ETV Bharat / state

ಏರ್ಪೋರ್ಟ್ ರನ್ ವೇಯಲ್ಲಿ ತಾಂತ್ರಿಕ ಸಮಸ್ಯೆ: ಮಂಗಳೂರಿನ ಬದಲು ಕೇರಳದಲ್ಲಿ ವಿಮಾನ ಲ್ಯಾಂಡ್​

author img

By

Published : May 28, 2023, 11:01 PM IST

Updated : May 28, 2023, 11:08 PM IST

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್​ ವೇಯ ವಿದ್ಯುತ್ ಕಡಿತಗೊಂಡ ಹಿನ್ನಲೆ ಲ್ಯಾಂಡಿಂಗ್​ ಸಮಸ್ಯೆಯಾಗಿ, ಮುಂಬೈನಿಂದ ಬಂದ ವಿಮಾನವನ್ನು ಕೇರಳಕ್ಕೆ ಡೈವರ್ಟ್ ಮಾಡಲಾಗಿದೆ.

Mangalore International Airport
ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಲ್ಯಾಂಡ್ ಆಗಬೇಕಿದ್ದ ವಿಮಾನ ಡೈವರ್ಟ್ ಮಾಡಲಾಗಿದ್ದು, ಸದ್ಯ ಸಮಸ್ಯೆ ಸರಿಪಡಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ವಿದ್ಯುತ್ ಕಡಿತಗೊಂಡಿತ್ತು. ಆದ್ದರಿಂದ ರನ್‌ ವೇನಲ್ಲಿರುವ ದೀಪಗಳು ಉರಿಯುತ್ತಿರಲಿಲ್ಲ. ಪರಿಣಾಮ ಮುಂಬೈನಿಂದ ಆಗಮಿಸಿದ ಇಂಡಿಗೋ 6E5188 ವಿಮಾನ ಲ್ಯಾಂಡ್ ಆಗದೇ ವಾಪಸ್ ಆಗಿದೆ. ಎಟಿಸಿ ಸೂಚನೆ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರು ಏರ್ಪೋರ್ಟ್‌ನಲ್ಲಿ ಇದು ಲ್ಯಾಂಡ್ ಆಗಿದೆ.

ಅಲ್ಲದೆ ತಾಂತ್ರಿಕ ಸಮಸ್ಯೆ ಸರಿಪಡಿಸುವವರೆಗೆ ಮಂಗಳೂರು ಏರ್ಪೋರ್ಟ್​ನಲ್ಲಿ ಲ್ಯಾಂಡಿಂಗ್, ಟೇಕಾಫ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಕೆಲವೇ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಮತ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಹಾಗೂ ಬೆಂಗಳೂರಿನಿಂದ ಬರಬೇಕಿದ್ದ ವಿಮಾನಗಳ ಲ್ಯಾಂಡಿಂಗ್ ವಿಳಂಬವಾಗಲಿದೆ ಎಂದು ಹೇಳಲಾಗಿತ್ತು.

ಅಲ್ಲದೆ ಬಹರೈನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ IX 789 ಸಂಚಾರ ವಿಳಂಬವಾಗಲಿದೆ. ಪ್ರಸ್ತುತ ಮತ್ತೆ ಯಥಾಸ್ಥಿತಿಗೆ ಏರ್ಪೋರ್ಟ್ ರನ್‌ವೇ ಬಂದಿದೆ. ರನ್‌ವೇ ಲೈಟಿಂಗ್‌ಗಳನ್ನು ಇಂಜಿನಿಯರ್‌ಗಳ ತಂಡ ಸರಿಪಡಿಸಿದ್ದು, ಮತ್ತೆ ವಿಮಾನಗಳ ಹಾರಾಟಕ್ಕೆ ಆರಂಭವಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಏರ್ಪೋರ್ಟ್ ರನ್‌ವೇ ಸ್ಥಗಿತವಾಗಿತ್ತು. ರಾತ್ರಿ 7.30 ರಿಂದ 9.30ರವರಗೆ ಏರ್ಪೋರ್ಟ್ ರನ್‌ವೇನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು.

ಇದನ್ನೂ ಓದಿ: ಟೈರ್​ ಸ್ಫೋಟಗೊಂಡು ಲಾರಿಗೆ ಗುದ್ದಿದ ಕಾರು: ಸ್ಥಳದಲ್ಲೇ ಆರು ಜನರ ಸಾವು.. ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ

ವಜ್ರ ಕಳ್ಳ ಸಾಗಣೀಕೆಗೆ ಯತ್ನ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಜ್ರದ ಹರಳುಗಳನ್ನು ಅಕ್ರಮವಾಗಿ ದುಬೈಗೆ ಸಾಗಿಸಲು ಯತ್ನಿಸುತ್ತಿದ್ದ ಕಾಸರಗೋಡು ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಜ್ಪೆ ಅಂತಾರಾಷ್ಟ್ರೀಯ ವಿಮಾನದೊಳಗೆ ತೆರಳುತ್ತಿದ್ದ ವ್ಯಕ್ತಿಯನ್ನು ಅನುಮಾನದ ಮೇರೆಗೆ ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ.

ತಪಾಸಣೆ ವೇಳೆ ವ್ಯಕ್ತಯ ಒಳ ಉಡುಪಿನ ಪ್ಯಾಕೆಟ್‌ನಲ್ಲಿ ಬಚ್ಚಿಟ್ಟಿದ್ದ ವಜ್ರದ ಹರಳುಗಳು ಪತ್ತೆಯಾಗಿದೆ. ಈ ವೇಳೆ ಎರಡು ಪ್ಯಾಕೆಟ್‌ನೊಳಗಡೆ 13 ಸಣ್ಣ ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ 306.21 ಕ್ಯಾರೆಟ್ ವಜ್ರದ ಹರಳುಗಳು ಪತ್ತೆಯಾಗಿದೆ. ಇವುಗಳ ಒಟ್ಟು ಮೌಲ್ಯ 1.69 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ತಕ್ಷಣ ಆತನನ್ನು ಸಿಐಎಸ್‌ಎಫ್ ಅಧಿಕಾರಿಗಳು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ಮಂಗಳೂರು ಏರ್​ಪೋರ್ಟ್​ನಲ್ಲಿ ವಜ್ರ ಸಾಗಿಸುತ್ತಿದ್ದ ವ್ಯಕ್ತಿ ಸೆರೆ

ಮಂಗಳೂರು ದುರಂತಕ್ಕೆ 13 ವರ್ಷ: 2010ರ ಮೇ 22ರಂದು ಬೆಳಿಗ್ಗೆ ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇಯಲ್ಲಿ ವಿಮಾನ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ್ದರು. ಕೇವಲ 8 ಮಂದಿ ಬದುಕುಳಿದಿದ್ದರು. ಸತ್ತವರಲ್ಲಿ 12 ಮೃತದೇಹಗಳ ಗುರುತು ಪತ್ತೆಯಾಗಿರಲಿಲ್ಲ. ಅದಕ್ಕಾಗಿ ಸ್ಮಾರಕ ನಿರ್ಮಿಸಲಾಗಿದ್ದು, ಇತ್ತೀಚೆಗೆ 13ನೇ ವರ್ಷದ ಕರಾಳ ದಿನ ಆಚರಿಸಲಾಗಿತ್ತು.

Last Updated :May 28, 2023, 11:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.