ETV Bharat / state

ತುಮಕೂರು: ಕಣ್ಮರೆಯಾಗಿ ಮೂರು ದಿನದ ನಂತರ ಶವವಾಗಿ ಪತ್ತೆಯಾದ ವಿದ್ಯಾರ್ಥಿ

author img

By ETV Bharat Karnataka Team

Published : Aug 26, 2023, 4:14 PM IST

ಶವವಾಗಿ ಪತ್ತೆಯಾದ ವಿದ್ಯಾರ್ಥಿ
ಶವವಾಗಿ ಪತ್ತೆಯಾದ ವಿದ್ಯಾರ್ಥಿ

ಕ್ರೀಡಾಕೂಟದಲ್ಲಿ ಭಾಗವಹಿಸುವುದಾಗಿ ಹೋಗಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದಿದೆ. ಹೇಮಂತ್ ಕುಮಾರ್(16) ಮೃತ ವಿದ್ಯಾರ್ಥಿ.
ಹುಳಿಯಾರು ಕೆರೆ ಅಂಗಳದಲ್ಲಿ ಶವ ಪತ್ತೆಯಾಗಿದ್ದು ಮೃತನು ಹಂದನಕೆರೆ ಹೋಬಳಿಯ ಗೋಪಾಲಪುರದ ನಿವಾಸಿಯಾಗಿದ್ದಾನೆ. ಎಸ್.ಎಸ್.ಎಲ್.ಸಿ ಓದುತ್ತಿದ್ದ ಹೇಮಂತ್ ಕುಮಾರ್, ಕ್ರೀಡಾಕೂಟದಲ್ಲಿ ಭಾಗವಹಿಸಲು ಮೂರು ದಿನದ ಹಿಂದೆ ತನ್ನ ಪೋಷಕರಿಗೆ ಹೇಳಿ ಮನೆಯಿಂದ‌ ಹೋಗಿದ್ದನು. ವಾಪಸ್ ಮನೆಗೆ ಬಾರದ ಕಾರಣ ಪೋಷಕರು ಎಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಹೇಮಂತ್ ಕುಮಾರ್ ಶವ ಕೆರೆಯ ಬಳಿ ಪತ್ತೆಯಾಗಿದೆ. ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬರ್ತ್ ಡೇ ಪಾರ್ಟಿ ಮುಗಿಸಿ ಈಜಲು ತೆರಳಿದ್ದ ಸ್ನೇಹಿತರು ನೀರಿನಲ್ಲಿ ಮುಳುಗಿ ಸಾವು.. ಮತ್ತೊಂದೆಡೆ ಬೆಂಗಳೂರಿನಲ್ಲಿ ಬರ್ತ್‌ ಡೇ ಪಾರ್ಟಿ ಮುಗಿಸಿ ಮದ್ಯದ ನಶೆಯಲ್ಲಿ ಕೆರೆಗೆ ಇಳಿದ ಸ್ನೇಹಿತರಿಬ್ಬರು ಶವವಾಗಿ ಪತ್ತೆಯಾದ ಘಟನೆ ಬುಧವಾರ ಸಂಜೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಬತ್ತಹಳ್ಳಿ ವಾಸಿ ಸೋಲೊಮನ್ (28) ಮತ್ತು ಮಹಾರಾಷ್ಟ್ರ ಮೂಲದ ಅಭಿಷೇಕ್ (29) ಮೃತರು ಎಂದು ಗುರುತಿಸಲಾಗಿದೆ. ಮಾರತ್ ಹಳ್ಳಿಯ ಕಾರು ಮಾರಾಟ ಕಂಪನಿಯೊಂದರಲ್ಲಿ ಸೋಲೊಮನ್ ಉದ್ಯೋಗಿಯಾಗಿದ್ದರೆ, ಅಭಿಷೇಕ್ ಜೆ.ಪಿ. ನಗರದ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಮದುವೆ ಮಾಡಿಕೊಳ್ಳುವ ತಯಾರಿಯಲ್ಲಿದ್ದ ಸೋಲೊಮನ್ ಚಿಕ್ಕಕಮ್ಮನಹಳ್ಳಿಯ ಮನೆಯೊಂದನ್ನು ಭೋಗ್ಯಕ್ಕೆ ಪಡೆದಿದ್ದರು. ಬುಧವಾರ ಸೋಲೊಮನ್ ಹುಟ್ಟುಹಬ್ಬ ಇದ್ದಿದ್ದರಿಂದ ಸ್ನೇಹಿತರೆಲ್ಲಾ ಸೇರಿ ಮಂಗಳವಾರ ಚಿಕ್ಕಕಮ್ಮನಹಳ್ಳಿಯ ಸೋಲೋಮನ್ ಮನೆಗೆ ಆಗಮಿಸಿ ಭರ್ಜರಿ ಪಾರ್ಟಿ ಮಾಡಿದ್ದರು. ನಂತರ ಸೋಲೊಮನ್ ಮತ್ತು ಅಭಿಷೇಕ್ ಈಜಾಡಲು ಸಮೀಪದ ಕೆರೆಗೆ ತೆರಳಿದ್ದು, ಆಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಯಚೂರು: ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿ, ವಿದ್ಯಾರ್ಥಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.