ETV Bharat / state

ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್ ಹಂಚಿಕೆ: ಮತಬೇಟೆ ಆರಂಭಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ

author img

By

Published : Mar 14, 2023, 4:25 PM IST

Siddaramaiah destributed Guarentee card
ಗ್ಯಾರೆಂಟಿ ಕಾರ್ಡ್​ ವಿತರಿಸಿದ ಸಿದ್ದರಾಮಯ್ಯ

ಚುನಾವಣೆ ಬಂತೆಂದು ತರಾತುರಿಯಲ್ಲಿ ಬೆಂಗಳೂರು ಮೈಸೂರು ಹೈವೇಯನ್ನು ಬಿಜೆಪಿಯವರು ಉದ್ಘಾಟನೆ ಮಾಡಿಸಿದ್ದಾರೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಗ್ಯಾರೆಂಟಿ ಕಾರ್ಡ್​ ವಿತರಿಸಿದ ಸಿದ್ದರಾಮಯ್ಯ

ದಾವಣಗೆರೆ: 2023ರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುವ ಮುನ್ನ ರಾಜಕೀಯ ಪಕ್ಷಗಳು ಮತಬೇಟೆ ಆರಂಭಿಸಿವೆ. ಬಿಜೆಪಿಯ ನಾಯಕರು ವಿಜಯ ಸಂಕಲ್ಪ ಯಾತ್ರೆ ಆರಂಬಿಸಿದ್ರೇ, ಇತ್ತಾ ಕೈ ಪಕ್ಷದ ನಾಯಕರು ಪ್ರಜಾಧ್ವನಿ ಯಾತ್ರೆ ಆರಂಭಿಸಿ ಮತಬೇಟೆಯಾಡ್ತಿದ್ದಾರೆ. ಸತತ ನಾಲ್ಕು ದಿನಗಳ ಕಾಲ ದಾವಣಗೆರೆ ಜಿಲ್ಲೆಯಲ್ಲೇ ಸುತ್ತು ಹಾಕಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಐದು ಮತ ಕ್ಷೇತ್ರಗಳಲ್ಲಿ ತಮ್ಮ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡು ಮತದಾರರನ್ನು ಸೆಳೆದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್​ಗಳನ್ನು ಮನೆಮನೆಗೆ ಭೇಟಿ ನೀಡಿ ವಿತರಿಸಿದರು.

ರಾಜ್ಯದಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಪಟ್ಟು ಹಿಡಿದಿರುವ ಕೈ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ವಿವಿಧ ಮತ ಕ್ಷೇತ್ರಗಳಿಗೆ ತೆರಳಿ ತಮ್ಮ ಸರ್ಕಾರಗಳ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಸೇಳೆಯುತ್ತಿದ್ದಾರೆ. ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಧ್ವನಿಯಾತ್ರೆಗಳನ್ನು ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಕಾಂಗ್ರೆಸ್​ಗೆ ಮತಗಳನ್ನು ನೀಡುವಂತೆ ಸಂದೇಶ ರವಾನೆ ಮಾಡಿದರು.

ಇನ್ನು ಇಂದು ಕೂಡ ತಮ್ಮ ಕಾರ್ಯಕರ್ತರ ದಂಡು ಕಟ್ಟಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲೂ ಸಂಚರಿಸಿ, ಶಾಮನೂರಿನಲ್ಲಿರುವ ಪ್ರತಿಷ್ಠಿತ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಆರ್ಶೀವಾದ ಪಡೆದರು. ಬಳಿಕ ಶಾಮನೂರಿನ ಮನೆ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಿರುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಮತದಾರರಿಗೆ ಮನವರಿಕೆ ಮಾಡಿದರು.

ಇನ್ನು ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000, ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್, ಬಿಪಿಎಲ್ ಕಾರ್ಡ್​ದಾರರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವ ಗ್ಯಾರೆಂಟಿ ಕಾರ್ಡ್ ಅನ್ನು ಸಿದ್ದರಾಮಯ್ಯನವರು ಮನೆ ಮನೆಗೆ ಭೇಟಿ ನೀಡಿ ಹಂಚಿದರು. ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂದು ಮನೆ ಮನೆಗೆ ಭೇಟಿ ನೀಡಿ ಗ್ಯಾರೆಂಟಿ ಕಾರ್ಡ್​ನ್ನು ಹಂಚಿದ್ದೇನೆ, ಉಳಿದಂತೆ ಮಾಜಿ ಸಚಿವ ಮಲ್ಲಿಕಾರ್ಜುನ್ ಅವರು ಹಾಗು ಕಾರ್ಯಕರ್ತರು ಗ್ಯಾರೆಂಟಿ ಕಾರ್ಡ್​ನ್ನು ಹಂಚುತ್ತಾರೆ. ಇಲ್ಲಿ ತನಕ ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರಂತೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದರು.

ಸಿದ್ದರಾಮಯ್ಯ ಬಿಜೆಪಿ ಶಾಸಕ ಎಸ್​ ಎ ರವೀಂದ್ರನಾಥ್ ಅವರ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶಿಸಿದರು. ಇನ್ನು ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದತ್ತ ಮುಖ ಮಾಡದ ಶಾಸಕ ಎಸ್ ಎ ರವೀಂದ್ರನಾಥ್ ಅವರ ವಿರುದ್ಧ ಕೆಲ ಮತದಾರರು ಕೆಲಸ ಮಾಡಿಲ್ಲ ಎಂದು ದೂರಿದರು. ಇದನ್ನೇ ಬಂಡವಾಳ ಮಾಡಿಕೊಂಡ ಸಿದ್ದರಾಮಯ್ಯ ಅವರು ಈ ಬಾರಿ ಮತವನ್ನು ಕಾಂಗ್ರೆಸ್​ಗೆ ನೀಡಿ ಎಲ್ಲಾ ಸರಿ ಹೋಗಲಿದೆ ಎಂದರು.

ಸಿದ್ದರಾಮಯ್ಯ ಕಾರ್ಡ್ ಹಂಚುವ ಜೊತೆಯಲ್ಲಿ ಅಲ್ಲಿನ ಬಡ ಮಹಿಳೆಯರ ಸಮಸ್ಯೆಗಳನ್ನು ಕೂಡ ಆಲಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮಾಜಿ ಸಚಿವರಾದ ಎಸ್ಎಸ್ ಮಲ್ಲಿಕಾರ್ಜುನ್, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಸಲೀಂ ಅಹ್ಮದ್ ಸಾಥ್ ನೀಡಿದರು. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಐದು ಮತ ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ಸುತ್ತು ಹಾಕಿದೆ. ಇದಕ್ಕೆ ಸುಮ್ಮನೆ ಕೂರದ ಬಿಜೆಪಿ ನಾಯಕರು ಇದೇ 17ಕ್ಕೆ ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕರೆಸಿ ಶಕ್ತಿ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಡಿಕೆಶಿ ಸಿಡಿ ಇಟ್ಕೊಂಡು ಬಿಜೆಪಿ ನಾಯಕರನ್ನು ಬ್ಲ್ಯಾಕ್​ಮೈಲ್​ ಮಾಡ್ತಿರೋದು ನನಗೆ ಗೊತ್ತಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಸಿಡಿ ಇಟ್ಕೊಂಡು ಬಿಜೆಪಿ ನಾಯಕರನ್ನು ಬ್ಲ್ಯಾಕ್​ಮೈಲ್​ ಮಾಡುತ್ತಿರುವುದು ನನಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಉತ್ತರ ಹೇಳಬಾರದು. ಅದರ ಬಗ್ಗೆ ನನಗೇನು ಗೊತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮದವರ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ.

ದಾವಣಗೆರೆ ನಗರದ ಶಾಮನೂರಿನಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್​ಗಳನ್ನು ಮನೆ ಮನೆಗೆ ಭೇಟಿ ನೀಡಿ ಹಂಚಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಡಿ ಬ್ಲ್ಯಾಕ್​ಮೈಲ್​ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಇನ್ನು ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ವಿಚಾರವಾಗಿ ಮಾತನಾಡಿದ ಅವರು ಇನ್ನು ಹೆದ್ದಾರಿಯಲ್ಲಿ ಸರಿಯಾಗಿ ರಸ್ತೆಗಳೇ ಆಗಿಲ್ಲ, ಸರ್ವಿಸ್ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುವಂತಿಲ್ಲ. ಸ್ಥಳೀಯರಿಗೆ ಅನುಕೂಲವಾಗಬೇಕು. ಸರ್ವೀಸ್​ ರಸ್ತೆ ಮಾಡಿದರೆ ಮಾತ್ರ ಅಲ್ಲಿಯವರಿಗೆ ಅನುಕೂಲವಾಗುವುದು. ಇನ್ನು ಬೈಪಾಸ್ ರಸ್ತೆಗಳನ್ನು ಮಾಡಿಲ್ಲ, ಅಂಡರ್ ಪಾಸ್ ಮಾಡಿಲ್ಲ, ಸೇತುವೆಗಳನ್ನು ಮಾಡಿಲ್ಲ. ಇವುಗಳನ್ನು ಯಾವುದನ್ನೂ ಮಾಡದೆ, ಹೆಚ್ಚು ಕೆಲಸಗಳು ಬಾಕಿ ಇರುವಾಗಲೇ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಬೆಂಗಳೂರು ಮೈಸೂರು ಹೈವೇಯನ್ನು ಉದ್ಘಾಟನೆ ಮಾಡಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಇದೆ ಎಂದು ರಾಜ್ಯ ಸರ್ಕಾರ ತರಾತುರಿಯಲ್ಲಿ ಹೈವೇ ಉದ್ಘಾಟನೆ ಮಾಡಿಸಿದ್ದಾರೆ. ರಾಜ್ಯ ಹೆದ್ದಾರಿಯಾಗಿದ್ದ ಬೆಂಗಳೂರು ಮೈಸೂರು ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ನಾವು. ರಾಷ್ಟ್ರೀಯ ಹೆದ್ದಾರಿಯನ್ನಾಗಿಸಿ ಹತ್ತು ಪಥದ ರಸ್ತೆ ಮಾಡಬೇಕೆಂದು ಅನುಮೋದನೆ ಮಾಡಿದ್ದು ಕೂಡ ನಾವು. ನಾವು ಕಾಂಗ್ರೆಸ್​ನವರು ಪ್ರಾರಂಭ ಮಾಡಿದ ಕೆಲಸವನ್ನು ಅವರು ಬಂದು ಉದ್ಘಾಟನೆ ಮಾಡಿದ್ದಾರೆ ಅಷ್ಟೇ. ಉದ್ಘಾಟನೆ ಮಾಡಿ ಈಗ ಅದರ ಸಂಪೂರ್ಣ ಕ್ರೆಡಿಟ್​ ಅವರು ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಣ್ಣೆ ದೋಸೆ ಸವಿದ ಸಿದ್ದರಾಮಯ್ಯ: ಪ್ರಜಾಧ್ವನಿ ಯಾತ್ರೆ ಪ್ರಯುಕ್ತ ದಾವಣಗೆರೆಗೆ‌ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಣ್ಣೆ ದೋಸೆ, ರಾಗಿ ರೊಟ್ಟಿ, ಹಾಗು ಈರುಳ್ಳಿ ದೋಸೆ ಸವಿದರು.

ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲೇ 40% ಲಂಚ ತೆಗೆದುಕೊಳ್ಳುವ ಸರ್ಕಾರ ಬಂದಿರಲಿಲ್ಲ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.