ETV Bharat / state

ದಸರಾ ಗೋಲ್ಡ್ ಕಾರ್ಡ್, ಟಿಕೆಟ್​ಗೆ​ ಬೇಡಿಕೆ: ಪಾಸ್​ ಖರೀದಿಗೆ ಮತ್ತೆ ಅವಕಾಶ ನೀಡಿದ ಜಿಲ್ಲಾಡಳಿತ

author img

By ETV Bharat Karnataka Team

Published : Oct 21, 2023, 8:27 PM IST

mysuru-district-administration-allowed-to-purchase-of-dasara-gold-card-and-tickets
ದಸರಾ ಗೋಲ್ಡ್ ಕಾರ್ಡ್, ಟಿಕೆಟ್​ ಬೇಡಿಕೆ: ಪಾಸ್​ ಖರೀದಿಗೆ ಮತ್ತೆ ಅವಕಾಶ ನೀಡಿದ ಜಿಲ್ಲಾಡಳಿತ

ದಸರಾ ಜಂಬೂಸವಾರಿ ಮತ್ತು ಪಂಜಿನ ಕವಾಯಿತು ವೀಕ್ಷಣೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಖರೀದಿಸಲು ಅ.22ರಂದು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಕೇಂದ್ರ ಬಿಂದುವಾದ ಜಂಬೂಸವಾರಿ ಕಣ್ತುಂಬಿಕೊಳ್ಳಲು ಟಿಕೆಟ್ ಇಲ್ಲದೇ ಪರದಾಡುತ್ತಿರುವ ಸಾರ್ವಜನಿಕರಿಗೆ ಜಿಲ್ಲಾಡಳಿತ ಗುಡ್ ನ್ಯೂಸ್ ನೀಡದೆ. ಹೌದು, ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಖರೀದಿಸಲು ಅ.22ರಂದು ಮತ್ತೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ನಾಡಹಬ್ಬ ಮೈಸೂರು ದಸರಾ ನಿಮಿತ್ತ ದೇಶ - ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ದಸರಾ ಜಂಬೂಸವಾರಿ ಮತ್ತು ಪಂಜಿನ ಕವಾಯಿತು ವೀಕ್ಷಣೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಅ.18ರಂದು ಬೆಳಗ್ಗೆ 10ರಿಂದ ಆನ್‌ಲೈನ್ ಮೂಲಕ ನಿಗದಿತ ಹಣ ಪಾವತಿಸಿ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿದ ಕೆಲವೇ ಗಂಟೆಯೊಳಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳು ಮಾರಾಟವಾಗಿದ್ದವು.

ಆದಾಗ್ಯೂ ಹೆಚ್ಚಿನ ಸಂಖ್ಯೆಯಲ್ಲಿ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳಿಗೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡುವ ಉದ್ದೇಶದಿಂದ ಹೆಚ್ಚಿನ ಆಸನಗಳ ವ್ಯವಸ್ಥೆ ಕಲ್ಪಿಸಿ ಆಸನಗಳಿಗೆ ಅನುಗುಣವಾಗಿ ಅ.22ರಂದು ಬೆಳಗ್ಗೆ 10ರಿಂದ ವೆಬ್‌ಸೈಟ್ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ದಸರಾ ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಖರೀದಿಸಲು 6 ಸಾವಿರ ರೂ., ಟಿಕೆಟ್ ಖರೀದಿಸಲು 3ಸಾವಿರ ರೂ. ಮತ್ತು 2 ಸಾವಿರ ರೂ., ಹಾಗೂ ಪಂಜಿನ ಕವಾಯಿತು ವೀಕ್ಷಣೆಗೆ 500 ರೂ., ಗಳನ್ನು ಪಾವತಿಸಿ ಖರೀದಿಸಬಹುದಾಗಿದೆ.

ಗೋಲ್ಡ್‌ ಕಾರ್ಡ್ /ಟಿಕೆಟ್ ಖರೀದಿಗಾಗಿ ವೆಬ್‌ಸೈಟ್ ವಿಳಾಸ mysoredasara.gov.in ಸಂಪರ್ಕಿಸಬಹುದಾಗಿದೆ. ಆನ್‌ಲೈನ್ ಹೊರತು ಪಡಿಸಿ ಇತರ ಯಾವುದೇ ರೀತಿಯಲ್ಲಿ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಮಾರಾಟ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅರಮನೆಯ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ರಾಜವಂಶಸ್ಥ ಯಧುವೀರ್ ಒಡೆಯರ್ ಹೇಳಿದ್ದೇನು?.. ಅವರ ಮಾತಲ್ಲೇ ಕೇಳಿ!

ಅ.24ರಂದು ಪಂಜಿನ ಕವಾಯತು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಅ.24 ರಂದು ಸಂಜೆ 7.30ಕ್ಕೆ ಮೈದಾನದಲ್ಲಿ ಪಂಜಿನ ಕವಾಯತು (ಟಾರ್ಚ್ ಲೈಟ್ ಪೆರೇಡ್) ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್​ರವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​, ಕೇಂದ್ರ ವಿತ್ತ ಹಾಗೂ ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದಲ್ಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ವಿಶೇಷ ಚೇತನರಿಗೆ ಜಂಬೂಸವಾರಿ ವೀಕ್ಷಿಸಲು ಆಸನ ವ್ಯವಸ್ಥೆ: ಮೈಸೂರು ನಗರದ ನ್ಯೂ ಸಯಾಜಿ ರಾವ್ ರಸ್ತೆ ಬಂಬೂ ಬಜಾರ್​ನಲ್ಲಿರುವ ಸರ್ಕಾರಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಸುಮಾರು 200 ವಿಶೇಷ ಚೇತನರಿದ್ದು, ಈ ಶಾಲೆಯ ಮುಂಭಾಗ ಆವರಣದಲ್ಲಿ ಫುಟ್​ ಪಾತ್​ನಲ್ಲಿ ಮಕ್ಕಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೇಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.