ಗಂಗಾವತಿ (ಕೊಪ್ಪಳ) : ದೇಶದ ವಿಚಾರದಲ್ಲಿ ಏನಾದರೂ ನಿರ್ಣಯಗಳನ್ನು ಕೈಗೊಳ್ಳಬೇಕಿದ್ದಲ್ಲಿ ಎಂಥಹದ್ದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಂಡಿಗೆ ಇರುವ ಏಕೈಕ ಗಂಡು ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ. ಅದೇ ರೀತಿ ರಾಜ್ಯದಲ್ಲಿ ಗಂಡಸ್ತನ ಇರುವ ನಾಯಕ ಎಂದರೆ ಅದು ರಾಜಾಹುಲಿ ಯಡಿಯೂರಪ್ಪ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ತಾಲೂಕಿನ ಮರಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಬಿಜೆಪಿಯ ಬಳ್ಳಾರಿ ವಿಭಾಗದ ವ್ಯಾಪ್ತಿಯ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಡಿಜಿಟಲ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ ಕಾಂಗ್ರೆಸ್ ನಾಯಕರು ಒಬಾಮಾ ಬಳಿ ಹೋಗಿ ಅಳುತ್ತಿದ್ದರು- ಆನಂದ್ ಸಿಂಗ್.. ಅಮ ಪಾಕಿಸ್ತಾನ ನಮ್ಮ ಮೇಲೆ ಏನಾದರೂ ದಾಳಿ ಮಾಡಿದರೆ ಅಂದಿನ ಕಾಂಗ್ರೆಸ್ ಸರ್ಕಾರದ ನಾಯಕರು ಆಗಿನ ದೊಡ್ಡಣ್ಣ ಒಬಾಮಾ ಬಳಿ ಹೋಗಿ ಅಳ್ತಾ ಇದ್ದರು. ಆದರೆ ಈಗ ಪಾಕಿಸ್ತಾನ ಏನಾದರೂ ದಾಳಿ ಮಾಡಿದರೆ ಅದಕ್ಕೆ ಎರಡು ಪಟ್ಟು ದಾಳಿ ಮಾಡುವ ಶಕ್ತಿ ನಮಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಪಾಕಿಸ್ತಾನದವರು ಕೆಳಗಿನಿಂದ ನಮ್ಮ ಮೇಲೆ ಅಟ್ಯಾಕ್ ಮಾಡಿದರೆ, ನಾವು ಮೇಲಿನಿಂದ ಸರ್ಜಿಕಲ್ ಸ್ಟ್ರೈಕ್ ಮಾಡುವ ಶಕ್ತಿ ಸಂಪಾದಿಸಿದ್ದೇವೆ. ಪ್ರಧಾನಿ ಮೋದಿ ಇಡೀ ದೇಶವನ್ನು ಹುರಿದುಂಬಿಸುವ ರೀತಿಯಲ್ಲಿ ಗುಂಡಿಗೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಆನಂದ್ ಸಿಂಗ್ ಹೇಳಿದರು.
ಇನ್ನು ರಾಜ್ಯ ರಾಜಕಾರಣದ ವಿಚಾರದಲ್ಲಿ ಮಾತನಾಡಬೇಕೆಂದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಏಕೈಕ ಗಂಡಸ್ತನದ ರಾಜಾಕಾರಣಿ ಎಂದರೆ ಅದು ಕೇವಲ ರಾಜಾಹುಲಿ ಬಿ.ಎಸ್. ಯಡಿಯೂರಪ್ಪ ಅವರು ಮಾತ್ರ. ಪಟ್ಟಣ ಪಂಚಾಯಿತಿಯಿಂದ ಪುರಸಭೆ, ಪುರಸಭೆಯಿಂದ ನಗರ ಸಭೆ, ನಗರಸಭೆಯಿಂದ ಮಹಾನಗರ ಪಾಲಿಕೆ ಮಾಡುವುದು ಕಷ್ಟ. ಅದು ಅಷ್ಟು ಸುಲಭದ ಕೆಲಸವಲ್ಲ. ಯಾಕೆಂದರೆ ಇದರಿಂದ ರಾಜ್ಯದ ಮೇಲೆ ಆರ್ಥಿಕತೆ ಮೇಲೆ ಹೊರೆ ಹೆಚ್ಚಾಗುತ್ತದೆ. ಹೀಗಾಗಿ ಅಷ್ಟು ಸುಲಭವಾಗಿ ತೆಗೆದುಕೊಳ್ಳುವ ತೀರ್ಮಾನಗಳಲ್ಲ. ಆದರೆ ಯಡಿಯೂರಪ್ಪನವರು ಚುನಾವಣೆ ಸಮಯದಲ್ಲಿ ವಿಜಯನಗರ ಜಿಲ್ಲೆ ಮಾಡುವುದಾಗಿ ಮಾತು ಕೊಟ್ಟಿದ್ದರು ಎಂದು ಆನಂದ್ ಸಿಂಗ್ ಹೇಳಿದರು.
ಯಡಿಯೂರಪ್ಪನವರನ್ನು ಯಾರೂ ಮರೆಯಬಾರದು : ವಿಜಯನಗರ ಸಾಮ್ರಾಜ್ಯ ಎಂದು ಹೆಸರು ಮಾಡಿದ್ದ ವಿಜಯನಗರ, ಬಳ್ಳಾರಿ ಜಿಲ್ಲೆ ನಕ್ಷೆಯಲ್ಲಿ ಎಲ್ಲೋ ಒಂದು ಮೂಲೆಯಲ್ಲಿತ್ತು. ಅ ಮೂಲೆಯಲ್ಲಿದ್ದ ವಿಜಯನಗರ ನಕ್ಷೆಯನ್ನು ತೆಗೆದು, ಹೊಸ ನಕ್ಷೆಯ ಸೃಷ್ಟಿಗೆ ಕಾರಣರಾದ ಯಡಿಯೂರಪ್ಪನವರನ್ನು ಯಾರೂ ಮರೆಯಬಾರದು. ಆನಂದ್ ಸಿಂಗ್ಗೆ ಮಾತು ಕೊಟ್ಟಿದ್ದೀನಿ ಎಂಬ ಉದ್ದೇಶದಿಂದ ಅವರು ಈ ತೀರ್ಮಾನ ಮಾಡಲಿಲ್ಲ. ಅವರಿಗೆ ಕಲ್ಪಲೆ ಮತ್ತು ವಿಚಾರ ಇತ್ತು, ಆನಂದ್ ಸಿಂಗ್ ಪಟ್ಟು ಹಿಡಿದಿದ್ದಕ್ಕೆ ಜಿಲ್ಲೆ ರಚನೆಯಾಯಿತು ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟನೆ ನೀಡಿದರು.
ಗುಂಡಿಗೆ ಇರುವಂತಹ ಗಂಡು ಬಿ ಎಸ್ ಯಡಿಯೂರಪ್ಪನವರು - ಆನಂದ್ ಸಿಂಗ್: ವಿಜಯನಗರ ಜಿಲ್ಲೆಯಾಗಬೇಕು ಎಂಬ ಅವರ ಕಲ್ಪನೆ ಏನಿತ್ತು. ಇಡೀ ವಿಶ್ವದಲ್ಲಿ ಅತಿದೊಡ್ಡ ಸಾಮ್ರಾಜ್ಯ ಎಂದರೆ ರೋಮ್ನ ನಂತರ ವಿಜಯನಗರ ಸಾಮ್ರಾಜ್ಯ. ಅದು ಹಿಂದೂ ಸಾಮ್ರಾಜ್ಯವಾಗಿದ್ದಕ್ಕೆ ನಾವು ಅದಕ್ಕೆ ಗೌರವಕೊಡಬೇಕು ಎಂಬ ಅಲೋಚನೆ ಇಟ್ಟುಕೊಂಡು ಬಳ್ಳಾರಿ ನಕ್ಷೆಯಿಂದ ವಿಜಯನಗರವನ್ನು ತೆಗೆದು ವಿಜಯನಗರ ಜಿಲ್ಲೆಯನ್ನು ರಚನೆ ಮಾಡಿದ ಗುಂಡಿಗೆ ಇರುವಂತಹ ಗಂಡು ಬಿ ಎಸ್ ಯಡಿಯೂರಪ್ಪ ಅವರು ಎಂದು ಬಿಎಸ್ವೈರನ್ನು ಆನಂದ್ ಸಿಂಗ್ ಹಾಡಿಹೊಗಳಿದರು.
ಆಡಳಿತ ಶಕ್ತಿ, ಸಮಸ್ಯೆಗಳನ್ನು ಎದುರಿಸುವ ಗುಂಡಿಗೆ ಆದರೆ ಅದೇ ಕಾಂಗ್ರೆಸ್ ರಾಜ್ಯ ಅಥವಾ ಕೇಂದ್ರದ ನಾಯಕರಲ್ಲಿ ಆಡಳಿತ ಮಾಡುವ ಶಕ್ತಿಯಾಗಲಿ, ಸಮಸ್ಯೆಗಳನ್ನು ಎದುರಿಸುವ ಗುಂಡಿಗೆಯೇ ಇಲ್ಲ. ಇನ್ನು ಗಂಡಸ್ತನ ಎಲ್ಲಿಂದ ಬರಬೇಕು ಎಂದು ಆನಂದ್ ಸಿಂಗ್ ಲೇವಡಿ ಮಾಡಿದರು.
ಕರ್ನಾಟಕದ ಚುನಾವಣೆಯ ಮೂಲಕ ಕಾಂಗ್ರೆಸ್ ಪಕ್ಷದ ಅಂತಿಮಯಾತ್ರೆ ನಡೆಯಲಿದೆ - ಹಾಲಪ್ಪ ಆಚಾರ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಕತೆ ಮುಗಿದು ಹೋಗಿದೆ. ಅವರಿಗೆ ಅಧಿಕಾರ ನಡೆಸುವ ವಾರಂಟಿ ಇಲ್ಲ. ಆದರೆ ಜನರಿಗೆ ಸುಳ್ಳಿನ ಗ್ಯಾರಂಟಿ ನೀಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೆಬ್ಬಾಗಿಲು ಆಗಿದ್ದು, ಮುಂದಿನ ದಿನಗಳಲ್ಲಿ ತಮಿಳುನಾಡು, ಕೇರಳ, ಆಂಧ್ರದಲ್ಲಿ ಬಿಜೆಪಿ ಅರಳಲಿದೆ. ಕರ್ನಾಟಕದ ಚುನಾವಣೆಯ ಮೂಲಕ ಕಾಂಗ್ರೆಸ್ ಪಕ್ಷದ ಅಂತಿಮಯಾತ್ರೆ ನಡೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ:ಚುನಾವಣೆ ಪ್ರಚಾರ ವಾಹನಕ್ಕೆ ಸ್ಮಶಾನದಲ್ಲಿ ಪೂಜೆ ನೆರವೇರಿಸಲಾಗುವುದು: ಸತೀಶ್ ಜಾರಕಿಹೊಳಿ