ETV Bharat / state

ಕಡಬ: ಕರ್ತವ್ಯನಿರತ ಅರಣ್ಯ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ; 7 ಮಂದಿ ಬಂಧನ

author img

By

Published : Feb 24, 2023, 8:36 PM IST

ಜಖ್ಖಂಗೊಂಡ ಪೊಲೀಸ್​ ವಾಹನ
ಜಖ್ಖಂಗೊಂಡ ಪೊಲೀಸ್​ ವಾಹನ

ಕರ್ತವ್ಯನಿರತ ಅರಣ್ಯಾಧಿಕಾರಿ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಕಡಬ (ದಕ್ಷಿಣ ಕನ್ನಡ): ಗುರುವಾರ ರಾತ್ರಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಇಲ್ಲಿಯ ಕೊಂಬಾರಿನ ಮಂಡೆಕರ ಬಳಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ, ಸರ್ಕಾರಿ ವಾಹನಗಳಿಗೆ ಹಾನಿಗೊಳಿಸಿದ ಆರೋಪದಡಿ ಏಳು ಜನರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿಗಳಾದ ಉಮೇಶ್, ರಾಜೇಶ್, ಕೋಕಿಲಾನಂದ, ಕೋಲ್ಪೆ‌ ನಿವಾಸಿಗಳಾದ ಜನಾರ್ದನ್ ರೈ, ತೀರ್ಥಕುಮಾರ್, ಬಾರ್ಯ ನಿವಾಸಿ ಗಂಗಾಧರ್ ಗೌಡ, ರೆಂಜಾಳ ನಿವಾಸಿ ಅಜಿತ್‌ಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರು ಗುರುವಾರ ರಾತ್ರಿ ಕೊಂಬಾರು ಅರಣ್ಯ ಪ್ರದೇಶದಲ್ಲಿ ಸೆರೆಸಿಕ್ಕಿದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಲಾರಿ ತಡೆದಿದ್ದಾರೆ.

ಅಲ್ಲದೇ ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಇತರ ಕಾಡಾನೆಗಳನ್ನು ಸೆರೆಹಿಡಿದು ಒಟ್ಟಿಗೆ ಎಲ್ಲಾ ಆನೆಗಳನ್ನು ಕೊಂಡೊಯ್ಯಬೇಕೆಂದು ಪಟ್ಟು ಹಿಡಿದಿದ್ದಾರೆ. ಅರಿವಳಿಕೆ ಮದ್ದು ನೀಡಿ ಹಿಡಿದಿರುವ ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲ. ಅದಕ್ಕೆ ಕೂಡಲೇ ಹೆಚ್ಚಿನ ಚಿಕಿತ್ಸೆ ನೀಡಬೇಕಾಗುತ್ತದೆ. ನಾವು ಮೊದಲು ಸೆರೆಹಿಡಿದ ಆನೆಯನ್ನು ಬಿಟ್ಟು ಬಂದು ನಂತರ ಕಾರ್ಯಾಚರಣೆ ನಡೆಸಿ ಉಳಿದ ಕಾಡಾನೆಗಳನ್ನು ಸೆರೆಹಿಡಿಯುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೊಪ್ಪದ ಆರೋಪಿಗಳು ಈಗಲೇ ಉಳಿದ ಆನೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಅರಣ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಈ ಏಳು ಜನರಿಗೆ ತಿಳುವಳಿಕೆ ಹೇಳಿದ್ದಾರೆ. ಕೋಪಗೊಂಡ ಆರೋಪಿಗಳು ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಸ್ಥಳದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖೆ ವಾಹನ ಹಾಗೂ ಪೊಲೀಸ್ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿ ವಾಹನಗಳನ್ನು ಜಖಂ ಮಾಡಿದ್ದಾರೆ.

ಆರೋಪಿಗಳ ವಿರುದ್ಧ ಕಲಂ:143,144,147,148,341,353,332,307,427,504,506 ಜೊತೆಗೆ 149 ಐ.ಪಿ.ಸಿ ಮತ್ತು ಕಲಂ: 2(ಬಿ),ಆಸ್ತಿ ನಷ್ಟ ತಡೆ ಕಾಯ್ದೆ-1981ರಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಇಬ್ಬರು ಬಲಿ: ಸ್ಥಳೀಯರಿಂದ ಆಕ್ರೋಶ, 15 ಲಕ್ಷ ಪರಿಹಾರ ಘೋಷಿಸಿದ ಡಿಸಿ

ಇನ್ನು ಕಳೆದ ನಾಲ್ಕು ದಿನಗಳ ಹಿಂದೆ ಕಾಡಾನೆ ದಾಳಿಯಿಂದ ಯುವತಿ ಸೇರಿ ಇಬ್ಬರು ಬಲಿಯಾಗಿದ್ದರು. ಇಲ್ಲಿಯ ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿದ್ದ ರಂಜಿತಾ ಸೊಸೈಟಿಗೆ ತೆರಳುತ್ತಿದ್ದ ವೇಳೆ ಆನೆ ದಾಳಿ ಮಾಡಿತ್ತು. ಅಲ್ಲದೇ ಇದೇ ವೇಳೆ ರಮೇಶ್ ರೈ ಎಂಬವರ ಮೇಲೂ ಆನೆ ದಾಳಿ ನಡೆಸಿತ್ತು. ರಮೇಶ್ ರೈ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನು ರಂಜಿತಾ ಎಂಬುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಕಾಡಾನೆ ದಾಳಿ ವೇಳೆ ಪ್ರಾಣವನ್ನು ರಕ್ಷಿಸಿಕೊಳ್ಳಲು ಯತ್ನಿಸಿದ್ದರೂ ಆನೆ ದಾಳಿ ನಡೆಸಿತ್ತು.

ಇದನ್ನೂ ಓದಿ: 3 ದಿನಗಳ ಸತತ ಕಾರ್ಯಾಚರಣೆ: ಕಡಬದಲ್ಲಿ ನರಹಂತಕ ಕಾಡಾನೆ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.