ETV Bharat / state

ಚುನಾವಣೆ ಇನ್ನೂ ಘೋಷಣೆಯೇ ಆಗಿಲ್ಲ: ಆಗಲೇ ತಂದೆಯ ಗೆಲ್ಲಿಸಲು ಅಖಾಡಕ್ಕಿಳಿದ ಪುತ್ರರು!

author img

By

Published : Feb 3, 2023, 8:25 PM IST

Updated : Feb 3, 2023, 9:05 PM IST

Mysore
ಮೈಸೂರು

ಚುನಾವಣೆ ಸಮೀಪಿಸುತ್ತಿದೆ. ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸ್ವಯಂಘೋಷಿತ ಅಭ್ಯರ್ಥಿಗಳ ಮಕ್ಕಳು ಈಗಲೇ ಪ್ರಚಾರ ಕಾರ್ಯ ಧುಮುಕಿದ್ದಾರೆ.

ಮೈಸೂರು ವಿಧಾನಸಭೆ ಚುನಾವಣೆ ಅಖಾಡ

ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಆಗಲೇ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ತಂದೆಯ ಜೊತೆ ಪುತ್ರರೂ ಅಖಾಡಕ್ಕಿಳಿದಿದ್ದು, ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕಾರ್ಯಾರಂಭಿಸಿದ್ದಾರೆ.

ತಂದೆಯಿಂದ ಚುನಾವಣೆಯ ಕಲೆಯನ್ನು ಬಳುವಳಿಯಾಗಿ ಪಡೆಯಲು ಕೆಲವರು ಯತ್ನಿಸಿದರೆ, ಮತ್ತೆ ಕೆಲವರು ಉತ್ತರಾಧಿಕಾರಿಯಾಗಿ ಬೆಳೆಯಲು ವೇದಿಕೆಯನ್ನು ಸಜ್ಜುಗೊಳಿಸುತ್ತಿದ್ದಾರೆ. ಚುನಾವಣೆ ಘೋಷಣೆ ಮುನ್ನವೇ ಕ್ಷೇತ್ರವ್ಯಾಪ್ತಿ ಗೆಲುವಿನ ಕ್ರಿಯಾಯೋಜನೆ ಹೆಣೆಯುತ್ತಿದ್ದಾರೆ. ಚುನಾವಣೆ ಸಮೀಸುತ್ತಿದ್ದಂತೆ ಆಯಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು, ಆಕಾಂಕ್ಷಿಗಳ ಮಕ್ಕಳು ಕ್ಷೇತ್ರ ಗೆಲ್ಲಲು ಖುದ್ದು ಅಖಾಡಕ್ಕಿಳಿದ್ದಾರೆ.

ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಹುಣಸೂರು ಕ್ಷೇತ್ರದಲ್ಲಿ ಶಾಸಕ ಹೆಚ್.ಪಿ.ಮಂಜುನಾಥ್ ಪುತ್ರ ಪವನ್, ಟಿ. ನರಸೀಪುರದಿಂದ ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್, ಚಾಮುಂಡೇಶ್ವರಿ ಕ್ಷೇತ್ರದಿಂದ ಕಾಂಗ್ರೆಸ್ ಮಾಜಿ ಶಾಸಕ ವಾಸು ಪುತ್ರ ಕವೀಶ್‌ ಗೌಡ, ಹುಣಸೂರು ಕ್ಷೇತ್ರದಿಂದ ಶಾಸಕ ಜಿ.ಟಿ.ದೇವೇಗೌಡ ಪುತ್ರ ಹರೀಶ್‌ ಗೌಡ, ಪಿರಿಯಾಪಟ್ಟಣ ಕ್ಷೇತ್ರದಿಂದ ಶಾಸಕ ಕೆ.ಮಹದೇವ ಪುತ್ರ ಪ್ರಸನ್ನ, ಕೆ.ಆರ್.ನಗರ ಕ್ಷೇತ್ರದಿಂದ ಶಾಸಕ ಸಾ.ರಾ.ಮಹೇಶ್ ಪುತ್ರ ಸಾ.ರಾ. ಜಯಂತ್, ಹೆಚ್.ಡಿ.ಕೋಟೆ ಕ್ಷೇತ್ರದಿಂದ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್, ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಮಾಜಿ ಶಾಸಕ ದಿವಂಗತ ಎಸ್. ಚಿಕ್ಕಮಾದು ಪುತ್ರಿ ರಂಜಿತಾ ಚುನಾವಣಾ ಚದುರಂಗದಲ್ಲಿದ್ದಾರೆ.

ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್‌ ಗೌಡ ಅವರು ಈಗಾಗಲೇ ಹುಣಸೂರಿನಲ್ಲಿ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಯೆಂದು ಜೆಡಿಎಸ್ ಪಕ್ಷ ಪಟ್ಟಿ ಬಿಡುಗಡೆ ಮಾಡಿರುವುದರಿಂದ, ಹರೀಶ್‌ ಗೌಡ, ಕ್ಷೇತ್ರದಲ್ಲಿ ಭರ್ಜರಿಯಾಗಿ ರೌಂಡ್ಸ್ ಹಾಕುತ್ತಿದ್ದಾರೆ. ಪ್ರತಿ ವರ್ಷ ಹುಟ್ಟುಹಬ್ಬವನ್ನು ಮೈಸೂರಿನಲ್ಲಿ ಆಚರಿಸಿಕೊಳ್ಳುತ್ತಿದ್ದ ಇವರು, ಈ ಬಾರಿ ಹುಣಸೂರಿನಲ್ಲಿ ಅದ್ಧೂರಿಯಾಗಿ ಆಚರಿಸಿಕೊಳ್ಳುವ ಮೂಲಕ ಯುವಪಡೆಗೆ ಹತ್ತಿರವಾಗಲು ಮುಂದಾಗಿದ್ದಾರೆ.

ಎಚ್.ಡಿ.ಕೋಟೆಯಲ್ಲಿ ಜೆಡಿಎಸ್ ಸಂಭಾವ್ಯ ಅಭ್ಯರ್ಥಿಯಾಗಿರುವ ಜಯಪ್ರಕಾಶ್ ಹಾಗೂ ಕೃಷ್ಣನಾಯಕರ ನಡುವೆ ಯಾರಿಗೆ ಟಿಕೆಟ್ ಫೈನಲ್ ಎಂಬುವುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಆದರೆ, ಈ ನಡುವೆ ಚಿಕ್ಕಮಾದು ಅವರ ಪುತ್ರಿ ರಂಜಿತಾ ಅವರು ಕೂಡ ಜೆಡಿಎಸ್ ಸೇರ್ಪಡೆಗೊಂಡಿರುವುದರಿಂದ ಲೆಕ್ಕಾಚಾರ ಬದಲಾಗುವ ಸಾಧ್ಯತೆಯು ಹೆಚ್ಚಳವಾಗಿದೆ. ತಂದೆ ಪರ ಮತಯಾಚನೆ ಮಾಡುವ ಸಲುವಾಗಿ, ಹುರುಪಿನಿಂದಲ್ಲೇ ಮಕ್ಕಳು ಆಯಾ ಕ್ಷೇತ್ರಗಳಲ್ಲಿ ಬಿಡು ಬಿಟ್ಟಿದ್ದು, ಗೆಲುವಿನ ಲೆಕ್ಕಚಾರವೂ ಜೋರಾಗಿದೆ. ಮತ್ತೊಂದೆಡೆ, ಉತ್ತರಾಧಿಕಾರಿಯಾಗಲು ಸಜ್ಜಾಗುತ್ತಿದ್ದಾರೆ.

ಪಕ್ಷದ ಮುಖಂಡರುಗಳನ್ನು ತಮ್ಮ ತಮ್ಮ ಪಕ್ಷದ ಕಡೆ ಸೆಳೆಯುವಲ್ಲಿ ನಿರತರಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಹಬ್ಬಗಳು, ಜಾತ್ರೆಗಳ ಸಂಧರ್ಭದಲ್ಲಿ ಫ್ಲೆಕ್ಸ್​ಗಳ ಭರಾಟೆ ಜೋರಾಗಿದೆ. ಇದರೊಂದಿಗೆ ಸರ್ಕಾರದ ಸವಲತ್ತುಗಳ ವಿತರಣೆ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹಾಳಾಗಿ ಗುಂಡಿ ಬಿದ್ದಿದ್ದ ರಸ್ತೆಗಳಿಗೆ ಈಗ ತರಾತುರಿಯಲ್ಲಿ ಡಾಂಬರೀಕರಣ ಮಾಡಿಸಲಾಗುತ್ತಿದೆ. ಹೇಗಾದರೂ ಮಾಡಿ ಈ ಚುನಾವಣೆಯನ್ನು ಗೆಲ್ಲಬೇಕೆಂದು, ಮೂರು ಪಕ್ಷದ ನಾಯಕರುಗಳು ಕಸರತ್ತು ಆರಂಭಿಸಿದ್ದಾರೆ. ಸ್ಥಳೀಯ ಶಾಸಕರುಗಳು, ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದಾರೆ.

ಘಟಾನುಘಟಿಗಳಿಗೆ ಕೊನೆ ಚುನಾವಣೆ: ಮೈಸೂರು ರಾಜ್ಯ ರಾಜಕಾರಣದಲ್ಲಿ ಹಲವಾರು ಘಟಾನುಘಟಿ ನಾಯಕರುಗಳಿರುವ ಜಿಲ್ಲೆಯಾಗಿದ್ದು, ಅದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೊನೆಯ ಚುನಾವಣೆ ಆಗಿದೆ. ಬಿಜೆಪಿಯ ಚಾಮರಾಜನಗರದ ಸಂಸದ ಶ್ರೀನಿವಾಸ್ ಪ್ರಸಾದ್ 50 ವರ್ಷ ರಾಜಕೀಯದಲ್ಲಿದ್ದು, ಈ ವರ್ಷ ನಿವೃತ್ತಿ ಆಗಲಿದ್ದಾರೆ. ಅವರು ಮತ್ತೇ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ.

ವಿಶ್ವನಾಥ್, ಜಿ.ಟಿ.ದೇವೇಗೌಡ ಅವರಿಗೆ ಇದೇ ಕೊನೆ ಚುನಾವಣೆ ಆಗಲಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಇವರ ಮಕ್ಕಳೇ ಇರುತ್ತಾರೆ. ಒಟ್ಟಾರೆ ಮುಂದಿನ ವಿಧಾನಸಭಾ ಚುನಾವಣೆಗೆ ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದು, ಇವರ ಜೊತೆಗೆ ಮಕ್ಕಳು, ಹೆಂಡತಿಯರು ಕೈ ಜೋಡಿಸಿದ್ದು ವಿಶೇಷವಾಗಿದೆ.

ಇದನ್ನೂ ಓದಿ: ನನಗೆ ಸಚಿವ ಸ್ಥಾನ ಬೇಡ ಎಂದು ಸಿಎಂಗೆ ತಿಳಿಸಿದ್ದೇನೆ: ಕೆ.ಎಸ್.ಈಶ್ವರಪ್ಪ

Last Updated :Feb 3, 2023, 9:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.