ಕೊಡಗು : ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ದೇವಾಲಯದ ಮುಂಭಾಗದಲ್ಲಿನ ಕಲ್ಯಾಣಿಯಲ್ಲಿ ತೆಪ್ಪೋತ್ಸವವು ಅದ್ಧೂರಿಯಾಗಿ ನಡೆಯಿತು. ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆಪ್ಪೋತ್ಸವ ಮತ್ತು ವಿಶೇಷ ಪೂಜೆ ನಡೆಯಿತು. ತೆಪ್ಪೋತ್ಸವ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಶ್ರಾವಣ, ಕಾರ್ತಿಕ ಮಾಸಗಳಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.
ಕೊಡಗು ಜಿಲ್ಲೆಯ ನಿಸರ್ಗ ಸೌಂದರ್ಯ ವೀಕ್ಷಿಸಲು ಬರುವ ಪ್ರವಾಸಿಗರೆಲ್ಲರೂ ಓಂಕಾರೇಶ್ವರ ದೇವಸ್ಥಾನದ ವಾಸ್ತುಶಿಲ್ಪದ ವೀಕ್ಷಣೆಗಾಗಿ ಇಲ್ಲಿಗೆ ಬರುತ್ತಾರೆ.
ಕಾಶಿಯಿಂದ ಶಿವಲಿಂಗ ತಂದು ಪ್ರತಿಷ್ಠಾಪನೆ : ಈ ಓಂಕಾರೇಶ್ವರ ದೇವಸ್ಥಾನ ಕೊಡಗಿನ ಅರಸರ ಕಾಲದ ಧಾರ್ಮಿಕ ಸಾಮರಸ್ಯ ಹಾಗೂ ವೈಭವದ ಸಂಕೇತವಾಗಿದೆ. ಬ್ರಹ್ಮಹತ್ಯಾ ದೋಷದ ಪರಿಹಾರಾರ್ಥವಾಗಿ ಈ ದೇವಸ್ಥಾನವನ್ನು, ಕೊಡಗನ್ನು ಆಳುತ್ತಿದ್ದ ಲಿಂಗರಾಜ ಅರಸರು ನಿರ್ಮಿಸಿದ್ದು ಎನ್ನಲಾಗಿದ್ದು, ಕಾಶಿಯಿಂದ ಶಿವಲಿಂಗವನ್ನು ತಂದು ಕ್ರಿ.ಶ. 1820ರಲ್ಲಿ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ.
ದೇವಸ್ಥಾನ ಕಟ್ಟಡದ ವಾಸ್ತುಶೈಲಿ ಕೊಡಗಿನ ಅರಸರ ಅಭಿರುಚಿಯ ಸಂಕೇತವಾಗಿದೆ. ದೇವಸ್ಥಾನದ ಒಳಗಿನ ನಡು ಭಾಗದಲ್ಲಿ ಬಂಗಾರ ಬಣ್ಣದ ಕಳಸ ಹಾಗೂ ವೃತ್ತಾಕಾರದ ಶಿಖರ ಗಮನ ಸೆಳೆಯುತ್ತದೆ. ಈ ಶಿಖರ ದೇವಸ್ಥಾನಕ್ಕೆ ವಿಶಿಷ್ಟ ಮೆರಗು ನೀಡಿದೆ. ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ನಿತ್ಯ ಪೂಜೆ ನಡೆಯುತ್ತದೆ. ದೇವಸ್ಥಾನದ ನಾಲ್ಕು ಮೂಲೆಗಳಲ್ಲಿ ನಂದಿಯ ಶಿಲ್ಪಗಳೊಂದಿಗೆ ನಾಲ್ಕು ವಿಶಿಷ್ಟ ವಿನ್ಯಾಸದ ಮಿನಾರ್ಗಳಿವೆ. ಇವುಗಳಿಂದಾಗಿ ಈ ಕಟ್ಟಡ ಮುಸ್ಲಿಂ ವಾಸ್ತು ಶೈಲಿಯಂತೆ ಕಂಗೊಳಿಸುತ್ತದೆ.
ಇಸ್ಲಾಂ ಮತ್ತು ರೋಮನ್ ವಾಸ್ತುಶಿಲ್ಪ : ಓಂಕಾರೇಶ್ವರ ದೇವಸ್ಥಾನ ಕರ್ನಾಟಕದಲ್ಲಿರುವ ಶಿವಾಲಯಗಳ ಪೈಕಿ ಅತ್ಯಂತ ವಿಭಿನ್ನವಾಗಿದೆ. ಇಸ್ಲಾಂ ಮತ್ತು ರೋಮನ್ ವಾಸ್ತುಶಿಲ್ಪಗಳ ಪ್ರಭಾವವಿರುವ ಏಕೈಕ ಹಿಂದೂ ದೇವಸ್ಥಾನ ಎಂಬ ಖ್ಯಾತಿ ಓಂಕಾರೇಶ್ವರ ದೇವಸ್ಥಾನಕ್ಕಿದೆ.
ಇದನ್ನೂ ಓದಿ : ಕೊಡಗು ಜಿಲ್ಲೆಯ ಮುಳ್ಳೂರಿನಲ್ಲಿ ಮಾರ್ದನಿಸಿದ ಕನ್ನಡ