ETV Bharat / state

ವಿಪಕ್ಷದವರ ಇಲ್ಲ ಸಲ್ಲದ ಹೇಳಿಕೆಗಳಿಗೆ ಉತ್ತರ ಕೊಡಲು ಆಗಲ್ಲ: ಗೃಹ ಸಚಿವ ಜಿ‌ ಪರಮೇಶ್ವರ್​

author img

By ETV Bharat Karnataka Team

Published : Nov 21, 2023, 4:13 PM IST

Updated : Nov 21, 2023, 7:43 PM IST

G Parameshwar visit to Vijayapur: ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ ಜಿ ಪರಮೇಶ್ವರ್​ ಕಾಂಗ್ರೆಸ್​ ಜಿಲ್ಲಾ ಕಚೇರಿ ಹಾಗೂ ಹಾಸೀಂ ಪೀರ್ ದರ್ಗಾಕ್ಕೆ ಭೇಟಿ ನೀಡಿದರು.

G Parameshwar visit to Vijayapur
ಗೃಹಸಚಿವರ ವಿಜಯಪುರ ಜಿಲ್ಲಾ ಪ್ರವಾಸ

ಗೃಹಸಚಿವರ ವಿಜಯಪುರ ಜಿಲ್ಲಾ ಪ್ರವಾಸ

ವಿಜಯಪುರ: ವಿರೋಧ ಪಕ್ಷದವರ ಹೇಳಿಕೆಗೆ ಉತ್ತರ ಕೊಡಲು ಆಗುವುದಿಲ್ಲ. ವಿಪಕ್ಷದವರು ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡೋದಕ್ಕೆ ಆಗಲ್ಲ ಎಂದು ಗೃಸಚಿವ ಡಾ. ಜಿ ಪರಮೇಶ್ವರ್​ ವಿಪಕ್ಷ ನಾಯಕ ಆರ್​. ಅಶೋಕ್​ ಅವರ ರಾಜ್ಯದಲ್ಲಿ ಮೂರು ಸಿಎಂಗಳಿದ್ದಾರೆ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ ಜಿ ಪರಮೇಶ್ವರ್​ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದರು. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೇಂದ್ರ ಸರ್ಕಾರ ಒಂದು ಬಿಡಿಗಾಸು ಬಿಡುಗಡೆ ಮಾಡಿಲ್ಲ. ಮೊದಲು ಹಣ ಬಿಡುಗಡೆ ಮಾಡೋಕೆ ಹೇಳಿ ಅವರಿಗೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಏನೆಲ್ಲ ಹಣ ಕೊಡಬೇಕು. ಅದನ್ನು ಕೇಳುವುದು ನಮ್ಮ ಹಕ್ಕು. ಎನ್​ಡಿಆರ್​ಎಫ್ ನಿಯಮದಂತೆ 17 ಸಾವಿರ ಕೋಟಿ ನಷ್ಟದ ಮನವಿಯನ್ನು ಕೇಂದ್ರಕ್ಕೆ ಕೊಟ್ಟಿದ್ದೇವೆ.‌‌ ಆದರೆ, ಕೇಂದ್ರ ಬರಗಾಲಕ್ಕಾಗಿ ಒಂದು ಬಿಡಿಗಾಸು ಹಣ ಬಿಡುಗಡೆ ಮಾಡಿಲ್ಲ. ಅದನ್ನೇ ಕೇಳೋಕೆ ಹೇಳಿ ಅವರಿಗೆ ಮೊದಲು ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರ್ಯಕರ್ತರ ಸಂಭ್ರಮದಿಂದ ಸಚಿವರು ಹೈರಾಣ: ವಿಜಯಪುರ ಜಿಲ್ಲಾ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡುವ ವೇಳೆ ಹೂ ಹಾಕದಂತೆ ಗೃಹ ಸಚಿವರು ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ, ಆದರೆ ಗೃಹ ಸಚಿವರ ಮಾತಿಗೆ ಬೆಲೆ ಕೊಡದೇ ಕಾರ್ಯಕರ್ತರು ಗೃಹ ಸಚಿವರ ಮೇಲೆ ಹೂವಿನ ಮಳೆಗರೆದಿದ್ದಾರೆ. ಕಾಂಗ್ರೆಸ್​​ ಕಚೇರಿ ಮೇಲಿನಿಂದ ಹಾ ಹಾಕಿದ ಕಾರಣ ಗೃಹಸಚಿವರು ತಾವು ಬಂದಿದ್ದ ಕಾರು ಬಿಟ್ಟು ಕೆಳಗೆ ಇಳಿದಿರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮದಿಂದ ಹೈರಾಣಾದ ಗೃಹ ಸಚಿವರಾದ ಪರಮೇಶ್ವರ ಹಾಗೂ ಶಿವಾನಂದ ಪಾಟೀಲ್ ಕಾರಿನಲ್ಲೇ ಲಾಕ್​ ಆಗಿದ್ದರು.

ನಗರದ ಐತಿಹಾಸಿಕ ಹಾಸೀಂ ಪೀರ್ ದರ್ಗಾಕ್ಕೆ ಭೇಟಿ ನೀಡಿದ ಗೃಹ ಸಚಿವ ಜಿ‌ ಪರಮೇಶ್ವರ್​ ಕೆಲಕಾಲ ತಲೆ ಮೇಲೆ ಚಾದರ್ ಹೊತ್ತು ಚಾದರ್ ಸೇವೆ ಸಲ್ಲಿಸಿದರು. ಸಚಿವ ಶಿವಾನಂದ ಪಾಟೀಲ್, ಶಾಸಕ ವಿಠಲ ಕಟಕದೊಂಡ, ಧರ್ಮಗುರು ಡಾ ಸಯ್ಯದ್ ಸಹಾ ಮುರ್ಷೀದ್ ಪೀರಾ ಸಜ್ಜಾದೆ ನಶೀನ್ ಸೇರಿದಂತೆ ಇತರರು ಇದ್ದರು. ಗೃಹ ಸಚಿವರಿಗೆ ಒಳಿತಾಗಲಿ‌ ಎಂದು ದರ್ಗಾದ ಗುರುಗಳು ಪ್ರಾರ್ಥನೆ ಮಾಡಿ ಆಶೀರ್ವದಿಸಿದರು.

ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಸತೀಶ ಜಾರಕಿಹೊಳಿ ಸಿಎಂ ಆಗಲಿ ಎಂಬ ಸವದತ್ತಿ ಶಾಸಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನೋಡಿ ನಮ್ಮ ಬೆಂಬಲಿಗರು ಇರುತ್ತಾರೆ. ಅವರಿಗೆ ತಮ್ಮ ನಾಯಕರು ಶಾಸಕರಾಗಬೇಕು, ಸಂಸದರಾಗಬೇಕು, ಸಚಿವರಾಗಬೇಕು, ಉಪ ಮುಖ್ಯಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಆಸೆಗಳು ಇರುತ್ತವೆ. ಆದರೆ, ಇನ್ನೊಂದೆಡೆ ಒಂದು ಪಕ್ಷದಲ್ಲಿ ವ್ಯವಸ್ಥೆ ಅಂತ ಇರುತ್ತೆ. ನಮ್ಮ ಪಕ್ಷದಲ್ಲಿ ಹೈ ಕಮಾಂಡ್ ಇದೆ, ಆಯಾ ಸಂದರ್ಭಕ್ಕೆ ಅನುಗುಣವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೆಂಬಲಿಗರು ಹೇಳಿದ್ದಕ್ಕೆ ನಾವು ಅಬ್ಜಕ್ಷನ್​​​ ಮಾಡೋಕಾಗುತ್ತಾ? ಎಂದು ಹೇಳಿದರು.

ಮೂರು ಡಿಸಿಎಂ ಸೃಷ್ಟಿ ಕುರಿತ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ?: ಮೂರು ಡಿಸಿಎಂ ಸ್ಥಾನಗಳು ಬೇಕು ಎಂಬ ವಿಚಾರದ ಕುರಿತು ಮಾತನಾಡಿ, ಈಗ ರಾಜ್ಯದಲ್ಲಿ ಬರ ಇದೆ, ಜನರು ಸಂಕಷ್ಟದಲ್ಲಿದ್ದಾರೆ. ಅದನ್ನು ಬಿಟ್ಟು ಇದರ ಬಗ್ಗೆ ನಾವು ಮಾತನಾಡಲ್ಲ. ಜನವರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ, ಅದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈಗ ಡಿಸಿಎಂ ವಿಚಾರದ ಬಗ್ಗೆ ನಾವು ಯೋಚನೆ ಮಾಡ್ತಿಲ್ಲ ಎಂದು ಹೇಳಿದರು.

ಬರ ನಿರ್ವಹಣೆ ಆಗ್ತಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಬರ ಪರಿಹಾರಕ್ಕೆ ಕೇಂದ್ರ ಏನು ಮಾಡಿದೆ ಹೇಳಿ. ನಾವು ಈಗಾಗಲೇ ಕೇಂದ್ರಕ್ಕೆ 17ಸಾವಿರ ಕೋಟಿಗೆ ಪ್ರಸ್ತಾವನೆ ಕೊಟ್ಟಿದ್ದೇವೆ. ಅದರಲ್ಲಿ ಅವರು ಎಷ್ಟು ಪರಿಹಾರ ಕೊಟ್ಟಿದ್ದಾರೆ ಎಂದು ಹೇಳಿದ್ರೆ ಸಂತೋಷ ಎಂದರು.

ಪಡಿತರದಲ್ಲಿ ಕೇಂದ್ರದ ಹೆಸರಿನ ರಶೀದಿ ನೀಡುವ ಕುರಿತು ಮಾತನಾಡಿ, ನಾವು ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದು ನಿಜ. ನಾವು ಅಧಿಕಾರದಲ್ಲಿದ್ದಾಗ ಐದು ಕೆಜಿ ಅಕ್ಕಿ ಕೊಟ್ಟಿದ್ದೆವು. ಬಳಿಕ ಅದನ್ನು ಏಳು ಕೆಜಿಗೆ ಏರಿಸಿದ್ದೆವು. ಆದರೆ ಅವರು ಬಂದ ಮೇಲೆ ಮತ್ತೆ ಐದು ಕೆಜಿಗೆ ಇಳಿಸಿದರು. ನಾವು ಚುನಾವಣೆ ವೇಳೆ ಮತ್ತೆ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ ಅಷ್ಟು ಅಕ್ಕಿ ಸಿಗಲಿಲ್ಲ, ಅದರ ಬದಲು ಹಣ ಕೊಡುತ್ತಿದ್ದೇವೆ. ಇಂದಲ್ಲ ನಾಳೆ ಅಕ್ಕಿ ದೊರಕುತ್ತೆ. ಆಂಧ್ರ, ತೆಲಂಗಾಣ, ಪಂಜಾಬ್ ಕಡೆಯಿಂದ ಅಕ್ಕಿ ತರಿಸುವ ಪ್ಲ್ಯಾನ್ ನಡೆದಿದೆ. ನಾವು ಹತ್ತು ಕೆಜಿ ಅಕ್ಕಿಗೆ ಕೊಡುವ ನಿರ್ಧಾರಕ್ಕೆ ಕಮಿಟ್ ಆಗಿದ್ದೇವೆ. ಇಂದಲ್ಲ ನಾಳೆ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನವರಿ ಬಳಿಕ ರಾಜ್ಯ ಸರ್ಕಾರ ಇರಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಮಾತನಾಡಿ, ನೋಡಿ ಕೆಲವರು ಹಗಲು ಹೊತ್ತಲ್ಲೇ ಕನಸು ಕಾಣುತ್ತಾರೆ. ಅದನ್ನು ನಾವು ಡೇ ಡ್ರೀಮ್ ಅಂತೇವೆ. ಅವರು ಹಗಲು ಕನಸು ಕಾಣುವವರಿಗೆ ನಾವು ಬೇಡ ಅಂತ ಹೇಳೊಕಾಗುತ್ತಾ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಪಕ್ಷ ಸಂಘಟನೆಗಾಗಿ ಹೆಚ್​ಡಿಕೆ ನನ್ನಿಂದ ಆರ್ಥಿಕ ಸಹಾಯ ಪಡೆದಿದ್ದಾರೆ: ಟಿ ಎ ಶರವಣ

Last Updated : Nov 21, 2023, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.