ETV Bharat / state

ತೀರ್ಥಹಳ್ಳಿ ರಾಮೇಶ್ವರ ತೆಪ್ಪೋತ್ಸವಕ್ಕೆ ಅದ್ಧೂರಿ ತೆರೆ: ಗಮನಸೆಳೆದ ಬಾಣ ಬಿರುಸು

author img

By

Published : Dec 26, 2022, 10:00 AM IST

thirthahalli rameshwara teppotsavam
ತೀರ್ಥಹಳ್ಳಿ ರಾಮೇಶ್ವರ ತೆಪ್ಪೋತ್ಸವ

ತೀರ್ಥಹಳ್ಳಿ ರಾಮೇಶ್ವರ ತೆಪ್ಪೋತ್ಸವಕ್ಕೆ ತೆರೆ - ಗಮನಸೆಳೆದ ಬಾಣ ಬಿರುಸು - ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಕುರುವಳ್ಳಿ ಕಮಾನು ಸೇತುವೆ - ತೆಪ್ಪೋತ್ಸವದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗಿ

ತೀರ್ಥಹಳ್ಳಿ ರಾಮೇಶ್ವರ ತೆಪ್ಪೋತ್ಸವ

ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದಲ್ಲಿ ರಾಮೇಶ್ವರ ದೇವರ ತೆಪ್ಪೋತ್ಸವ ಅದ್ಧೂರಿಯಾಗಿ ಜರುಗಿತು. ಎಳ್ಳ ಅಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ನಿನ್ನೆ ತುಂಗಾ ನದಿಯಲ್ಲಿ ನಡೆದ ತೆಪ್ಪೋತ್ಸವ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು.

ತುಂಗಾ ನದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಮೂರು ಸುತ್ತು ನದಿಯಲ್ಲಿ ಪ್ರದಕ್ಷಿಣೆ ಹಾಕಿಸಿ, ಪೂಜೆ ಸಲ್ಲಿಸಲಾಯಿತು. ಈ ವೇಳೆ ನದಿ ದಂಡೆ ಮೇಲಿಂದ ಸಿಡಿಸಿದ ಸಿಡಿಮದ್ದುಗಳು ವರ್ಣರಂಜಿತವಾಗಿ ಮುಗಿಲಿಗೆ ಅಪ್ಪಳಿಸಿದವು. ಇದನ್ನು ಮರಳು ದಿಬ್ಬದ ಮೇಲೆ ಕುಳಿತಿದ್ದ ಜನ ನೋಡಿ, ಕೇಕೆ ಹಾಕಿ ಸಂಭ್ರಮಿಸಿದರು.

ಜನಾಕರ್ಷಣೆಯಾದ ಪಟಾಕಿ: ಒಂದು ಕಡೆ ಶ್ರೀ ರಾಮೇಶ್ವರ ದೇವರ ತಪ್ಪೋತ್ಸವ ವಿಜೃಂಭಣೆಯಿಂದ ಜರುಗಿದರೆ ಇನ್ನೊಂದು ಕಡೆ ತೆಪ್ಪೋತ್ಸವದ ನಂತರ ನಡೆದ ಸಿಡಿಮದ್ದು ಸಿಡಿಸುವ ಕಾರ್ಯಕ್ರಮ ನೋಡುವುದೇ ಆಕರ್ಷಣೆ. ತಮಿಳುನಾಡಿನ ಶಿವಕಾಶಿಯ ಪರಿಣಿತರ ತಂಡದಿಂದ ಸಿಡಿಮದ್ದಿನ ಬಣ್ಣದ ಲೋಕವನ್ನೇ ಸೃಷ್ಟಿಸಲಾಯಿತು. ನದಿಯ ಇಕ್ಕೆಲಗಳಲ್ಲಿ ಸಾವಿರಾರು ಹಣತೆಗಳು ತೇಲಿದವು. ಮತ್ತೊಂದು ಕಡೆಯಿಂದ ಆಕಾಶ ದೀಪಗಳು ನದಿಯಿಂದ ಗಗನವನ್ನು ಚುಂಬಿಸುವಂತೆ ನೆರೆದವರ ಮನಸೆಳೆಯಿತು.

ಪ್ರಸಿದ್ಧ ಕುರುವಳ್ಳಿಯ ಕಮಾನು ಸೇತುವೆಯನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸಿಡಿಮದ್ದು ಪ್ರದರ್ಶನವನ್ನು ನೋಡಲು ಆಗಮಿಸಿದ ಜನರಿಗೆ ತುಂಗಾ ನದಿ ದಡದಲ್ಲಿ ಕುಳಿತುಕೊಳ್ಳು ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ತುಂಗಾ ನದಿ ದಡದ ಮರಳು ಹಾಸಿನ ಮೇಲೆ ಸಹ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: ಮಡಿಕೇರಿ: ಇತಿಹಾಸ ಪ್ರಸಿದ್ದ ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ

ಸೂಕ್ತ ಪಾರ್ಕಿಂಗ್ ವ್ಯವಸ್ಥೆ: ವಾಹನ ದಟ್ಟಣೆ ನಿಯಂತ್ರಿಸಲು ಪಟ್ಟಣದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಪ್ಪೋತ್ಸವ ಸಮಿತಿ, ಪೊಲೀಸ್ ಇಲಾಖೆ ಕೈಗೊಂಡಿತ್ತು. ಕಮಾನು ಸೇತುವೆ ಮತ್ತು ತೆಪ್ಪಕ್ಕೆ ತುಂಗಾ ಕಂಪ್ಯೂಟ್ರಾನಿಕ್ಸ್ ಮಾಲೀಕರಾದ ಅನಿಲ್ ಕುಮಾರ್ ನೇತೃತ್ವದಲ್ಲಿ ಕೋಲ್ಡ್ ಫೈರ್ ಅಳವಡಿಕೆ ಮಾಡಲಾಗಿತ್ತು. ಇದು, ತೆಪ್ಪೋತ್ಸವ ನೋಡಲು ಆಗಮಿಸಿದ್ದ ಜನರ ಕಣ್ಮನ ಸೆಳೆಯಿತು.

ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಜರುಗಿದ ಅದ್ಧೂರಿ ತೆಪ್ಪೋತ್ಸವ

ಇನ್ನು, ತೆಪ್ಪೋತ್ಸವದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ ವೈ ರಾಘವೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶೀಲ ಶೆಟ್ಟಿ, ತೆಪ್ಪೋತ್ಸವ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮೈದುಂಬಿ ಹರಿಯುವ ನದಿಯಲ್ಲಿ ಸಿದ್ಧಾರೂಢರ ಸಂಭ್ರಮದ ತೆಪ್ಪೋತ್ಸವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.