ETV Bharat / state

ರಾಮನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ: ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ

author img

By

Published : Jun 3, 2023, 1:03 PM IST

Updated : Jun 3, 2023, 3:15 PM IST

ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದಲ್ಲಿ ಇಂದು ಬೆಳಗ್ಗಿನ ಮಾವಿನತೋಟ ಕಾಯುತ್ತಿದ್ದ ರೈತನ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ರೈತ ಸಾವನ್ನಪ್ಪಿದ್ದಾನೆ.

Representative image
ಪ್ರಾತಿನಿಧಿಕ ಚಿತ್ರ

ಬೆಂಗಳೂರು/ರಾಮನಗರ: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮತ್ತೆ ಮುಂದುವರೆದಿದ್ದು, ಮತ್ತೊಬ್ಬ ರೈತ ಬಲಿಯಾಗಿದ್ದಾನೆ. ಮಾವಿನತೋಟ ಕಾಯುತ್ತಿದ್ದ ರೈತನ ಮೇಲೆ ಒಂಟಿಸಲಗ ದಾಳಿ ನಡೆಸಿದ್ದು, ಆತ ಸಾವನ್ನಪ್ಪಿದ್ದಾನೆ. ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದಲ್ಲಿ ಇಂದು ಬೆಳಗ್ಗಿನ ಜಾವ ಘಟನೆ ನಡೆದಿದೆ. ಕನಕಪುರ ಮೂಲದ ವೀರಭದ್ರಯ್ಯ ಮೃತ ರೈತ.

ವೀರಭದ್ರಯ್ಯ ಅವರು ಕಳೆದ ಮೂರ್ನಾಲ್ಕು ತಿಂಗಳಿಂದ ಲೋಕೇಶ್ ಎಂಬುವವರ ಮಾವಿನ ತೋಟ ಕಾಯುತ್ತಿದ್ದರು. ಈ ತೋಟದಲ್ಲಿ ಮುಂಜಾನೆ ಆನೆ ದಾಳಿ ನಡೆಸಿದೆ. ರಾಮನಗದ ರೈತರು ಕಾಡಾನೆ ಹಾವಳಿಯಿಂದ ಕಂಗೆಟ್ಟಿದ್ದಾರೆ. ಇತ್ತೀಚೆಗಷ್ಟೇ ಕಬ್ಬಾಳು ಗ್ರಾಮ ಬಳಿಯೂ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ: ಆನೆ ದಾಳಿಯಿಂದ ರಾಮನಗರ ಜಿಲ್ಲೆಯ ಇಬ್ಬರು ರೈತರು ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಇಂದು ನಸುಕಿನಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ವಿರೂಪಾಕ್ಷ ಪುರ ಹೋಬಳಿ ವಿರುಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ವೀರಭದ್ರಯ್ಯ (40) ಮತ್ತು ಮೊನ್ನೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಮಳೆಯೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ರೈತ ರವಿ (40) ಎಂಬುವರು ಮೃತಪಟ್ಟಿದ್ದರು.

ಯಾವುದೇ ವ್ಯಕ್ತಿ ಕಾಡು ಪ್ರಾಣಿಗಳ ದಾಳಿಯಿಂದ ಸಾವಿಗೀಡಾಗಬಾರದು. ಇನ್ನು ಮುಂದೆ ಪ್ರಾಣಿ ಮತ್ತು ಮಾನವನ ಸಂಘರ್ಷದಿಂದ ಹೆಚ್ಚಿನ ಜೀವಹಾನಿ ಆಗದ ರೀತಿಯಲ್ಲಿ ಕ್ರಮ ವಹಿಸಲು ಮತ್ತು ನಾಡಿಗೆ ದಾಳಿ ಇಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

15 ಲಕ್ಷ ರೂ. ಪರಿಹಾರ: "ಮೃತ ವೀರಭದ್ರಯ್ಯ ಮತ್ತು ರವಿಯವರ ಕುಟುಂಬಕ್ಕೆ ನಿಯಮಾನುಸಾರ 15 ಲಕ್ಷ ರೂ. ಪರಿಹಾರವನ್ನು ಒದಗಿಸಲಾಗುವುದು. ಯಾವುದೇ ಪರಿಹಾರ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಕ್ಕೆ ಆಸರೆ, ಆಧಾರವಾಗುತ್ತದೆ" ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ತಕ್ಷಣವೇ ಎಲ್ಲಿ ಹೆಚ್ಚಿನ ಆನೆಗಳ ದಾಳಿ ಪ್ರದೇಶವಿದೆಯೋ ಅಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಿ ಇಂತಹ ಅನಾಹುತಗಳನ್ನು ತಪ್ಪಿಸುವುದು ಅಗತ್ಯವಾಗಿದೆ. ಇದಕ್ಕೆ ಮುಂಬರುವ ಬಜೆಟ್​​ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಮೃತರಿಬ್ಬರ ಕುಟುಂಬಕ್ಕೆ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಚಿವ ಈಶ್ವರ ಖಂಡ್ರೆ ಪ್ರಾರ್ಥಿಸಿದ್ದಾರೆ.

ಬೇಲಿ ನಿರ್ಮಾಣಕ್ಕೆ ಹೆಚ್​ಡಿಕೆ ಆಗ್ರಹ: ಅರಣ್ಯ ಸಂರಕ್ಷಣೆ ಜತೆಗೆ ಕಾಡಿನ ಅಕ್ಕಪಕ್ಕ ಬೇಸಾಯ ಮಾಡುವ ರೈತರ ಹಿತವೂ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಟ್ವೀಟ್ ಮಾಡಿರುವ ಅವರು, ರೈತಾಪಿ ಜನರ ಜೀವ ಅಮೂಲ್ಯ. ಈ ಕಾರಣಕ್ಕಾಗಿ ಅರಣ್ಯ ವಲಯದಲ್ಲಿ ವೈಜ್ಞಾನಿಕ ಬೇಲಿ ನಿರ್ಮಾಣ ಮಾಡಬೇಕು ಎಂದು ನಾನು ಅನೇಕ ಸಲ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಈ ಬಗ್ಗೆ ಇನ್ನಷ್ಟು ವಿಳಂಬ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ವಿರೂಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ವೀರಭದ್ರಯ್ಯ ಅವರು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಸುದ್ದಿ ಕೇಳಿ ಬಹಳ ದುಃಖ ಉಂಟಾಯಿತು. ಮೃತ ರೈತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಆ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಚನ್ನಪಟ್ಟಣ ಮಾತ್ರವಲ್ಲದೆ, ರಾಮನಗರ ಜಿಲ್ಲೆಯ ನಾನಾ ಭಾಗಗಳಲ್ಲಿ ಜನರ ಮೇಲೆ ಕಾಡುಪ್ರಾಣಿಗಳು ದಾಳಿ ನಡೆಸುವ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕೂಡಲೇ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವರು ಈಗಾಗಲೇ ಘೋಷಿಸಿರುವಂತೆ, ಕೂಡಲೇ ನೊಂದ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ಹಸ್ತಾಂತರ ಮಾಡಬೇಕು ಹಾಗೂ ಕಾಡಂಚಿನಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ವಹಿಸಿ ಜನರ ಮೇಲೆ ಕಾಡುಪ್ರಾಣಿಗಳ ದಾಳಿ ಆಗದಂತೆ ಶಾಶ್ವತವಾಗಿ ತಡೆಯುವ ಎಲ್ಲಾ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೆಚ್​ಡಿಕೆ ಆಗ್ರಹಿಸಿದ್ದಾರೆ.

ದೇಶದಲ್ಲಿ ಸಂಭವಿಸಿದ ಸಾವು ನೋವು: ದೇಶದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆನೆ ದಾಳಿಯಿಂದ 1,581 ಮಂದಿ ಸಾವನಪ್ಪಿದ್ದಾರೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಸಚಿವಾಲಯ ಮಾಹಿತಿ ನೀಡಿತ್ತು. ಸಚಿವಾಲಯವು ನೀಡಿದ ಅಂಕಿ - ಅಂಶದ ಪ್ರಕಾರ 2019-20ರಲ್ಲಿ 585, 2020- 21ರಲ್ಲಿ 461 ಹಾಗೂ 2021-22ರಲ್ಲಿ 535 ಮಂದಿ ದೇಶದಲ್ಲಿ ಆನೆ ದಾಳಿಯಿಂದ ಸಾವಿಗೀಡಾಗಿದ್ದರು. ಒಡಿಶಾ ರಾಜ್ಯ ಮೊದಲ ಸ್ಥಾನದಲ್ಲಿದ್ದು 322 ಮಂದಿ ಸಾವನ್ನಪ್ಪಿದ್ದರು. ಜಾರ್ಖಂಡ್‌ನ‌ಲ್ಲಿ 291, ಪಶ್ಚಿಮ ಬಂಗಾಲದಲ್ಲಿ 240, ಅಸ್ಸಾಂನಲ್ಲಿ 229 ಹಾಗೂ ಛತ್ತೀಸ್‌ಗಢದಲ್ಲಿ 183 ಮಂದಿ ಕಳೆದ ಮೂರು ವರ್ಷಗಳಲ್ಲಿ ಆನೆ ದಾಳಿಯಿಂದ ಸಾವೀಗೀಡಾಗಿದ್ದರು. ದಕ್ಷಿಣ ಭಾರತದ ರಾಜ್ಯಗಳಲ್ಲಿ ತಮಿಳುನಾಡಿನಲ್ಲಿ ಅತೀ ಹೆಚ್ಚು 152 ಮಂದಿ ಆನೆಯ ದಾಳಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಆನೆಯನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ 69 ಜನ ಆನೆಯ ದಾಳಿಗೆ ತುತ್ತಾಗಿದ್ದಾರೆ. ಇನ್ನು ಕೇರಳದಲ್ಲಿ 57 ಹಾಗೂ ಆಂಧ್ರ ಪ್ರದೇಶದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕ ಸರ್ಕಾರ ಮೃತರಿಗೆ ಪರಿಹಾರವನ್ನು 7.50 ಲಕ್ಷದಿಂದ 15 ಲಕ್ಷಕ್ಕೆ ದ್ವಿಗುಣಗೊಳಿಸಿದೆ.

ಇದನ್ನೂ ಓದಿ: ಆನೇಕಲ್​ನಲ್ಲಿ ಕಾಡಾನೆ ಹಾವಳಿ: ಮಹಿಳೆ ಸಾವು

Last Updated :Jun 3, 2023, 3:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.