ETV Bharat / state

ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​ಗೆ ಡಿಕೆಶಿ ಪತ್ರ.. ಯಾರೇ ಪತ್ರ ಬರೆದರೂ ತಕ್ಷಣ ವಾಪಸ್ ತೆಗೆದುಕೊಳ್ಳಲ್ಲ: ಸಚಿವ ಪರಮೇಶ್ವರ್

author img

By ETV Bharat Karnataka Team

Published : Oct 3, 2023, 5:43 PM IST

Updated : Oct 3, 2023, 6:32 PM IST

Home Minister G Parmeshwar spoke to reporters.
ಗೃಹ ಸಚಿವ ಜಿ ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವುದೇ ಪ್ರಕರಣ ವಾಪಸ್​ ಪಡೆಯಬೇಕಾದರೆ, ಕೆಲವು ನಿಯಮಗಳಿರುತ್ತವೆ. ಪರಿಶೀಲಿಸಿದ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ್ ಮಾಧ್ಯಮದವರೊಂದಿಗೆ ಮಾತನಾಡಿದರು.

ತುಮಕೂರು: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​​ ಪಡೆಯಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ಈಗಾಗಲೇ ಸಾಕಷ್ಟು ಶಾಸಕರು ಪತ್ರ ಬರೆದಿದ್ದಾರೆ. ನಾವು ಅಮಾಯಕರಿದ್ದೇವೆ ಅಂತ ಅವರಿಗೆ ಕೇಸ್​ನ ಆರೋಪಿಗಳು ಅರ್ಜಿ ಕೊಟ್ಟಿರುತ್ತಾರೆ. ಆ ಕೇಸ್​​ನಲ್ಲಿ ಸೇರಿಸಿದ್ದಾರೆ, ವಾಪಸ್ ತೆಗೆದುಕೊಳ್ಳಿ ಅಂತ ಮನವಿ ಮಾಡಿರುತ್ತಾರೆ. ಆದರೆ ಯಾರಾದ್ರೂ ಪತ್ರ ಬರೆದ ತಕ್ಷಣ ಕೇಸ್ ವಾಪಸ್ ತೆಗೆದುಕೊಳ್ಳಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಅವರು ಪತ್ರ ಬರೆದ ತಕ್ಷಣ ಸರ್ಕಾರ ಕೇಸ್ ವಾಪಸ್ ತೆಗೆದುಕೊಳ್ಳಲ್ಲ. ಅದಕ್ಕೊಂದು ಪದ್ಧತಿಯಿದೆ. ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದಾರೆ. ಸಬ್ ಕಮಿಟಿ ಮುಂದೆ ಅದನ್ನು ಇಡುತ್ತೇವೆ. ಕಮಿಟಿ‌ ಮುಂದೆ ಇಡುವ ಮೊದಲು ಗೃಹ ಇಲಾಖೆಯಲ್ಲಿ ಚೆಕ್ ಮಾಡಿಕೊಳ್ಳುತ್ತೇವೆ ಎಂದರು.

ಅದನ್ನು ಇಡಬಹುದಾ, ಇಡಬಾರದು ಅಂತ ಪರಿಶೀಲನೆ ಮಾಡಿ ಅನಂತರ ಕಮಿಟಿ‌ ಮುಂದೆ ತರಲಾಗುತ್ತದೆ. ಕಾನೂನು ಹಾಗೂ ಇಲಾಖೆಯ ತಜ್ಞರು ಇರ್ತಾರೆ. ಅಲ್ಲಿ ಚರ್ಚೆ ಮಾಡಲಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಇದನ್ನು ತೆಗೆಯಬಾರದು, ತೆಗೆಯಬಹುದು ಅ‌ನ್ನೋದನ್ನು ನಮಗೆ ತಿಳಿಸುತ್ತಾರೆ. ಗೃಹ ಸಚಿವರೇ ಅಧ್ಯಕ್ಷರಿರುತ್ತಾರೆ, ಅಲ್ಲಿಯೂ ತೆಗೆಯಬಹುದು ಅಂತಾದ್ರೆ ಮತ್ತೆ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು.

ಇಷ್ಟ ಪದ್ಧತಿ ಆದ್ಮೇಲೆ ಕೇಸ್ ವಾಪಸ್ ತೆಗೆದುಕೊಳ್ಳೋದು. ಯಾವುದೇ ಸಮುದಾಯದ ಓಲೈಕೆ ಅಲ್ಲ, ಎಲ್ಲ ಸರ್ಕಾರದಲ್ಲೂ ಇದು ನಡೆಯುತ್ತೆ. ಹಿಂದೆ ನಾಲ್ಕು ವರ್ಷದಲ್ಲಿ ತೆಗೆದಿದ್ದಾರೆ. ಮುಗ್ಧರನ್ನು ತೆಗೆಯುವ ಕೆಲಸವನ್ನು ಎಲ್ಲಾ ಸರ್ಕಾರಗಳು ಮಾಡಿವೆ ಎಂದು ಸಚಿವ ಪರಮೇಶ್ವರ್​ ತಿಳಿಸಿದರು.

ಜವಾಬ್ದಾರಿ ಸ್ಥಾನದಲ್ಲಿದ್ದವರು ತಿಳಿದು ಮಾತನಾಡಬೇಕು: ಗಲಾಟೆಗೆ ಸಿದ್ದರಾಮಯ್ಯ- ಪರಮೇಶ್ವರ್ ಕಾರಣವೆಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸುಲಭವಾಗಿ ಮಾತನಾಡೋದನ್ನು ನಿಲ್ಲಿಸಬೇಕು. ಶೋಭಾ ಕರಂದ್ಲಾಜೆ ಕುಮ್ಮಕ್ಕಿನಿಂದ ಆಗಿದೆ ಅಂತ ನಾನೂ ಹೇಳಿ ಬಿಡಬಹುದಾ?. ನಾನು ಜವಾಬ್ದಾರಿ ಸ್ಥಾನದಲ್ಲಿ ಇರೋನು ಹಾಗೆ ಹೇಳಲ್ಲ. ಅವರು ಸಹ ಜವಾಬ್ದಾರಿ ಸ್ಥಾನದಲ್ಲಿದ್ದಾರೆ, ತಿಳಿದು ಮಾತನಾಡೋದನ್ನು ಕಲಿತುಕೊಂಡರೆ ಒಳ್ಳೆದು. ಘಟನೆ ನಡೆದಿದೆ, ಅದನ್ನು ನಿಯಂತ್ರಣ ಮಾಡಿದ್ದೇವೆ. ನಿಯಂತ್ರಣ ಮಾಡದಿದ್ದರೆ ದೊಡ್ಡದಾಗುತ್ತಿತ್ತು. ಅದನ್ನು ಮೊದಲೇ ತಿಳಿದು‌ ಪೊಲೀಸರು ನಿಯಂತ್ರಣ ಮಾಡಿದ್ದಾರೆ. ಅದಕ್ಕೆ ಪೊಲೀಸ​ರನ್ನು ಅಪ್ರಿಷಿಯೇಟ್ ಮಾಡಬೇಕೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಗಮಮಂಡಳಿ ನೇಮಕ ವಿಚಾರ: ಆದಷ್ಟು ಶೀಘ್ರವಾಗಿ ನೇಮಕ‌ ಮಾಡುತ್ತೇವೆ. ಮುಖ್ಯಮಂತ್ರಿಗಳು ಅದನ್ನು ಗಮನಿಸಿದ್ದಾರೆ. ಬೇಗನೆ ನಿಗಮ ಮಂಡಳಿಗಳಿಗೆ ನೇಮಕ ನಡೆಯಲಿದೆ ಎಂದು ಸಚಿವರು ಹೇಳಿದರು.

ಇದನ್ನೂಓದಿ:ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ಶಾಮನೂರು ಹೇಳಿಕೆ ತಪ್ಪು: ಶಾಸಕ ಬಸವರಾಜ ರಾಯರೆಡ್ಡಿ

Last Updated :Oct 3, 2023, 6:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.