ಕೊಪ್ಪಳ : ಪರಿಸರಕ್ಕೆ ಹಾನಿಯಾಗುವ ಪಿಒಪಿ, ಸಿಮೆಂಟ್ನಿಂದ ತಯಾರಿಸಿದ ಗಣಪತಿ ಬದಲು ಮಣ್ಣಿನ ಗಣಪತಿ ಬಳಸಿ ಎಂದು ಬಹಳ ಹಿಂದಿನಿಂದಲೂ ಪರಿಸರವಾದಿಗಳು ಹೇಳುತ್ತಲೇ ಇದ್ದಾರೆ. ಪಿಒಪಿಯಿಂದ ತಯಾರಿಸಿದ ವಿಗ್ರಹಗಳು ಬಹಳ ಆಕರ್ಷಕವಾಗಿರುವುದರಿಂದ ಜನರೂ ಅವುಗಳನ್ನೇ ಪೂಜಿಸುತ್ತಿದ್ದರು. ಆದರೆ, ಕಳೆದ ಮೂರು ನಾಲ್ಕು ವರ್ಷಗಳಿಂದ ಮಣ್ಣಿನಿಂದ ತಯಾರಿಸಿದ ಗಣಪತಿ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕೊಪ್ಪಳದ ವಿಜಯ್ ಕುಮಾರ್ ವಸ್ತ್ರದ ಎಂಬ ಕಲಾವಿದರು ಬಾಂಬೆ ಕ್ಲೇ ಮಣ್ಣನ್ನು ತರಿಸಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ಬಾಂಬೆ ಕ್ಲೇ ಮಣ್ಣಿನಿಂದ ತಯಾರಿಸಿದ ಗಣೇಶದ ಮೂರ್ತಿಗಳು ನೋಡೋಕೆ ಥೇಟ್ ಪಿಒಪಿ ಗಣೇಶಗಳಂತೆಯೇ ಆಕರ್ಷಿತವಾಗಿರುತ್ತದೆ.
ಇದನ್ನೂ ಓದಿ: 'ಶರೀಫ'ರ ಆಶೀರ್ವಾದ 'ಗಣೇಶ' ಮೂರ್ತಿ: ಭಾವೈಕ್ಯತೆ ಸಾರುತ್ತಿದೆ ಚಿತ್ರಗಾರ ಕುಟುಂಬದ ಕಲೆ
ಆ ಮಣ್ಣು ಕೂಡ ನೋಡುವುದಕ್ಕೆ ಪಿಒಪಿಯಂತೆಯೇ ಕಾಣುತ್ತದೆ. ಆದರೆ, ಅದು ಅಪ್ಪಟ ಮಣ್ಣು. ಈ ಮಣ್ಣನ್ನು ಬಳಸಿಕೊಂಡು ವಿಜಯ್ ಕುಮಾರ್ ಅದ್ಭುತವಾಗಿ ವಿಗ್ರಹಗಳನ್ನು ತಯಾರಿಸುತ್ತಾರೆ. ಈ ಮಣ್ಣು ರಾಜಸ್ತಾನದ್ದೆಂದು ಹೇಳುತ್ತಾರೆ. ಆದರೆ, ವಿಜಯ್ ಕುಮಾರ್ ಮಹಾರಾಷ್ಟ್ರದ ಸೊಲ್ಲಾಪುರದಿಂದ ಮಣ್ಣನ್ನು ತರಿಸಿ ವಿಗ್ರಹ ತಯಾರಿಸುತ್ತಾರೆ. ಈ ಮಣ್ಣಿನಿಂದ ತಯಾರಿಸಿದ ವಿಗ್ರಹಗಳು ಬಹಳ ದುಬಾರಿಯಾಗಿರುತ್ತವೆ.