ETV Bharat / state

ನಾನು ಕಿಂಗೋ, ಕಿಂಗ್ ಮೇಕರೋ ಸ್ವಲ್ಪ ಕಾದು ನೋಡಿ : ಜನಾರ್ದನ ರೆಡ್ಡಿ

author img

By

Published : Mar 4, 2023, 8:46 PM IST

Updated : Mar 4, 2023, 9:05 PM IST

krpp-party-president-janardhan-reddy-spoke-at-gangavathi
ನಾನು ಕಿಂಗೋ, ಕಿಂಗ್ ಮೇಕರೋ ಸ್ವಲ್ಪ ಕಾದು ನೋಡಿ : ಜನಾರ್ದನ ರೆಡ್ಡಿ

ವಿಧಾನಸಭೆ ಚುನಾವಣೆ 2023 - ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಪಕ್ಷ ಸಂಘಟನೆ - ಯುವಜನರಿಗೆ,ಮಹಿಳೆಯರಿಗೆ ಪ್ರಣಾಳಿಕೆ ಬಿಡುಗಡೆ

ನಾನು ಕಿಂಗೋ, ಕಿಂಗ್ ಮೇಕರೋ ಸ್ವಲ್ಪ ಕಾದು ನೋಡಿ : ಜನಾರ್ದನ ರೆಡ್ಡಿ

ಗಂಗಾವತಿ : ಮುಂದಿನ ವಿಧಾನಸಭೆ ಚುನಾವಣೆಯ ಬಳಿಕ ನಾನು ಕಿಂಗ್ ಆಗ್ತೀನೊ ಅಥವಾ ಕಿಂಗ್ ಮೇಕರ್ ಆಗ್ತಿನೋ ಎಂಬುವುದನ್ನು ನೀವೇ ಕಾಯ್ದು ನೋಡಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಹೇಳಿದರು. ನಗರದ ಕನಕಗಿರಿ ರಸ್ತೆಯಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿನ ಪ್ರತಿಯೊಂದನ್ನು ಅನುಷ್ಠಾನಕ್ಕೆ ತರುತ್ತೇನೆ. ರಾಜ್ಯದಲ್ಲಿ ನಮ್ಮ ಸರ್ಕಾರ ರಚನೆಯಾಗದಿದ್ದರೂ ಅಧಿಕಾರ ನಡೆಸುವ ಪಕ್ಷಕ್ಕೆ ಬೆಂಬಲ ನೀಡಿಯಾದರೂ ನಮ್ಮ ಪ್ರಣಾಳಿಕೆ ಜಾರಿಗೆ ಯತ್ನಿಸುತ್ತೇನೆ. ನಾನು ಕಿಂಗ್ ಆಗದಿದ್ದರೂ ಪರ್ವಾಗಿಲ್ಲ. ಕಿಂಗ್ ಮೇಕರ್ ಆಗುತ್ತೇನೆ ಎಂದು ರೆಡ್ಡಿ ಹೇಳಿದರು.

ಇಡೀ ರಾಜ್ಯಾದ್ಯಂತ 224 ಕ್ಷೇತ್ರಗಳಿಗೆ ನನ್ನ ಪಕ್ಷದ ಅಭ್ಯರ್ಥಿಗಳನ್ನು ಹಾಕಿ ನಾನು 113ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇನೆ ಎಂದು ಹೇಳುತ್ತಿಲ್ಲ. ಬದಲಿಗೆ ನನ್ನ ಪ್ರಭಾವ ಇರುವ, ಈಗಾಗಲೇ ನಾನು ಸಮೀಕ್ಷೆ ನಡೆಸಿದಂತೆ ಗೆಲುವಿನ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತಿದ್ದೇನೆ. ಈಗಾಗಲೇ 30ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮಗೊಂಡಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುವುದಾಗಿ ಹೇಳಿದರು.

ಯುವಜನರಿಗೆ, ಮಹಿಳೆಯರಿಗೆ ಪ್ರಣಾಳಿಕೆ ಬಿಡುಗಡೆ : ಈಗಾಗಲೇ ಪಕ್ಷದಿಂದ ರೈತರ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಈ ಪ್ರಣಾಳಿಕೆಯನ್ನು ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನೇ ಮಂಡಿಸಿದ್ದೆ. ಈ ಅಂಶಗಳನ್ನು ಕ್ಯಾಬಿನೆಟ್​​​ನಲ್ಲಿ ಚರ್ಚಿಸಿ ಅಂತಿಮ ಆದೇಶ ಕೈಗೊಳ್ಳಲಾಗಿತ್ತು. ಆದರೆ ಅದು ಜಾರಿಯಾಗಿರಲಿಲ್ಲ. ಅವುಗಳನ್ನೇ ನನ್ನ ಪಕ್ಷದ ಪ್ರಣಾಳಿಕೆಯನ್ನಾಗಿಸಿದ್ದೇನೆ ಎಂದರು.

ಮಾ.6ರಂದು ಯುವಜನರಿಗಾಗಿ ಪಕ್ಷದಿಂದ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದೇನೆ. ವೀರ ಸಂಗೊಳ್ಳಿ ರಾಯಣ್ಣ ಯುವ ಸಬಲೀಕರಣ ಎಂಬ ಯೋಜನೆಯಡಿ ಯುವಕರಿಗೆ ಹತ್ತಾರು ಯೋಜನೆ ಘೋಷಣೆ ಮಾಡಲಿದ್ದೇನೆ. ಡಾ.ಬಿ.ಆರ್. ಅಂಬೇಡ್ಕರ್, ಓನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಮೊದಲಾದ ಮಹಾನೀಯರ ಹೆಸರಲ್ಲಿ ಸಮಾಜದ ಎಲ್ಲಾ ವರ್ಗದವರಿಗೆ ಉಪಯುಕ್ತವಾಗುವ ದೃಷ್ಟಿಯಿಂದ ಹತ್ತಾರು ಉಪ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇನೆ ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಪತ್ನಿ ಲಕ್ಷ್ಮಿಅರುಣಾ ಅವರನ್ನು ಕಣಕ್ಕಿಳಿಸುವ ಮೂಲಕ ತಮ್ಮ ಸಹೋದರ ವಿರುದ್ಧವೇ ಸಮರ ಸಾರಿದ್ದರ ಬಗ್ಗೆ ಅಸಮಾಧಾನಗೊಂಡ ಶಾಸಕ ಸೋಮಶೇಖರರೆಡ್ಡಿ ಬಿಜೆಪಿ ಹೈಕಮಾಂಡ್ ಗಮನಕ್ಕೆ ತಂದಿರುವ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ, ಚುನಾವಣೆಗೆ ಇನ್ನು 70 ದಿನವಿದೆ. ಏನೆಲ್ಲಾ ಆಗಬಹುದು ಕಾದು ನೋಡಿ ಎಂದು ಪ್ರತಿಕ್ರಿಯಿಸಿದರು.

ನಿರೀಕ್ಷೆಗೂ ಮೀರಿ ಸ್ಪಂದನೆ : ಗ್ರಾಮೀಣ ಭಾಗದಲ್ಲಿ ಈಗಾಗಲೇ 44 ಗ್ರಾಮಗಳಲ್ಲಿ ಸಂಚಾರ ನಡೆಸಿ ಪಕ್ಷದ ಪ್ರಚಾರ ಕೈಗೊಂಡಿದ್ದೇನೆ. ನನ್ನ ನಿರೀಕ್ಷೆಗೂ ಮೀರಿ ಜನ ಸ್ಪಂದಿಸುತ್ತಿದ್ದಾರೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಂಬ ಪಕ್ಷ ಭೇದವಿಲ್ಲದೇ ನನ್ನನ್ನು ಸ್ವಾಗತಿಸುತ್ತಿದ್ದಾರೆ. ಮಾನಸಿಕವಾಗಿ ಅವರೆಲ್ಲಾ ನನ್ನೊಂದಿಗೆ ಇದ್ದಾರೆ. ಇದು ಮಾನಸಿಕವಾಗಿ ನನಗೆ ಶಕ್ತಿ ನೀಡಿದ್ದು, ಬಾಕಿರುವ 40 ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತೇನೆ. ನಗರದಲ್ಲಿ ಈಗಾಗಲೇ ಒಂದು ಹಂತದ ಪ್ರಕ್ಷದ ಪ್ರಚಾರ ಕಾರ್ಯ ಮುಗಿದಿದ್ದು,ಎರಡನೇ ಹಂತದ ಪ್ರಚಾರ ಆರಂಭಿಸುತ್ತೇನೆ. ಶೀಘ್ರದಲ್ಲೇ ಹಲವು ಪಕ್ಷಗಳ ನಾಯಕರು ಕೆಆರ್​​ಪಿಪಿಗೆ ಸೇರಲಿದ್ದಾರೆ ಎಂದು ನುಡಿದರು.

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಲಸಿಗರಿಗೆ ಮಣೆ ಹಾಕಿವೆ. ಆದರೆ ಆ ಕ್ಷೇತ್ರದ ಜನರ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಾನು ನನ್ನ ಪಕ್ಷದಿಂದ ಸ್ಥಳೀಯ ಅಭ್ಯರ್ಥಿಗೆ ಮೊದಲ ಆದ್ಯತೆ ಕೊಡಬೇಕು ಎಂದು ನಿರ್ಧರಿಸಿದ್ದೆ. ಎರಡು ತಿಂಗಳುಗಳ ಕಾಲ ಸೂಕ್ತ ಅಭ್ಯರ್ಥಿಗೆ ಹುಡುಕಾಟ ನಡೆಸಲಾಯಿತು. ಆದರೆ, ಅಲ್ಲಿನ ಕೆಲವರು ಆ ಎರಡು ಪಕ್ಷಗಳ ನಾಯಕರ ಆಡಳಿತಕ್ಕೆ ಹೆದರುತ್ತಿರುವ ಪರಿಣಾಮ ಅನಿವಾರ್ಯವಾಗಿ ಹೊರಗಿನ ಅಭ್ಯರ್ಥಿಯನ್ನು ಹಾಕಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪಕ್ಷದ ನಾನಾ ಘಟಕಕ್ಕೆ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು.

ಇದನ್ನೂ ಓದಿ : 'ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ನನ್ನದು': ಜನಾರ್ದನ ರೆಡ್ಡಿ ಭರವಸೆ

Last Updated :Mar 4, 2023, 9:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.