ETV Bharat / state

ಕಾಂಗ್ರೆಸ್ ಗ್ಯಾರಂಟಿಗಳನ್ನು ಈಡೇರಿಸದಿದ್ದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ: ಬಿ.ಎಸ್.ಯಡಿಯೂರಪ್ಪ

author img

By

Published : Jun 22, 2023, 7:20 PM IST

Updated : Jun 22, 2023, 7:57 PM IST

former-cm-yadiyurappa-slams-congress-govt
ಕಾಂಗ್ರೆಸ್ ಗ್ಯಾರಂಟಿ ಈಡೇರಿಸದಿದ್ದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ : ಬಿಎಸ್​ವೈ ಗುಡುಗು

ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಗ್ಯಾರಂಟಿ ವಿಚಾರವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ

ದಾವಣಗೆರೆ : ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದೇ ಇದ್ದಲ್ಲಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದಲ್ಲಿ ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತರದಿದ್ದರೆ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತೇವೆ. ಇದರಲ್ಲಿ ಬಿಜೆಪಿ ರಾಜ್ಯ ನಾಯಕರು ಭಾಗವಹಿಸುತ್ತಾರೆ. ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ನಂತರ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವವರೆಗೂ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು.

ರಾಜ್ಯಾದ್ಯಂತ 7 ತಂಡಗಳ ಪ್ರವಾಸ ಶುರುವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮುಗಿಸಿ ಇಂದು ದಾವಣಗೆರೆ ಜಿಲ್ಲೆಗೆ ಬಂದಿದ್ದೇನೆ. ಕಾಂಗ್ರೆಸ್ ಸರ್ಕಾರ ಮನೆ‌ ಮನೆಗೆ ಹೋಗಿ 5 ಗ್ಯಾರಂಟಿ ಪತ್ರ ಕೊಟ್ಟು ಬಂದಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ, ಡಿಕೆಶಿ ಸಹಿ ಮಾಡಿದ್ದರು. ಇದನ್ನು ನಂಬಿದ ರಾಜ್ಯದ ಜನರು ಕಾಂಗ್ರೆಸ್​​ಗೆ ಮತ ಹಾಕಿದರು. ಅದರ ಪರಿಣಾಮ ಕಾಂಗ್ರೆಸ್​ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಿದೆ. ಆದರೆ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದರೂ ಅವರು ಕೊಟ್ಟಂತಹ ಯಾವುದೇ ಯೋಜನೆಗಳನ್ನು ಈಡೇರಿಸಿಲ್ಲ. ಹೀಗಾಗಿ ಮುಂದಿನ ತಿಂಗಳು ಪ್ರಾರಂಭವಾಗುವ ಅಧಿವೇಶನದಲ್ಲಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸುತ್ತೇವೆ.

ಅಧಿವೇಶನದಲ್ಲಿ ಜುಲೈ 4ನೇ ತಾರೀಕು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. 5ನೇ ತಾರೀಕಿನಿಂದ ರಾಜ್ಯದ ಸರ್ಕಾರ ಘೋಷಣೆ ಮಾಡಿರುವ ಐದು ಘೋಷಣೆಗಳನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೆ ತರಬೇಕೆಂದು ಒತ್ತಾಯಿಸಿ ನಾನು ಮತ್ತು ಸೋತಂತಹ ಶಾಸಕರು, ಮುಖಂಡರು ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸುತ್ತೇವೆ. ಅಧಿವೇಶನ ಪ್ರಾರಂಭವಾಗಿ ಅಧಿವೇಶನ ಮುಗಿಯೋವರೆಗೂ ಸ್ವತಃ ನಾನೇ ಧರಣಿ ಕುಳಿತುಕೊಳ್ಳುತ್ತೇನೆ. ಸದನದ ಒಳಗೆ ನಮ್ಮ ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್​ನ ಕಿವಿ ಹಿಂಡುತ್ತಾರೆ. ಸದನದ ಹೊರಗೆ ನಾವು ಕಾಂಗ್ರೆಸ್ ಕಿವಿ ಹಿಂಡುತ್ತೇವೆ.ಅಧಿವೇಶನ ಮುಗಿಯೋವರೆಗೂ ನಮ್ಮ ಧರಣಿ ನಿಲ್ಲೋದಿಲ್ಲ.

ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸದೇ ಇದ್ರೆ ಬಿಜೆಪಿ ಸಹಿಸುವುದಿಲ್ಲ. ಕಾಂಗ್ರೆಸ್ ಯೋಗ್ಯತೆಗೆ ಫಸಲ್ ಬಿಮಾ ಹಣವನ್ನೂ ಬಿಡುಗಡೆ ಮಾಡಿಲ್ಲ. ಜನರ ಅಭಿವೃದ್ಧಿ ಮರೆತು ಕಾಂಗ್ರೆಸ್ ದೊಂಬರಾಟ ಮಾಡುತ್ತಿದೆ ಎಂದು ಬಿಎಸ್‌ವೈ ಟೀಕಿಸಿದರು.

ಇಂದು ರಾತ್ರಿ 12 ಗಂಟೆಗೆ ಅಮೆರಿಕ ಸಂಸತ್ ಉದ್ದೇಶಿಸಿ ನಮ್ಮ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ನರೇಂದ್ರ ಮೋದಿ ಅಂತವರು ಪ್ರಧಾನಿಯಾಗಿ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದರು. ಕಾಂಗ್ರೆಸ್​ ಕೊಟ್ಟ ಭರವಸೆ ಈಡೇರಿಸಬೇಕು, ಇಲ್ಲವೇ ಅಧಿಕಾರ ಬಿಟ್ಟು ತೊಲಗಬೇಕು. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದು ಇದೇ ವೇಳೆ ಹೇಳಿದರು.

ಕೇಂದ್ರ ಸಚಿವ ನಾರಾಯಣ ಸ್ವಾಮಿ ಮಾತನಾಡಿ, ಸೋಲಿನ ನಂತರ ಚರ್ಚೆಯ ಅವಶ್ಯಕತೆ ಇದೆಯಾ?. ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಸುಮಾರು 60 ವರ್ಷಗಳ ಕಾಲ ಆಡಳಿತ ನಡೆಸಿತು. ಬಿಜೆಪಿ ಕೇವಲ 15 ವರ್ಷ ಆಡಳಿತ ನಡೆಸಿದೆ. ಹಾಗೆಯೇ ರಾಜ್ಯದಲ್ಲಿ ಕೇವಲ 11 ವರ್ಷ ಬಿಜೆಪಿ ಆಡಳಿತ ನಡೆಸಿದೆ. 75 ವರ್ಷಗಳ ರಾಜಕಾರಣವನ್ನು ನೋಡಿದಾಗ ಬಿಜೆಪಿ ಆಡಳಿತ ಅವಧಿಯಲ್ಲಿ ಭಾರತದೇಶ ಅಗ್ರಸ್ಥಾನಕ್ಕೇರಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆದ ಸೋಲು ಕಾರ್ಯಕರ್ತರಿಂದ ಆಗಿಲ್ಲ ಬದಲಾಗಿ ನಮ್ಮಿಂದ ಆಗಿದೆ ಎಂದು ಹೇಳಿದರು. ಬಳಿಕ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗಾಗಲಿ, ಪ್ರಿಯಾಂಕ ಗಾಂಧಿ ಅವರಿಗಾಗಲಿ ಕೇಂದ್ರ ಮತ್ತು ರಾಜ್ಯದಲ್ಲಿ ಮಂತ್ರಿಗಳಾದ ಅನುಭವ ಇಲ್ಲ. ಆಡಳಿತದ ಅನುಭವವೇ ಇಲ್ಲದವರು ತಂತ್ರಗಾರಿಕೆ ಹೆಸರಲ್ಲಿ ಐದು ಸುಳ್ಳು ಭರವಸೆಗಳನ್ನು ನೀಡಿ ಮತದಾರರಿಗೆ ಮೋಸ ಮಾಡಿದ್ದಾರೆ. ಇದನ್ನು ಬಿಜೆಪಿಯ ನಾಯಕರು ಹಗುರವಾಗಿ ಪರಿಗಣಿಸಿದ ಪರಿಣಾಮ ಇವತ್ತು ರಾಜ್ಯದಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದೆ ಎಂದು ಹೇಳಿದರು.

ಇದನ್ನೂ ಓದಿ : Congress Guarantee: ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್​ ವಿರುದ್ಧ ಜನ ಛೀಮಾರಿ ಹಾಕ್ತಿದ್ದಾರೆ: ಬಿ ಎಸ್​ ಯಡಿಯೂರಪ್ಪ

Last Updated :Jun 22, 2023, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.