ETV Bharat / state

ಮೇಲುಕೋಟೆಯಲ್ಲಿ ನನ್ನ ಸೋಲಿಗೆ ಸುಮಲತಾ ಕಾರಣ: ಪರಾಜಿತ ಅಭ್ಯರ್ಥಿ ಇಂದ್ರೇಶ್ ಆರೋಪ

author img

By

Published : May 23, 2023, 5:24 PM IST

Updated : May 23, 2023, 7:11 PM IST

defeat-for-bjp-due-to-unethical-support-of-sumalata-bjpdefeated-candidate-indresh
ಸುಮಲತಾ ಅನೈತಿಕ ಬೆಂಬಲದಿಂದ ಬಿಜೆಪಿಗೆ ಸೋಲು: ಬಿಜೆಪಿ ಪರಾಜಿತ ಅಭ್ಯರ್ಥಿ ಇಂದ್ರೇಶ್

ಮೇಲುಕೋಟೆಯಲ್ಲಿ ತಾನು ಸೋಲಲು ಸಂಸದೆ ಸುಮಲತಾ ಅವರು ಕಾರಣ ಡಾ. ಇಂದ್ರೇಶ್ ಅವರು ಆರೋಪಿಸಿದ್ದಾರೆ.

ಬಿಜೆಪಿ ಪರಾಜಿತ ಅಭ್ಯರ್ಥಿ ಇಂದ್ರೇಶ್ ಆರೋಪ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್​ ಅವರ ಅನೈತಿಕ ಬೆಂಬಲದಿಂದಾಗಿ ಮೇಲುಕೋಟೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ವಿರುದ್ಧ ಮೇಲುಕೋಟೆ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಇಂದ್ರೇಶ್ ಗಂಭೀರ ಆರೋಪ ಮಾಡಿದ್ದಾರೆ.

ಪಾಂಡವಪುರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂಟಲಿಜೆನ್ಸ್ ರಿಪೋರ್ಟ್ ಪ್ರಕಾರ ನನಗೆ 38 ಸಾವಿರ ಮತಗಳು ಬರುತ್ತದೆ ಎಂಬ ಮಾಹಿತಿ ಇತ್ತು. ಆದರೆ ಸುಮಲತಾ ಅವರು ರೈತ ಸಂಘದ ಅಭ್ಯರ್ಥಿ ದರ್ಶನ ಪುಟ್ಟಣ್ಣಯ್ಯ ಗೆಲ್ಲಬೇಕು ಎಂದು ಹೇಳಿಕೆ ಕೊಟ್ಟ ಬಳಿಕ ಕ್ಷೇತ್ರದಲ್ಲಿ ವಿಚಿತ್ರ ಬದಲಾವಣೆ ಆಗಿದ್ದನ್ನು ನಾನು ನೋಡಿದ್ದೇನೆ. ಎಲ್ಲಿ ಪುಟ್ಟರಾಜು ಮತ್ತೆ ಗೆಲ್ತಾರೋ, ಜೆಡಿಎಸ್ ಮತ್ತೆ ಗೆಲ್ಲುತ್ತೋ ಅನ್ನೊ ಭಯದಿಂದ ವೋಟ್​​ನ ಪ್ರಮಾಣ ನನಗೆ ಕಡಿಮೆ ಆಗಿದೆ. ಕ್ಷೇತ್ರದ ಜನರು ನನ್ನ ಬಳಿಯೇ ನೇರವಾಗಿ ಬಂದು ಈ ಬಾರಿ ದರ್ಶನ್ ಪುಟ್ಟಣ್ಣಯ್ಯಗೆ ವೋಟ್​​ ಹಾಕುತ್ತೇವೆ ದಯಮಾಡಿ ಕ್ಷಮಿಸಿ ಎಂದು ಹೇಳಿದ್ದರು ಅಂದರು.

ಸುಮಲತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲ ಎಂದು ಹೇಳಿದ್ರು. ನಂತರ ದರ್ಶನ್ ಪುಟ್ಟಣ್ಣಯ್ಯ ಗೆಲ್ಲಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಅವರ ಹೇಳಿಕೆಗೆ ನನ್ನ ಧಿಕ್ಕಾರ ಇದೆ. ಮುಂದಿನ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಸುಮಲತಾ ಮಾಡಿದ ಕೆಲಸವನ್ನ ನಮ್ಮ ಕಾರ್ಯಕರ್ತರು ಕೂಡ ಒಪ್ಪಲ್ಲ, ನಾನು ಕೂಡ ಒಪ್ಪಲ್ಲ. ಅವರು ಋಣ ತೀರಿಸುವ ಕೆಲಸ ಮಾಡೋದಾಗಿದ್ದರೆ ಒಂದು ಪಕ್ಷಕ್ಕೆ ಬಂದ ಮೇಲೆ ಇನ್ನೊಂದು ಪಕ್ಷದ ಅಭ್ಯರ್ಥಿ ಪರ ಹೇಳಿಕೆ ಕೊಡೋದು ಖಂಡಿತ ತಪ್ಪು. ಇದನ್ನ ನಾನು ಖಂಡಿಸುತ್ತೇನೆ. ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸುತ್ತೇನೆ ಎಂದು ಪರಾಜಿತ ಅಭ್ಯರ್ಥಿ ಡಾ. ಇಂದ್ರೇಶ್​​ ಅವರು ಸಂಸದೆ ಸುಮಲತಾ ವಿರುದ್ಧ ಕಿಡಿಕಾರಿದರು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ, ಶತಾಯಗತಾಯ ಕನಿಷ್ಠ 4 ರಿಂದ 5 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಉತ್ತರ ಪ್ರದೇಶದ ಸಿಎಂ ಯೋಗಿ ಹಾಗೂ ಸಂಸದೆ ಸುಮಲತಾ ಸೇರಿದಂತೆ ಸ್ಟಾರ್ ಪ್ರಚಾರಕರನ್ನ ಕರೆಸಿ ಸಾಲು ಸಾಲು ಬೃಹತ್ ಸಮಾವೇಶ, ರೋಡ್ ಶೋ ನಡೆಸಿ ಹೆಚ್ಚಿನ ಮತಗಳನ್ನು ಸೆಳೆಯಲು ತಂತ್ರಗಾರಿಕೆಯನ್ನು ರೂಪಿಸಿತ್ತು. ಆದರೆ ಮಂಡ್ಯದಲ್ಲಿ ದೆಹಲಿ ದೊರೆಗಳ ತಂತ್ರಗಾರಿಕೆಗೆ ಸಕ್ಕರೆ ನಾಡಿನ ಮತದಾರರು ಮನ್ನಣೆ ನೀಡಿರಲಿಲ್ಲ.

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್, ಮದ್ದೂರು ಉದಯ್ ಗೌಡ, ಮಳವಳ್ಳಿ ಪಿಎಂ ನರೇಂದ್ರ ಸ್ವಾಮಿ, ನಾಗಮಂಗಲ ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ ರಮೇಶ್ ಬಾಬು ಗೆದ್ದರೇ, ಕೆ. ಆರ್. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್. ಟಿ. ಮಂಜು, ಹಾಗೂ ಮೇಲುಕೋಟೆ ಕ್ಷೇತ್ರದಲ್ಲಿ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆಲುವು ಸಾಧಿಸಿದ್ದರು. ಮಂಡ್ಯದಲ್ಲಿರುವ 7 ಕ್ಷೇತ್ರದಲ್ಲಿ ಕಾಂಗ್ರೆಸ್​​ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: ಸರಳತೆ ಮೆರೆದ ಮಂಡ್ಯ ಮಣ್ಣಿನ ಮಗ.. ಪದಗ್ರಹಣ ಸಮಾರಂಭಕ್ಕೆ ಸಾಮಾನ್ಯ ಬೋಗಿಯಲ್ಲಿ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

Last Updated :May 23, 2023, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.