ರಾಯಚೂರು : ಸರಕಾರ ರೈತರ ಅನುಕೂಲಕ್ಕಾಗಿ ಜಾರಿಗೆ ತಂದ ಕೃಷಿ ಹೊಂಡ ಯೋಜನೆ ಈಗ ಚಂದ್ರಬಂಡಾ ರೈತರಿಗೆ ಅನಾನುಕೂಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಪ್ರಸಕ್ತ ಸಾಲಿನಲ್ಲಿ 18 ಕೃಷಿ ಹೊಂಡ ಮಂಜುರಾಗಿ ನಿರ್ಮಾಣವಾಗಿವೆ. ಆದರೆ ದಲಿತ ಸಂಘಟನೆಯ ಹೆಸರಿನಲ್ಲಿ ವೀರೇಶ್ ಎಂಬುವವರು ಅಕ್ರಮವಾಗಿದೆ ಎಂದು ಕೃಷಿ ಇಲಾಖೆ ವಿರುದ್ಧ ದೂರು ನೀಡಿದ್ದಾರೆ.
ದೂರು ನೀಡಿದ ನಂತರ ತನಿಖೆಯ ನೆಪದಲ್ಲಿ ಉಳಿದ ಕೃಷಿ ಹೊಂಡ ಕಾಮಗಾರಿ ನಿರ್ಮಾಣ ಮಾಡುತ್ತಿಲ್ಲ. ಇದರಿಂದ ಚಂದ್ರಬಂಡಾ ವ್ಯಾಪ್ತಿಗೆ ಬರುವ ಗಣಮೂರು ಸೇರಿದಂತೆ ಸುತ್ತಲಿನ ಗ್ರಾಮದ ರೈತರಿಗೆ, ಕೂಲಿ ಕಾರ್ಮಿಕರಿಗೆ ಮೂರು ತಿಂಗಳಿನಿಂದ ಕೆಲಸ ನೀಡುತ್ತಿಲ್ಲ ಎಂದು ಗಣಮೂರಿನ ಗ್ರಾಮಸ್ಥರು ದೂರುತ್ತಿದ್ದಾರೆ.
ಆರೋಪ ಸತ್ಯವಾದಲ್ಲಿ ಕೃಷಿ ಇಲಾಖೆಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಗಣಮೂರಿನ ಗ್ರಾಮಸ್ಥ ಮಲ್ಲೇಶ ಒತ್ತಾಯಿಸಿದ್ದಾರೆ.