ETV Bharat / state

ಲೋಕಸಭಾ ಚುನಾವಣೆಗೆ ನನ್ನದು ಯಾವ ಬೇಡಿಕೆಯೂ ಇಲ್ಲ: ಡಾ. ಯತೀಂದ್ರ ಸಿದ್ದರಾಮಯ್ಯ

author img

By ETV Bharat Karnataka Team

Published : Aug 27, 2023, 8:53 PM IST

ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನನ್ನ ಬೇಡಿಕೆ ಏನೂ ಇಲ್ಲ ಎಂದು ​ಯತೀಂದ್ರ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾ.ಯತೀಂದ್ರ ಸಿದ್ದರಾಮಯ್ಯ
ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಮುಂಬರುವ ಲೋಕಸಭಾ ಚುನಾವಣೆಗೆ ನನ್ನದು ಯಾವ ಬೇಡಿಕೆ ಇಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಪಕ್ಷ ಸೂಚಿಸಿದರೆ ನಾನು ಅಭ್ಯರ್ಥಿಯಾಗುತ್ತೇನೆ. ಪಕ್ಷದ ಮಾತನ್ನು ನಾನು ಕೇಳಲೇಬೇಕು ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಗಾಣಿಗ ಸಮುದಾಯದ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲಬೇಕು. ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಬಿಜೆಪಿ ದುರಾಡಳಿತ ನೋಡಿ ಬೇಸತ್ತು ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲೋಕೆ ತಂತ್ರಗಾರಿಕೆ ಮಾಡಬೇಕು ಎಂದರು.

ಯಾವ ಅಭ್ಯರ್ಥಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಸಮರ್ಥರಿದ್ದಾರೋ ಅವರನ್ನು ಸರ್ವೆ ಮೂಲಕ ಅಯ್ಕೆ ಮಾಡುತ್ತಾರೆ. ಸ್ಥಳೀಯ ನಾಯಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸೂಕ್ತ ಅಭ್ಯರ್ಥಿಗಳನ್ನು ಅಯ್ಕೆ ಮಾಡುತ್ತಾರೆ. ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಮಾಜಿ ಶಾಸಕನಾಗಿ ಕ್ಷೇತ್ರದ ಜನ ನನ್ನ ಬಳಿ ಬಂದು ಕೇಳಿದಾಗ ಕೆಲಸ ಮಾಡಿಕೊಡುತ್ತಿದ್ದೇನೆ ಎಂದು ಹೇಳಿದರು.

ಜನರು ಇಟ್ಟ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ. ಹಾಗಂದ ಮಾತ್ರಕ್ಕೆ ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಅದಕ್ಕೆ ಯಾವ ಸಾಕ್ಷಿಯೂ ಇಲ್ಲ. ಯಾವುದೇ ಒಂದು ಸಾಕ್ಷಿ ಇದ್ರೆ ಕೊಡಲಿ. ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ. ನನ್ನ ವಿರುದ್ಧ ಮಾತನಾಡಲು ಏನೂ ಇಲ್ಲ. ಹೀಗಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಯತೀಂದ್ರ ಹೇಳಿದರು.

ಹೆಚ್​ಡಿಕೆ ವೈಎಸ್​ಟಿ ಹೇಳಿಕೆ : ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವೈಎಸ್​ಟಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ನವರು ಹತಾಶರಾಗಿದ್ದಾರೆ. ಕೇವಲ 19 ಸ್ಥಾನ ಬಂದಿರುವ ಕಾರಣ ಜೆಡಿಎಸ್ ಅಸ್ತಿತ್ವದ ಪ್ರಶ್ನೆಯಾಗಿದೆ. ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುವುದಕ್ಕೆ ಯಾವುದೇ ವಿಚಾರಗಳು ಸಿಗುತ್ತಿಲ್ಲ. ಹಿಂದೆ ಅವರು ಮಾಡಿದ ತಪ್ಪನ್ನು ನಮ್ಮ ತಲೆ ಮೇಲೆ ಕಟ್ಟಲು ಯತ್ನಿಸುತ್ತಿದ್ದಾರೆ. ಬಿಜೆಪಿ ಸದಸ್ಯರೇ ವಿಎಸ್​ಟಿ ಆರೋಪ ಮಾಡಿದರು. ನಮ್ಮ ಪಕ್ಷದವರು ಯಾರೂ ಈ ರೀತಿ ಆರೋಪ ಮಾಡಿಲ್ಲ. ಯಾವುದಕ್ಕೂ ಸಾಕ್ಷಿ ಇಲ್ಲ. ಪ್ರತಿಪಕ್ಷದವರು ಸುಮ್ಮನೇ ಕೆಸರು ಎರಚುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಗೃಹ ಲಕ್ಷೀ ಯೋಜನೆಯಿಂದ ಕಾರ್ಯಕ್ರಮ ವಿಚಾರವಾಗಿ ಮಾತನಾಡಿ, ಲೋಕಸಭಾ ಚುನಾವಣೆಗೆ ಮುನ್ನ ಜನರಿಗೆ ಕೊಟ್ಟ ಗ್ಯಾರೆಂಟಿಗಳನ್ನ ಜಾರಿ ಮಾಡುತ್ತೇವೆ. ಜೆಡಿಎಸ್ ಬಿಜೆಪಿ ಪ್ರತಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೆ. ಅದನ್ನು ಅಫೀಷಿಯಲ್ ಆಗಿ ಅಥವಾ ಪರೋಕ್ಷವಾಗಿ ಮೈತ್ರಿ ಮಾಡಿಕೊಂಡಿರುತ್ತಾರೆ. 2018, 2023 ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ನಾವು ಎದುರಿಸುತ್ತೇವೆ ಎಂದು ಚುನಾವಣೆ ಮಾಡಲು ರೆಡಿ ಎನ್ನುವ ಸಂದೇಶ ರವಾನಿಸಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಸರ್ಕಾರಕ್ಕೆ ನೂರು ದಿನ.. ಬೆಳಗಾವಿ, ದಾವಣಗೆರೆ, ಬೆಂಗಳೂರಿನ ಜನ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.