ ಕುರಿತು ಪರಸ್ಪರ ಚರ್ಚೆ ಆರಂಭಿಸಿದ್ದಾರೆ. ಹಾಲಿ ಶಾಸಕರಲ್ಲಿ ಇದೇ ಮೊದಲ ಬಾರಿಗೆ ಆಯ್ಕೆಯಾದವರ ಸಂಖ್ಯೆ ಬಹಳ ಕಡಿಮೆ ಇದ್ದು, ಈ ಸಲ ವಿಧಾನಸಭೆ ಚುನಾವಣೆಗೆ ಟಿಕೆಟ್ ಗುರುತಿಸಲು ಯುವಕರು ದೊಡ್ಡ ಸಂಖ್ಯೆಯಲ್ಲಿ ಸ್ಪರ್ಧೆ ನಡೆಸಿದ್ದಾರೆ. ಈ ಸ್ಪರ್ಧೆಯಲ್ಲಿ ತಮಗೆ ಹಿನ್ನಡೆ ಆಗಬಹುದೆಂಬ ಆತಂಕ ಎದುರಿಸುತ್ತಿರುವವರಿಗೆ ಇದೀಗ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಚುನಾವಣೆಯಲ್ಲಿ ಗೆಲುವು ಸೋಲಿಗಿಂತ ತಮ್ಮ ಪ್ರತಿನಿಧಿತ್ವವನ್ನು ಸಾಬೀತುಪಡಿಸಲು ಚುನಾವಣಾ ಕಣಕ್ಕಿಳಿಯುವ ಸಿದ್ಧತೆ ನಡೆಸಿ ಕೊಂಡವರಿಗೆ ಪ್ರತಿಪಕ್ಷ ನಾಯಕರ ಹೇಳಿಕೆ ಕಂಗಾಲಾಗುವಂತೆ ಮಾಡಿದೆ. ಸಾಕಷ್ಟು ಹಿರಿಯ ಕಾಂಗ್ರೆಸಿಗರು ತಮ್ಮ ಜೊತೆ ತಮ್ಮ ಮಕ್ಕಳಿಗೂ ಟಿಕೆಟ್ ನಿರೀಕ್ಷಿಸುತ್ತಿದ್ದು, ಇದೀಗ ಪಕ್ಷದ ಮುಂದಿನ ನಿಲುವು ಏನಾಗಲಿದೆ ಎಂಬ ಚರ್ಚೆಯೂ ಆರಂಭವಾಗಿದೆ.

ಸಾಮಾನ್ಯವಾಗಿ ಸಿದ್ದರಾಮಯ್ಯ ಬೇಕಾಬಿಟ್ಟಿ ಹೇಳಿಕೆ ನೀಡುವುದಿಲ್ಲ. ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರ ಜೊತೆ ನಡೆಸಿದ ಚರ್ಚೆಯ ಫಲ ಇಲ್ಲವೇ ಹೈಕಮಾಂಡ್ ನಾಯಕರ ಸೂಚನೆಯನ್ನು ಇವರು ಹೇಳಿದ್ದಾರೆ ಎಂಬ ಬಲವಾದ ನಂಬಿಕೆ ಇದೀಗ ಕಾಂಗ್ರೆಸ್ ನಾಯಕರಲ್ಲಿ ಮೂಡಿದೆ.

ಇದನ್ನೂ ಓದಿ: ಯಾರ ಟೈರ್ ಪಂಚರ್ ಆಗಲಿದೆ ಅನ್ನೋದನ್ನು ಜನ ತೀರ್ಮಾನಿಸ್ತಾರೆ: ಡಿಕೆಶಿ

ಹೀಗಾಗಿ ಸೋಲು ಹಾಗೂ ಗೆಲುವನ್ನು ಸಮಾನವಾಗಿ ನಿರೀಕ್ಷಿಸುತ್ತಿರುವ ಹಲವು ನಾಯಕರು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವ ಹಾಗೂ ಅವರ ಮೇಲೆ ಟಿಕೆಟ್ ವಿಚಾರವಾಗಿ ಒತ್ತಡ ಹೇರುವ ಸಾಧ್ಯತೆ ಇದೆ. ಏಕೆಂದರೆ ಚುನಾವಣೆಯಲ್ಲಿ ಸೋಲು ಗೆಲುವು ಜನರ ನಿರ್ಧಾರ. ಕಡೆ ಕ್ಷಣದವರೆಗೂ ಜನರ ನಿರ್ಧಾರ ಏನಿರಲಿದೆ? ಎಂಬುದು ಜನಪ್ರತಿನಿಧಿಗಳಿಗೆ ತಿಳಿಯುವುದಿಲ್ಲ. ಗೆಲ್ಲುವ ಅರ್ಹತೆ ಇದ್ದವರು ಸಾಕಷ್ಟು ಬಾರಿ ಸೋತ ಉದಾಹರಣೆಗಳು ಇವೆ. ಅಲ್ಲದೇ ತಮಗೆ ಟಿಕೆಟ್ ಸಿಗಬೇಕು ಎಂಬ ಒತ್ತಾಸೆಯ ಮೇರೆಗೆ ಹಲವರು ಗೆಲ್ಲುವ ಅಭ್ಯರ್ಥಿಯ ಬಗ್ಗೆ ಸುಳ್ಳು ಮಾಹಿತಿಯನ್ನು ಪಕ್ಷಕ್ಕೆ ನೀಡುವ ಸಾಧ್ಯತೆಯೂ ಇದೆ.

ಚುನಾವಣೆ ಅತ್ಯಂತ ಸಮೀಪದಲ್ಲಿರುವ ಸಂದರ್ಭದಲ್ಲಿ ಅಭ್ಯರ್ಥಿ ಸೋಲುತ್ತಾರೋ ಅಥವಾ ಗೆಲ್ಲುತ್ತಾರೋ ಎಂಬುದನ್ನು ನಿರ್ಧರಿಸುವುದು ಬಹಳ ಕಷ್ಟ. ಈ ಹಿನ್ನೆಲೆ ಪಕ್ಷ ಸಮಯದಲ್ಲಿ ಪ್ರಯೋಗಕ್ಕೆ ಮುಂದಾಗದೇ ಸೋಲು ಗೆಲುವಿಗಿಂತ ಪಕ್ಷಕ್ಕಾಗಿ ದುಡಿದ ಹಾಗೂ ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸುವ ಎಲ್ಲ ಶಾಸಕರಿಗೂ ಹಾಗೂ ಮಾಜಿ ಶಾಸಕರಿಗೂ ಅವಕಾಶ ನೀಡಬೇಕು ಎಂಬ ಮಾತನ್ನು ಆಡುತ್ತಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?: ಬೀದರ್ ನಲ್ಲಿ ಮಾತನಾಡಿದ ಸಂದರ್ಭ ಸಿದ್ದರಾಮಯ್ಯ ಅವರು, "ನೂರಕ್ಕೆ ನೂರರಷ್ಟು ಸೋಲುವ ಕಾಂಗ್ರೆಸ್‌ ಶಾಸಕರಿಗೆ ಈ ಬಾರಿ ಟಿಕೆಟ್‌ ಇಲ್ಲ. ಬಹುತೇಕ ಎಲ್ಲ ಶಾಸಕರಿಗೂ ಅವಕಾಶ ನೀಡಲಾಗುತ್ತಿದೆ. ಯಾರು ನೂರಕ್ಕೆ ನೂರರಷ್ಟು ಸೋಲುತ್ತಾರೆ ಎಂಬ ಕಡೆ ಟಿಕೆಟ್‌ ನೀಡಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಪ್ರತಿ ಕ್ಷೇತ್ರದಲ್ಲಿ 3 ಬಾರಿ ಸರ್ವೆ ಮಾಡಿಸಿದ್ದು, ಆ ವರದಿಯ ಆಧಾರದ ಮೇಲೆ ಟಿಕೆಟ್‌ ಹಂಚಿಕೆಯಾಗಲಿದೆ. ಟಿಕೆಟ್‌ ಸಿಗದವರು ನಿರಾಶರಾಗಬೇಕಿಲ್ಲ. ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಅನೇಕ ಅವಕಾಶಗಳಿರುತ್ತವೆ" ಎಂದೂ ಧೈರ್ಯ ತುಂಬಿದ್ದಾರೆ.

ಟಿಕೆಟ್ ಆಕಾಂಕ್ಷಿ ಹೇಳಿಕೆ: ಹಳೆ ಮೈಸೂರು ಭಾಗದ ಕಾಂಗ್ರೆಸ್ ಶಾಸಕರೊಬ್ಬರು ಈಟಿವಿ ಭಾರತ್​ ಜೊತೆ ಮಾತನಾಡಿದ್ದು, "ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳು ಗೋಚರಿಸುತ್ತಿದೆ. ಇದರಿಂದಾಗಿ ಅಭ್ಯರ್ಥಿಗಳ ಅರ್ಹತೆಯ ಜೊತೆಗೆ ಜನರ ಮನೋಭಾವನೆಯು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದೆ. ಉತ್ತಮ ಸಂಸದೀಯ ಪಟುಗಳಿಗೆ ಕಾಂಗ್ರೆಸ್ ಅವಕಾಶ ನೀಡಬೇಕು. ಹಣ ಹಂಚಿ ಯಾರು ಬೇಕಾದರೂ ಗೆಲ್ಲಬಹುದು.

ಆದರೆ, ಅವರು ವಿಧಾನಸಭೆಯಲ್ಲಿ ಉತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಕಾಂಗ್ರೆಸ್ ಪಕ್ಷ ಗೆಲ್ಲುವ ಅಭ್ಯರ್ಥಿಯ ಹುಡುಕಾಟಕ್ಕಿಂತ ಉತ್ತಮ ಅಭ್ಯರ್ಥಿಯ ಹುಡುಕಾಟ ನಡೆಸುವ ಕಾರ್ಯ ಮಾಡಬೇಕಿದೆ. ಯಾಕೆಂದರೆ ಈ ಸಾರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪವನ್ನು ಜನರೇ ತೊಟ್ಟಿದ್ದಾರೆ. ಕಾಂಗ್ರೆಸ್​ಗೆ ಗೆಲ್ಲುವ ಬಗ್ಗೆ ಹೆಚ್ಚಿನ ತಲೆಬಿಸಿ ಬೇಡ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟರ್ಕಿ ಭೂಕಂಪದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಳ್ಳುತೇವೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.