ETV Bharat / state

ಬಿಜೆಪಿಗೆ ಐಟಿ, ಇಡಿ, ಸಿಬಿಐ ಬಿಟ್ರೆ ಬೇರೇನೂ ಉಳಿದಿಲ್ಲ: ಸಚಿವ ಶಿವರಾಜ ತಂಗಡಗಿ

author img

By ETV Bharat Karnataka Team

Published : Oct 13, 2023, 6:11 PM IST

minister shivraj thangadagi
ಸಚಿವ ಶಿವರಾಜ ತಂಗಡಗಿ

ಐಟಿ ದಾಳಿಯಲ್ಲಿ 42 ಕೋಟಿ ರೂಪಾಯಿ ಸಿಕ್ಕಿರುವುದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಸಚಿವ ಶಿವರಾಜ ತಂಗಡಗಿ ಹೇಳಿಕೆ

ಕೊಪ್ಪಳ: ಬಿಜೆಪಿಯವರಿಗೆ ಸದ್ಯ ಉಳಿದಿರುವುದು ಐಟಿ, ಇಡಿ, ಸಿಬಿಐ. ಅದು ಬಿಟ್ರೆ ಬೇರೇನೂ ಇಲ್ಲ. ಇವುಗಳನ್ನೇ ಬಳಸಿಕೊಂಡು ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ದೂರಿದರು. ಕೊಪ್ಪಳದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ನಾಯಕರ ಮನೆ ಮೇಲೆ ದಾಳಿಯಾಗುತ್ತಿಲ್ಲ. ಯಾಕೆ ಬಿಜೆಪಿಯವರ ಮನೆಯಲ್ಲಿ ಏನೂ ಇಲ್ಲವೇ? ಹಿಂದಿನ ಸರ್ಕಾರದಲ್ಲಿ ಅವರು ಏನೇನೆಲ್ಲಾ ತಿಂದಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಎಎಪಿ, ಕರ್ನಾಟಕದಲ್ಲಿ ಕಾಂಗ್ರೆಸ್, ಆಂಧ್ರದಲ್ಲಿ ಅವರಿಗೆ ಚಂದ್ರಬಾಬು ನಾಯ್ಡು ಮಾತ್ರ ಕಾಣುತ್ತಾರೆ. ಇನ್ನುಳಿದ ಬಿಜೆಪಿ ನಾಯಕರು ಯಾರೂ ಐಟಿ, ಇಡಿಯವರಿಗೆ ಕಾಣಿಸುತ್ತಿಲ್ಲ. ಬಿಜೆಪಿಯವರ ಮನೆ ಮೇಲೆ ಯಾಕೆ ದಾಳಿ ಆಗೋದಿಲ್ಲ ಎಂದು ಪ್ರಶ್ನಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯವರಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.

ಕಾಂಗ್ರೆಸ್ ಎಟಿಎಂ ಸರ್ಕಾರ ಅನ್ನೋದಕ್ಕೆ ಬಿಜೆಪಿಯವರು ಪ್ರೂಫ್ ನೀಡಲಿ. ನಾವು ಅವರ ಮೇಲೆ ದಾಖಲೆಸಮೇತ ಆಪಾದನೆ ಮಾಡಿದ್ದೇವೆ. ನಮ್ಮ ತಪ್ಪಿದ್ದರೆ ಹೇಳಲಿ, ತಿದ್ದಿಕೊಳ್ಳುತ್ತೇವೆ ಎಂದರು. ಸರ್ಕಾರಕ್ಕೆ ಟ್ಯಾಕ್ಸ್ ವಂಚನೆ ಮಾಡುವವರ ಮೇಲೆ ಐಟಿ ದಾಳಿಯಾಗಲಿ. 42 ಕೋಟಿ ರೂ ಸಿಕ್ಕಿರೋದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು ಎಂದು ಹೇಳಿದರು.

ರಾಜ್ಯದಲ್ಲಿ ವಿದ್ಯುತ್ ಅಭಾವವಿದೆ. ಹೀಗಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆಯೇ ವಿನಃ ಬೇರೇನೂ ಕಾರಣವಿಲ್ಲ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ಮಟ್ಕಾ, ಇಸ್ಪೀಟ್ ಆಟವನ್ನು ಬಂದ್ ಮಾಡಿದ್ದೇವೆ. ಕೆಲವರು ಗುತ್ತಿಗೆ ಪಡೆದಿದ್ದು, ನ್ಯಾಯಯುತವಾಗಿ ಮರಳು ಸಾಗಣೆ ಮಾಡಲು ಕೋರಿದ್ದಾರೆ. ಅಂತಹವರಿಗೆ ಮಾತ್ರ ಪರವಾನಗಿ ನೀಡಲಾಗಿದೆ ಎಂದು ತಿಳಿಸಿದರು.

ಕೊಪ್ಪಳ ಉಸ್ತುವಾರಿ ಸಚಿವ ಮರಳು ಮಾಫಿಯಾದಲ್ಲಿ ಮುಳುಗಿದ್ದಾರೆ ಎನ್ನುವ ಮುಖ್ಯಮಂತ್ರಿ ಚಂದ್ರು ಆರೋಪಕ್ಕೆ ಪ್ರತ್ರಿಕ್ರಿಯಿಸಿ, ನಾನು ಇಲ್ಲಿಯವರೆಗೂ ಯಾವುದೇ ಮಾಫಿಯಾದಲ್ಲಿ ಭಾಗಿಯಾಗಿಲ್ಲ. ನನ್ನ ಹೆಸರಿಗೆ ಜಿಲ್ಲೆಯಲ್ಲಿ ಒಂದೇ ಒಂದು ಮರಳು ಯಾರ್ಡ್​ ಕೂಡಾ ಇಲ್ಲ. ಅವರಿಗೆ ಮಾಹಿತಿ ಕೊರತೆ ಇದೆ. ಹಾಗಾಗಿ ಏನೇನೋ ಮಾತನಾಡಿದ್ದಾರೆ. ರಾಜ್ಯದಲ್ಲಿ ನಿಗಮ, ಮಂಡಳಿಗಳಲ್ಲಿ ಕಳೆದೊಂದು ವರ್ಷದಿಂದ ಏನು ನಡೆದಿದೆ ಎನ್ನುವುದು ಚಂದ್ರು ಅವರಿಗೆ ಕಾಣಿಸಿಲ್ಲ. ನಾವು ಬಂದು ಈಗ ಎರಡು ತಿಂಗಳಾಗಿದೆ. ಈಗ ನಿಗಮ ಮಂಡಳಿ ನೆನಪಾಗಿವೆ. ಆದಷ್ಟು ಬೇಗ ಎಲ್ಲವೂ ಬಗೆಹರಿಯಲಿವೆ ಎಂದರು.

ಇದನ್ನೂ ಓದಿ: ರಾಜಕೀಯ ಉದ್ದೇಶವಿಲ್ಲದೆ ಐಟಿ ದಾಳಿ ನಡೆಯುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.