ETV Bharat / state

ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಚರ್ಚೆಗೆ ಕಾಂಗ್ರೆಸ್​ನಿಂದ ನಿಲುವಳಿ ಸೂಚನೆ ಮಂಡನೆ

author img

By

Published : Sep 21, 2021, 8:48 PM IST

ವಿಧಾನಪರಿಷತ್ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್ ನಿಲುವಳಿ ಸೂಚನೆ ಪ್ರಸ್ತಾಪಿಸಿದರು. ನಿಲುವಳಿ ಸೂಚನೆಯನ್ನು ಪರಿಗಣಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಿಯಮ 59 ರ ಬದಲು 68 ರ ಅಡಿಯಲ್ಲಿ ನಾಳೆ ಚರ್ಚೆಗೆ ಅವಕಾಶ ಕೊಡುವುದಾಗಿ ರೂಲಿಂಗ್ ನೀಡಿದರು.

Congress on Mysore gang rape case in Assembly session news
ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಚರ್ಚೆಗೆ ಕಾಂಗ್ರೆಸ್​ನಿಂದ ನಿಲುವಳಿ ಸೂಚನೆ ಮಂಡನೆ

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಕುರಿತು ಚರ್ಚೆ ನಡೆಸಲು ಅವಕಾಶ ಕೋರಿ ಕಾಂಗ್ರೆಸ್ ಮಂಡಿಸಿದ ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಪುರಸ್ಕರಿಸಿದ್ದು, ನಾಳೆ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.

ವಿಧಾನಪರಿಷತ್ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್ ನಿಲುವಳಿ ಸೂಚನೆ ಪ್ರಸ್ತಾಪಿಸಿದರು. ಮೈಸೂರಿನಲ್ಲಿ ಯುವತಿ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ರಕ್ಷಣೆಗೆ ನಿಯಮ ಮೀರಿದ್ದಾರೆ. ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ‌ ಬಗ್ಗೆ ನಿಯಮ 59 ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ನಿಲುವಳಿ ಸೂಚನೆಯನ್ನು ಪರಿಗಣಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಿಯಮ 59 ರ ಬದಲು 68 ರ ಅಡಿಯಲ್ಲಿ ನಾಳೆ ಚರ್ಚೆಗೆ ಅವಕಾಶ ಕೊಡುವುದಾಗಿ ರೂಲಿಂಗ್ ನೀಡಿದರು.

ಮರಳು ಕೊರತೆ ನೀಗಿಸಲು ಹಳ್ಳ,ಕೆರೆಗಳ ಮರಳು ತೆಗೆಯಲು ಅವಕಾಶ:

ರಾಜ್ಯದಲ್ಲಿ 10 ದಶಲಕ್ಷ ಟನ್ ಮರಳಿನ ಕೊರತೆಯಾಗುತ್ತಿದ್ದು, ಈ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿಯೇ ಹೊಸ ಮರಳು ನೀತಿ ಜಾರಿಗೆ ತರಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆದಷ್ಟು ಬೇಗ ಮರಳು ನೀತಿ ಹೊಸ ನೀತಿ ತರಲಿದ್ದೇವೆ. ಸಂಪುಟದಲ್ಲಿ ಒಪ್ಪಿಗೆ ಪಡೆದು ಜಾರಿಗೊಳಿಸುತ್ತೇವೆ. ಹಳ್ಳ, ಕೆರೆಗಳಲ್ಲಿ ಸಿಗುವ ಮರಳನ್ನು ಗ್ರಾ.ಪಂ ಮೂಲಕ ಕೊಡಲು ನಿಯಮಾವಳಿಯಲ್ಲಿ ಬದಲಾವಣೆ ಮಾಡಿಕೊಡಲಾಗುತ್ತಿದೆ. ಕಾನೂನಾತ್ಮಕವಾಗಿ ಹಂಚಿಕೆ ಮಾಡಲು ಮರಳು ಹಂಚಿಕೆ ವಿಧಾನವನ್ನು ಸರಳ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಸದ್ಯ ರಾಜ್ಯದಲ್ಲಿ 45 ದಶಲಕ್ಷ ಟನ್ ಮರಳಿನ ಅವಶ್ಯಕತೆ ಇದೆ. ಆದರೆ 35 ದಶಲಕ್ಷ ಟನ್ ಉತ್ಪಾದನೆ ಆಗುತ್ತಿದೆ. 10 ದಶಲಕ್ಷ ಟನ್ ಕೊರತೆಯಾಗುತ್ತಿದ್ದು, ಈ ಕೊರತೆ ನೀಗಿಸಲು ಹೆಚ್ಚುವರಿ 10 ಟನ್ ಮರಳು ಉತ್ಪಾದನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ನೋಂದಣಿ ಪ್ರಕ್ರಿಯೆ ವಿಳಂಬಕ್ಕೆ ಡಿಸೆಂಬರ್ ವೇಳೆಗೆ ಪರಿಹಾರ:

ಕಾವೇರಿ ತಂತ್ರಾಂಶದ ಮೇಲೆ ಒತ್ತಡ ಹೆಚ್ಚಿರುವ ಕಾರಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದು, ಡಿಸೆಂಬರ್ ವೇಳೆಗೆ ಹೊಸ ತಂತ್ರಾಂಶದ ಮೂಲಕ ಸಮಸ್ಯೆಯನ್ನು ಸರಿಪಡಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದದಲ್ಲಿ‌ ಸದಸ್ಯ ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ವಿಳಂಬ ಕುರಿತು ಗಮನಿಸಲಾಗುತ್ತಿದೆ. ಕಾವೇರಿ ಸಾಫ್ಟ್​ವೇರ್​ಗೆ ಲೋಡ್ ಹೆಚ್ಚಾಗಿದೆ. ಬೇರೆ ಬೇರೆ ಇಲಾಖೆ ವೆಬ್​ಗಳನ್ನು ಇದೇ ಸಾಫ್ಟ್​ವೇರ್​ಗೆ ಜೋಡಿಸಿರುವ ಕಾರಣ ಲೋಡ್ ಹೆಚ್ಚಾಗಿದೆ. ಹಾಗಾಗಿ ಬೇರೆ ಸಾಫ್ಟ್​ವೇರ್ ಸಿದ್ಧಪಡಿಸುವಂತೆ ಇಲಾಖೆಗೆ ಸೂಚಿಸಲಾಗಿದೆ. ಈಗಾಗಲೇ ಹೊಸ ಸಾಫ್ಟ್​ವೇರ್ ಸಿದ್ಧಪಡಿಸಲಾಗುತ್ತಿದೆ. ಡಿಸೆಂಬರ್​ಗೆ ಹೊಸ ಸಾಫ್ಟ್‌ವೇರ್ ಸಿದ್ಧವಾಗಲಿದೆ ಎಂದರು.

2014 ರಿಂದ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಯುಪಿಎಸ್ ,ಬ್ಯಾಟರಿಗೆ ಏಳು ವರ್ಷವಾಗಿದೆ,ಸ್ವಲ್ಪ ವ್ಯತ್ಯಾಸವಾದರೂ ಡೇಟಾಬೇಸ್ ಕ್ರ್ಯಾಷ್ ಆಗಬಹುದು, ಈ ಎಲ್ಲಾ ಕಾರಣಕ್ಕಾಗಿ 12 ಕೋಟಿ ಹಣ ಬಿಡುಗಡೆ ಮಾಡಲಾಗಿದೆ, ಬ್ಯಾಟರಿ ತರಿಸಲು ಸೂಚಿಸಿದ್ದೇನೆ, ಡಿಸೆಂಬರ್ ನಂತರ ಯಾವುದೇ ರೀತಿಯ ಸಮಸ್ಯೆ ಆಗಲ್ಲ ಎಂದು ಭರವಸೆ ನೀಡಿದರು.

ತಂತ್ರಾಂಶ ಬಳಸುವ ಇಲಾಖೆ ಸಿಬ್ಬಂದಿಗೆ ಕಾವೇರಿ ತಂತ್ರಾಂಶ,‌ಗಣಕೀಕೃತ ವ್ಯವಸ್ಥೆ ಕುರಿತು ತರಬೇತಿ ನೀಡಲಾಗುತ್ತದೆ, ತಂಡ ತಂಡವಾಗಿ ತರಬೇತಿ ನೀಡಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.