ಹಾಸನ:ನಾವು ಹಿಂಬಾಗಿಲ ರಾಜಕೀಯ ಮಾಡುತ್ತಿಲ್ಲ. ನೇರವಾಗಿ ಜನರ ಬಳಿ ಹೋಗಿ ಮತಯಾಚಿಸುತ್ತಿದ್ದೇವೆ’ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಭವಾನಿ ರೇವಣ್ಣ ಹೇಳಿದರು.
ನಗರದ ಜ್ಞಾನಕ್ಷಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು,‘ಶಾಸಕರ ಪತ್ನಿಯಾಗಿ ಹೇಗೆ ಇದ್ದೇನೋ, ಹಾಗೆಯೇ ಸಂಸದನ ತಾಯಿಯಾಗಿ ಇರುವೆ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಪ್ರಜ್ವಲ್ ಗೊತ್ತಿಲ್ಲದೆ ಏನಾದರೂ ಮಾತನಾಡಿದ್ದರೆ ಯಾರು ಅನ್ಯತಾ ಭಾವಿಸಬಾರದು. ಆತ, ತನ್ನ ತಂದೆ, ತಾತ, ಚಿಕ್ಕಪ್ಪರಂತೆ ಕೆಲಸ ಮಾಡುವ ಮಹತ್ವಕಾಂಕ್ಷೆ ಹೊಂದಿದ್ದಾನೆ’ ಎಂದು ತಿಳಿಸಿದರು.
ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಎಂಟು ವರ್ಷದ ಹಿಂದೆ ರಾಜಕಾರಣಕ್ಕೆ ಬಂದೆ. ದೇವೇಗೌಡರು ಮಹಿಳೆಯರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಸಣ್ಣ ಸಮುದಾಯ ಹೆಣ್ಣು ಮಕ್ಕಳಿಗೆ ರಾಜಕೀಯ ಶಕ್ತಿ ನೀಡಲಾಗುವುದು. ಮತಯಾಚನೆಗಾಗಿ ಮಹಿಳಾ ಸಮಾವೇಶ ನಡೆಸುತ್ತಿಲ್ಲ. ದೇಶದ ಭದ್ರತೆ ಮತ್ತು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲು ಸಮಾವೇಶ ನಡೆಸಲಾಗುತ್ತಿದೆ. ತಾಯಂದಿರ ಆಶೀರ್ವಾದ ಯುವಕರಿಗೆ ಇರಬೇಕು’ ಎಂದು ಹೇಳಿದರು.
ದಿವಂಗತ ಎಚ್.ಎಸ್.ಪ್ರಕಾಶ್ ಅವರ ಪತ್ನಿ ಲಲಿತಾ ಮಾತನಾಡಿ, ‘ಪತಿ ತೀರಿ ಹೋಗಿ ನಾಲ್ಕು ತಿಂಗಳಾಗಿದೆ. ಸಮಾವೇಶಕ್ಕೆ ಹೋಗುತ್ತೀಯಾ ಅಂಥ ಮಗ ಕೇಳಿದ. ಜೆಡಿಎಸ್ ನಮಗೆ ಎಲ್ಲವನ್ನು ಕೊಟ್ಟಿದೆ. ಹಾಗಾಗಿಸಮಾವೇಶಕ್ಕೆ ಬಂದಿದ್ದೇನೆ. ಪ್ರಜ್ವಲ್ ನನ್ನು ಅಧಿಕಮತಗಳಿಂದಗೆಲ್ಲಿಸಬೇಕು’ಎಂದು ಕಣ್ಣೀರಿಟ್ಟರು.
ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ‘ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಜಾರಿಗೆ ತಂದರು. ರಾಜ್ಯ ಸರ್ಕಾರ ₹ 42 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಕಡಿಮೆ ಬಡ್ಡಿಯಲ್ಲಿ ಮಹಿಳೆಯರಿಗೆ ಸಾಲ ನೀಡಲಾಗುತ್ತದೆ’ ಎಂದು ನುಡಿದರು.
ವೇದಿಕೆ ಮೇಲೆ ತೆನೆ ಹೊತ್ತು ನಿಂತಿದ್ದ ಜೆಡಿಎಸ್ ಮುಖಂಡರಾದ ಸಪ್ನ ಅವರು ಎಲ್ಲರ ಗಮನ ಸೆಳೆದರು. ಜಿಲ್ಲೆಯ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರೆಯರು, ಮುಖಂಡರು ಭಾಗವಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.