ETV Bharat / state

ಮೈಸೂರು ಗ್ಯಾಂಗ್ ರೇಪ್ ಪ್ರಕರಣವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ: ಸಿದ್ದರಾಮಯ್ಯ

author img

By

Published : Sep 1, 2021, 9:04 PM IST

ರಾಜ್ಯಾದ್ಯಂತ ತಲ್ಲಣ ಮೂಡಿಸಿದ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದೀರ್ಘ ಸುದ್ದಿಗೋಷ್ಟಿ ನಡೆಸಿದ್ದು, ಪ್ರಕರಣದಲ್ಲಿ ಪೊಲೀಸ್ ಇಲಾಖೆ ದೌರ್ಬಲ್ಯ ಎತ್ತಿ ತೋರುತ್ತಿದೆ ಎಂದು ಹೇಳಿದ್ದಾರೆ.

siddaramaiah pressmeet on mysore rape case
ಸಿದ್ದರಾಮಯ್ಯ

ಮೈಸೂರು: ಗ್ಯಾಂಗ್ ರೇಪ್ ಪ್ರಕರಣ ಪೊಲೀಸ್ ಹಾಗೂ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಪ್ರಕರಣವನ್ನು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂತ್ರಸ್ತೆಯ ಹೇಳಿಕೆ ಪಡೆಯದೇ ಆರೋಪಿಗಳ ಬಂಧನ ಮಾಡಿದ್ದೇವೆ ಎಂದು ಪೊಲೀಸರು ಹೇಳುತ್ತಿರುವುದು ಎಲ್ಲೋ ಒಂದು ಕಡೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಎಂದರು.

ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ:

ಗೃಹ ಸಚಿವರು ಕಾಟಾಚಾರಕ್ಕೆ ಮೈಸೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ಹಾಗೂ ಸಭೆಗಳನ್ನು ಮಾಡಿದ್ದಾರೆ. ಆದರೆ ಸ್ಥಳೀಯ ಜನಪ್ರತಿನಿಧಿಗಳ ಸಭೆ ನಡೆಸಿಲ್ಲ. ಸರ್ಕಾರ ಈ ಘಟನೆಯನ್ನು ಲಘುವಾಗಿ ತೆಗೆದುಕೊಂಡಿದೆ. ಗಂಭೀರವಾಗಿ ಪರಿಗಣಿಸಿಲ್ಲ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂದರು.

ಪೊಲೀಸರು ಜಾಗೃತರಾಗಬೇಕಿತ್ತು:

ಘಟನಾ ಸ್ಥಳದಲ್ಲಿ ಗಸ್ತು ವ್ಯವಸ್ಥೆ ಕೂಡ ಇಲ್ಲ. ಕೃತ್ಯ ನಡೆದ ಸ್ಥಳ ರಸ್ತೆಯಿಂದ 70-80 ಮೀಟರ್ ದೂರವಿದ್ದು, ರಿಂಗ್ ರಸ್ತೆಯಿಂದ ಕೂಗಳತೆ ದೂರದಲ್ಲಿದೆ. ಅಪರಾಧ ನಡೆಯದೇ ಇರಲಿ ಎಂದು ಗರುಡಾ ನೀಡಿರುವುದು. ಆ ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿ ಇದ್ದಿದ್ದರೆ ಘಟನೆ ನಡೆಯುತ್ತಿರಲಿಲ್ಲ ಎಂದರು. ಘಟನೆ ನಡೆಯದಂತೆ ತಡೆದಿದ್ದರೆ ಪೊಲೀಸರಿಗೆ ಅಭಿನಂದನೆ ಸಲ್ಲಿಕೆ, ಬಹುಮಾನ ನೀಡುವುದು ಸರಿ. ಆದರೆ ಅವರು ತಡೆದಿಲ್ಲ. ಆರೋಪಿಗಳನ್ನು ಪತ್ತೆಹಚ್ಚುವುದು ಅವರ ಡ್ಯೂಟಿ. ಈಗಿನ ತಂತ್ರಜ್ಞಾನದಲ್ಲಿ ಆರೋಪಿಗಳ ಪತ್ತೆ ಕಷ್ಟವೇನಿಲ್ಲ ಎಂದರು.

ಮೈಸೂರು ನಗರಕ್ಕೆ ಇದು ಕಪ್ಪುಚುಕ್ಕೆ:

ದೇಶ- ವಿದೇಶಗಳಿಂದ, ಬೇರೆ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕೆ, ಪ್ರವಾಸಿ ತಾಣ ನೋಡಲು ಬರುತ್ತಾರೆ. ಇಂತಹ ನಗರದ ಬಗ್ಗೆ ಸರ್ಕಾರ ಹಾಗೂ ಪೊಲೀಸರು ಜಾಗರೂಕತೆಯಿಂದ ಇರಬೇಕು.‌ ದೆಹಲಿ ನಿರ್ಭಯ ಕೇಸ್ ನಂತರ ಮೈಸೂರು ನಗರದಲ್ಲಿ ಆಗಿರುವ ಗ್ಯಾಂಗ್ ರೇಪ್ ಹೇಯವಾದ ಕೃತ್ಯ. ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ. ಮೈಸೂರು ನಗರಕ್ಕೆ ಈ ಘಟನೆ ಒಂದು ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ:

ಮೈಸೂರು ನಗರದಲ್ಲಿ ಕೊಲೆ, ಸುಲಿಗೆ, ದರೋಡೆ ಅತ್ಯಾಚಾರ, ಕಳ್ಳತನ ಎಲ್ಲಾ ರೀತಿ ಅಪರಾಧ ಪ್ರಕರಣ ನಡೆಯುತ್ತಿವೆ. ಇದರ ಅರ್ಥ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ. ಇದನ್ನು ಸರಿಪಡಿಸಲು ಸರ್ಕಾರ ಅಥವಾ ಪೊಲೀಸರು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು. ಈ ಪ್ರದೇಶ ಮುಡಾಗೆ ಬರುತ್ತದೆಯೋ ಅಥವಾ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆಯೋ ಎಂದು ಒಂದು ವಾರ ಆದರೂ ವರದಿ ತರಿಸಿಕೊಳ್ಳಲು ಆಗಿಲ್ಲ ಎಂದರು.

ಎಫ್​ಐಆರ್ ದಾಖಲಿಸಲು ತಡ ಯಾಕೆ?:

ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ 15 ಗಂಟೆ ನಂತರ ಎಫ್​ಐಆರ್ ದಾಖಲು ಮಾಡಿದ್ದಾರೆ. ಎಫ್​ಐಆರ್​ ದಾಖಲಿಸಲು ತಡವಾಗಿದ್ದೇಕೆ? ಪೊಲೀಸಿನವರು ಯಾಕೆ ತಡವಾಯಿತು ಎಂದು ವಿವರಿಸಿಲ್ಲ. ಅಲ್ಲದೇ ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ಪಡೆದಿಲ್ಲ. ನ್ಯಾಯಾಧೀಶರ ಮುಂದೆ ಹೇಳಿಕೆ ಪಡೆಯಬಹುದಾಗಿದ್ದು, ಆದರೆ ಹೇಳಿಕೆ ಪಡೆಯದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸಂತ್ರಸ್ತೆ ಶಾಕ್ ನಲ್ಲಿದ್ದಾಳೆ ಎಂದು ಹೇಳುತ್ತಾರೆ. ಆದರೆ ಆಕೆ ಡಿಸ್ಚಾರ್ಜ್ ತೆಗೆದುಕೊಂಡು ಹೋಗಿದ್ದಾಳೆ. ಆಕೆಯನ್ನು ನ್ಯಾಯಾಧೀಶರ ಮುಂದೆ ಕರೆದುಕೊಂಡು ಹೋಗಿದ್ದರೆ ಹೇಳಿಕೆ ನೀಡುತ್ತಿದ್ದಳು. ಅಂತೆಯೇ ಆಕೆಯ ತಂದೆಯನ್ನು ಮನವೊಲಿಸಬಹುದಾಗಿತ್ತು. ಆದರೆ ಈ ಯಾವ ಪ್ರಯತ್ನವನ್ನು ಮಾಡದೇ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದ್ರು.ಸಂತ್ರಸ್ತೆಯ ಹೇಳಿಕೆ ಪಡೆಯದೇ ಇರುವುದು ಕಾನೂನಿನಲ್ಲಿ ಹಿನ್ನಡೆಯಾಗಲಿದೆ ಎಂದರು.

ಪೊಲೀಸರಿಗೆ ಫ್ರೀ ಹ್ಯಾಂಡ್ ಇಲ್ಲ:

ಪೊಲೀಸರಿಗೆ ಫ್ರೀ ಹ್ಯಾಂಡ್ ಇಲ್ಲ. ಹಣ ನೀಡಿ ಪೊಲೀಸರು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ನನ್ನ ಅವಧಿಯಲ್ಲಿ ಇಂತಹ ವರ್ಗಾವಣೆ ಆಗಿದ್ದರೆ ಹೇಳಲಿ ಎಂದರು. ಜಾತಿ ಗಣತಿ ನನ್ನ ಅಧಿಕಾರಾವಧಿಯಲ್ಲಿ ವರದಿ ತಯಾರಾಗಿರಲಿಲ್ಲ. ಅಲ್ಲದೆ 170 ಕೋಟಿ ವ್ಯಯ ಮಾಡು ನಾನೇ ಏಕೆ ವರದಿ ಲೀಕ್ ಮಾಡಲಿ. ಈ ಬಗ್ಗೆಯೂ ಅಸೆಂಬ್ಲಿಯಲ್ಲಿ ಮಾತನಾಡುವುದಾಗಿ ತಿಳಿಸಿದರು.

ಜಿಟಿಡಿ ವಿಚಾರ ಹೈಕಮಾಂಡ್ ಬಳಿ ಮಾತನಾಡಬೇಕು:

ಜಿ.ಟಿ.ದೇವೇಗೌಡ ಅವರು ನನ್ನನ್ನು ಭೇಟಿ ಮಾಡಿ ಜೆಡಿಎಸ್ ಬಿಡುತ್ತೇನೆ, ಕಾಂಗ್ರೆಸ್ ‌ಸೇರ್ಪಡೆಯಾಗುತ್ತೇನೆ. ಆದರೆ ನನಗೆ ಹಾಗೂ ನನ್ನ ಮಗನಿಗೆ ಟಿಕೆಟ್ ನೀಡಬೇಕು ಎಂದರು. ಅದಕ್ಕೆ ನಾನು ಹೈಕಮಾಂಡ್ ಬಳಿ ಮಾತನಾಡಬೇಕು ಎಂದಿದ್ದೇನೆ.

ಕಾಂಗ್ರೆಸ್ ಕೃಷಿ ಕಾಯ್ದೆ ವಿರೋಧಿಸುತ್ತದೆ ಎಂದ ಸಿದ್ದರಾಮಯ್ಯ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ ಮೋದಿ ಅವರ ಅಚ್ಚೇ ದಿನ್ ಇದೆಯೇ ಎಂದು ಪ್ರಶ್ನಿಸಿದರು. ಮನಮೋಹನ್‌ಸಿಂಗ್ ಕಾಲದಲ್ಲಿ 414 ರೂ ಇದ್ದ. ಗ್ಯಾಸ್ ಬೆಲೆ ಇಂದು 884 ರೂ. ಆಗಿದೆ. ವಾರದಲ್ಲಿ 50 ರೂ ಏರಿಕೆಯಾಗಿದೆ ಎಂದರು.

ಸಂಕಷ್ಟ ಸೂತ್ರ ಅನುಸರಿಸಲಿ:

ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶಕ್ಕೆ ಪ್ರತಿಕ್ರಿಯಿಸಿ ನೀರು ಇದ್ದರೆ ಬಿಡಲಿ ಇಲ್ಲವಾದರೆ ಬೇಡ. ಸಂಕಷ್ಟ ಸೂತ್ರ ಅನುಸರಿಸಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.