ETV Bharat / state

ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಸೋಮಣ್ಣರಿಂದ ಆಹ್ವಾನ: ನಾನು, ರಾಜಣ್ಣ ಹೋಗುತ್ತಿದ್ದೇವೆ ಎಂದ ಸಚಿವ ಪರಮೇಶ್ವರ್

author img

By ETV Bharat Karnataka Team

Published : Nov 23, 2023, 5:41 PM IST

ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ವಿ. ಸೋಮಣ್ಣ ನಮ್ಮನ್ನು ಆಹ್ವಾನಿಸಿದ್ದು, ಅದಕ್ಕೆ ಹೋಗುತ್ತಿರುವುದಾಗಿ ಗೃಹ ಸಚಿವ ಜಿ ಪರಮೇಶ್ವರ್​ ಹೇಳಿದ್ದಾರೆ.

ಸಚಿವ ಜಿ ಪರಮೇಶ್ವರ್
ಸಚಿವ ಜಿ ಪರಮೇಶ್ವರ್

ಸಚಿವ ಜಿ ಪರಮೇಶ್ವರ್ ಹೇಳಿಕೆ

ತುಮಕೂರು: ಡಿಸೆಂಬರ್ 6ರಂದು ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಮಠದ ಕಾರ್ಯಕ್ರಮಕ್ಕೆ ಮಾಜಿ ಸಚಿವ ವಿ. ಸೋಮಣ್ಣ ನಮ್ಮನ್ನು ಆಹ್ವಾನ ಮಾಡಿದ್ದಾರೆ, ನಾನು ಮತ್ತು ರಾಜಣ್ಣ ಹೋಗುತ್ತಿದ್ದೇವೆ ಎಂದು ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮಣ್ಣ, ಲಿಂಬಾವಳಿ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಅನ್ನೋ ವಿಚಾರವು ಕೆಪಿಸಿಸಿ ಅಧ್ಯಕ್ಷರ ಮಟ್ಟದಲ್ಲಿ ನಡೆಯುತ್ತೆ. ನಮ್ಮ ಹಂತದಲ್ಲಿ ನಡೆಯೋದಿಲ್ಲ ಎಂದರು. ಬಳಿಕ ತುಮಕೂರು ಲೋಕಸಭಾ ಚುನಾವಣೆ ಕುರಿತ ಪಕ್ಷದ ಸಭೆ ವಿಳಂಬವಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೃಷ್ಣ ಬೈರೇಗೌಡರನ್ನ ಜಿಲ್ಲೆಗೆ ಉಸ್ತುವಾರಿ ಮಾಡಲಾಗಿದೆ. ಅವರು ಬಂದು ಸಭೆಯನ್ನು ನಡೆಸುತ್ತಾರೆ. ಕಾರ್ಯಕರ್ತರ, ಮುಖಂಡರ ಸಭೆ ನಡೆಸಿ ಕೆಪಿಸಿಸಿಗೆ ವರದಿ ಕೊಡ್ತಾರೆ, ಆ ವರದಿಯನ್ನ ನೋಡಿಕೊಂಡು ಮುಂದಿನ ಬೆಳವಣಿಗೆ ನಡೆಯುತ್ತೆ. ಅವರು ಈವರೆಗೂ ಬೇರೊಂದು ಕೆಲಸದಲ್ಲಿ ಬ್ಯುಸಿಯಾಗಿದ್ದರು. ನಾನು ಕೂಡ ಅವರ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲಿ ಸಭೆಯನ್ನು ನಡೆಸುತ್ತಾರೆ ಎಂದರು.

ಜಾತಿಗಣತಿ ವರದಿ ಗೊಂದಲವಾಗಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ವರದಿಯನ್ನು ನಾವಿನ್ನು ಹೊರಗೆ ತಂದೇ ಇಲ್ಲ, ಆಯೋಗದವರು ವರದಿಯನ್ನ ಸರ್ಕಾರಕ್ಕೆ ಕೊಟ್ಟ ನಂತರ, ಸರ್ಕಾರ ಅದನ್ನು ತೀರ್ಮಾನ ಮಾಡುತ್ತೆ. ಮೂಲ ಪ್ರತಿ ಕಾಣೆ ಆಗಿದೆ ಅನ್ನೋದೆಲ್ಲ ಸುಳ್ಳು. ಆಯೋಗದ ಅಧ್ಯಕ್ಷರಿಗೆ ಒಂದು ತಿಂಗಳು ಹೆಚ್ಚಿಗೆ ಕಾಲಾವಕಾಶ ನೀಡಲಾಗಿದೆ. ವರದಿನೇ ಆಚೆ ಬಂದಿಲ್ಲ, ವರದಿ ಆಚೆ ಬಂದ ನಂತರ ಪರ ವಿರೋಧ ಅಭಿಪ್ರಾಯಗಳು ಕೇಳಿಬರಬಹುದು.
ಏನೂ ಇಲ್ಲದೇನೆ ಹೀಗೆ ಚರ್ಚೆ ನಡೆಸೋದು ಎಷ್ಟರ ಮಟ್ಟಿಗೆ ಸರಿ. ವಿರೋಧ ಪಕ್ಷದವರು ಕೂಡ ಏನೇನೋ ಹೇಳಿಕೆಗಳನ್ನ ಕೊಡ್ತಿದ್ದಾರೆ, ವರದಿ ಬಂದ ಮೇಲೆ ತಾನೇ ಅದೆಲ್ಲ ಮಾತನಾಡೋದು ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಸ್ಥಾನದ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲ್ಲ ಅಂತಾ ಹೇಳಿದ್ದೇನೆ. ನನಗೆ ಆ ಪ್ರಶ್ನೆ ಕೇಳಬೇಡಿ ಎಂದು ಹೇಳಿದರು. ಇದೇ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಕೂಡ ಪ್ರತಿಕ್ರಿಯೆ ನೀಡಿದ್ದ ಸಚಿವರು, ವಿರೋಧ ಪಕ್ಷದವರ ಹೇಳಿಕೆಗೆ ಉತ್ತರ ಕೊಡಲು ಆಗುವುದಿಲ್ಲ. ವಿಪಕ್ಷದವರು ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಡುತ್ತಾರೆ ಎಂದಿದ್ದರು.

ಬೆಳಗಾವಿಯಲ್ಲಿ 112 ವಾಹನದಲ್ಲೇ ಪೊಲೀಸರು ಪಾರ್ಟಿ ಮಾಡಿರೋ ವಿಚಾರಕ್ಕೆ, ಆ ಥರ ಏನಾದ್ರೂ ಆಗಿದ್ದಿದ್ರೆ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ವಿಪಕ್ಷದವರ ಇಲ್ಲ ಸಲ್ಲದ ಹೇಳಿಕೆಗಳಿಗೆ ಉತ್ತರ ಕೊಡಲು ಆಗಲ್ಲ: ಗೃಹ ಸಚಿವ ಜಿ‌ ಪರಮೇಶ್ವರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.