ETV Bharat / state

ಹುಲಿ ದಾಳಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಲಿ

author img

By ETV Bharat Karnataka Team

Published : Nov 6, 2023, 8:49 PM IST

ಹುಲಿ ದಾಳಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಲಿ
ಹುಲಿ ದಾಳಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಲಿ

ದನ ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ ಪರಿಣಾಮ ಮಾಜಿ ಗ್ರಾಪಂ ಸದಸ್ಯ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು:‌ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ವೇಳೆ ರೈತನ ಮೇಲೆ ಹುಲಿ ದಾಳಿ ನಡೆಸಿ, ಕೊಂದು ತಿಂದಿರುವ ಘಟನೆ ಸರಗೂರು ತಾಲೂಕಿನ ಮೊಳೆಯೂರು ವಲಯ ಅರಣ್ಯ ಪ್ರದೇಶ ಬಳಿ ನಡೆದಿದೆ. ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಬೇಗೂರು ಗ್ರಾಮದ ರೈತ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ(42) ಹುಲಿ ದಾಳಿಗೆ ಬಲಿಯಾದ ದುರ್ದೈವಿ.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಬಾಲಾಜಿ ನಾಯ್ಕ ಎಂದಿನಂತೆ ಸೋಮವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೊಳೆಯೂರು ವಲಯದ ಅಂಚಿನಲ್ಲಿಯೇ ಇರುವ ಬಿ.ಮಟಕೆರೆ - ಹೊಸಕೋಟೆ ಮಾರ್ಗದ ಪಕ್ಕದ ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಿಸುತ್ತಿದ್ದರು. ಈ ವೇಳೆ, ಆಹಾರ ಅರಸಿ ಕಾಡಿನಿಂದ ಬಂದಿದ್ದ ಹುಲಿಯೊಂದು ದನಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಗಾಬರಿಗೊಂಡ ದನಗಳು ಚದುರಿಹೋಗಿವೆ. ಜಾನುವಾರುಗಳು ಸಿಗದ ಪರಿಣಾಮ ದನ ಕಾಯುತ್ತ ಕುಳಿತ್ತಿದ್ದ ರೈತ ಬಾಲಜಿ ನಾಯ್ಕನ ಮೇಲೆ ಹುಲಿ ದಾಳಿ ನಡೆಸಿದೆ.

ದಾಳಿಗೆ ರೈತ ಬಾಲಾಜಿ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತ ದೇಹವನ್ನು ಹುಲಿ ಕಾಡಿನೊಳಗೆ ಎಳೆದೊಯ್ದಿದೆ. ಈ ದೃಶ್ಯವನ್ನು ಪಕ್ಕದ ಜಮೀನಿನಲ್ಲಿ ದನಗಾಯಿಯೊಬ್ಬರು ಕಂಡು ಗಾಬರಿಯಾಗಿ ಕಿರುಚಾಡಿದ್ದಾರೆ. ಕೂಡಲೇ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಬಂದು ನೋಡುವಷ್ಟರಲ್ಲೇ ಹುಲಿ ಬಾಲಾಜಿ ನಾಯ್ಕನನ್ನು ಕೊಂದು ಅವರ ಎಡ ಕಾಲು, ದೇಹದ ಕೆಲ ಭಾಗಗಳು, ತಲೆಯ ಭಾಗವನ್ನು ತಿಂದಿದೆ ಎನ್ನಲಾಗಿದೆ.

ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ: ರೈತನ ಮೇಲೆ ಹುಲಿ ದಾಳಿ ನಡೆಸಿರುವ ಸ್ಥಳದಿಂದ ಮೊಳೆಯೂರು ವಲಯ ಅರಣ್ಯ ಕಚೇರಿ ಸಮೀಪದಲ್ಲೇ ಇದ್ದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಇದಲ್ಲದೇ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳದಲ್ಲಿ ಮಳೆಯಾಗುತ್ತಿರುವುದರಿಂದ ಮರಣೋತ್ತರ ಪರೀಕ್ಷೆ ವಿಳಂಬವಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಪರಶಿವಮೂರ್ತಿ, ಪಿಎಸ್‌ಐ ನಂದೀಶ್‌ ಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಪೊಲೀಸ್ ಸಿಬ್ಬಂದಿಗಳಾದ ನಾಗನಾಯಕ, ಇಮ್ರಾನ್ ಅಹಮದ್ಮ ಕೃಷ್ಣ, ಆನಂದ್, ಬಿ.ಮಟಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಜಿ.ಅಜಿತ್‌ಕುಮಾರ್, ಸದಸ್ಯರಾದ ದೇವದಾಸ್, ಕುರ್ಣೇಗಾಲ ಬೆಟ್ಟಸ್ವಾಮಿ, ಕೃಷ್ಣ, ಮುಖಂಡರಾದ ನಾರಾಯಣ ನಾಯ್ಕ, ಹೇಮಾಜಿನಾಯ್ಕ, ರಮೇಶ್, ರಾಮು, ಚಂದ್ರ, ಶಿವಾಜಿ ನಾಯ್ಕ, ಸುಂದರ, ಸುರೇಶ್, ಸಿದ್ದಯ್ಯ ಹಾಜರಿದ್ದರು.

ಇದನ್ನೂ ಓದಿ: ಮೂಡಬಿದಿರೆಯಲ್ಲಿ ಬಾವಿಗೆ ಬಿದ್ದ ಬೃಹತ್​ ಚಿರತೆ...ಹರಸಾಹಸ ಪಟ್ಟು ರಕ್ಷಣೆ: ವಿಡಿಯೋ ನೊಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.