ETV Bharat / state

ದೇವಾಲಯದಲ್ಲಿ ಮೊಬೈಲ್ ಸ್ವಿಚ್ ಆಫ್ ಆದೇಶ.. ಕರಾವಳಿಯ ಹಲವು ದೇವಸ್ಥಾನಗಳಲ್ಲಿ ಆದೇಶಕ್ಕೂ ಮೊದಲೇ ಪಾಲನೆ

author img

By

Published : Jul 18, 2023, 1:20 PM IST

Updated : Jul 18, 2023, 1:56 PM IST

ದೇವಾಲಯದಲ್ಲಿ ಮೊಬೈಲ್ ಸ್ವಿಚ್ ಆಫ್ ಆದೇಶ
ದೇವಾಲಯದಲ್ಲಿ ಮೊಬೈಲ್ ಸ್ವಿಚ್ ಆಫ್ ಆದೇಶ

ರಾಜ್ಯ ಸರ್ಕಾರವು ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಯನ್ನು ‌ನಿಷೇಧಿಸಿ ಆದೇಶ ಮಾಡಿದೆ.

ದೇವಾಲಯದಲ್ಲಿ ಮೊಬೈಲ್ ಸ್ವಿಚ್ ಆಫ್ ಆದೇಶ

ಮಂಗಳೂರು (ದಕ್ಷಿಣ ಕನ್ನಡ): ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಏಕಾಗ್ರತೆ ಬೇಕು. ದೇವರ ಪ್ರಾರ್ಥನೆಯ ವೇಳೆ ಮನಸ್ಸಿನಲ್ಲಿರುವುದನ್ನು ಪ್ರಾರ್ಥಿಸಬೇಕು. ಆದರೆ ಇತ್ತೀಚೆಗೆ ಮೊಬೈಲ್ ಫೋನ್​ಗಳು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಿರಿ ಕಿರಿಯನ್ನುಂಟು ಮಾಡಿದೆ. ಇದೀಗ ಮೊಬೈಲ್ ಜಮಾನ. ಮೊಬೈಲ್ ಫೋನ್ ಇಲ್ಲದೆ ಮನುಷ್ಯನಿಗೆ ಜೀವನವೇ ಇಲ್ಲದಂತಾಗಿದೆ. ಪ್ರತಿಕ್ಷಣವು ಮನುಷ್ಯನಿಗೆ ಮೊಬೈಲ್ ಬೇಕೆ ಬೇಕು. ಕೇವಲ ಸಂವಹನಕ್ಕೆ ಮಾತ್ರವಲ್ಲದೆ ಮನೋರಂಜನೆಗೂ ಕೂಡ. ಆದರೆ ಈ ಮೊಬೈಲ್ ದೇವಸ್ಥಾನಕ್ಕೆ ಪ್ರಾರ್ಥನೆಗೆ ಬರುವ ಭಕ್ತರಿಗೆ ಬಹಳ ತೊಂದರೆ ಉಂಟುಮಾಡುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಯನ್ನು ‌ನಿಷೇಧಿಸಿ ಆದೇಶ ಹೊರಡಿಸಿದೆ. ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದೆ.

ಆದೇಶದಲ್ಲಿ ಏನಿದೆ?: ದೇವಾಲಯಗಳ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿದೆ. ಇದರಿಂದ ಭಕ್ತರು ದೇವಾಲಯಕ್ಕೆ ಆಗಮಿಸಿದಾಗ ಮೊಬೈಲ್ ಫೋನ್ ಬಳಕೆಯ ಶಬ್ದಗಳಿಂದ ದೇವಾಲಯದ ಸಿಬ್ಬಂದಿಗಳಿಗೂ ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತರಿಗೂ ಏಕ ಮನಸ್ಸಿನಿಂದ ಧ್ಯಾನ ಪೂಜಾದಿಗಳನ್ನು ನಡೆಸಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ದೇವರ ದರ್ಶನದ ಸಮಯದಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ, ದೇವರ ದರ್ಶನ ಮಾಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ದೇವಾಲಯಗಳ ಸೂಚನಾ ಫಲಕಗಳಲ್ಲಿ ಅಗತ್ಯ ಸೂಚನೆಗಳನ್ನು ಪ್ರಕಟಿಸುವಂತೆ ತಿಳಿಸಲಾಗಿದೆ.

ಕರಾವಳಿಯ ದೇವಸ್ಥಾನಗಳಲ್ಲಿ ‌ಮೊದಲೇ ಪಾಲನೆ: ದೇವಸ್ಥಾನದ ಒಳಗೆ ಮೊಬೈಲ್ ಬಳಕೆ ನಿಷೇಧ ಮಾಡಿರುವ ಆದೇಶವನ್ನು ‌ನಿನ್ನೆ ರಾಜ್ಯ ಸರ್ಕಾರ ಮಾಡಿದೆ. ಈ ಆದೇಶ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಪಾಲನೆಯಾಗಬೇಕಿದೆ. ಆದರೆ ಕರಾವಳಿಯ ಹೆಚ್ಚಿನ ದೇವಸ್ಥಾನಗಳಲ್ಲಿ ಇದನ್ನು ಮೊದಲಿನಿಂದಲೂ ಪಾಲನೆ ಮಾಡಲಾಗುತ್ತಿದೆ.

ಮುಜರಾಯಿ ಇಲಾಖೆಗೆ ಒಳಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಬೋರ್ಡನ್ನು ಹಾಕಲಾಗಿದೆ. ಈ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ಮಾಡುವುದು, ಪೊಟೋ ತೆಗೆಯುವುದನ್ನು ನಿಷೇಧಿಸಲಾಗಿದೆ. ಇದೀಗ ಆಯಾ ದೇವಸ್ಥಾನದವರು ಮಾಡಿರುವ ಈ ಸೂಚನೆಗೆ‌ ರಾಜ್ಯ ಸರ್ಕಾರದ ಅಧಿಕೃತ ಆದೇಶದ ಮುದ್ರೆ ಸಿಕ್ಕಿದೆ.

ಸರ್ಕಾರ ಈ ಆದೇಶದಿಂದ ದೇವಸ್ಥಾನದ ಒಳಗೆ‌ ಮೊಬೈಲ್ ಬಳಸುವುದು, ಫೋಟೋ ತೆಗೆಯುವುದು, ರೀಲ್ಸ್ ಮಾಡುವುದು, ವಿಡಿಯೋ ಮಾಡುವುದಕ್ಕೆ ಕಡಿವಾಣ ಬೀಳಲಿದೆ. ಈ ಬಗ್ಗೆ ಮಾತನಾಡಿದ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ತಡವಾಗಿಯಾದರೂ ಅಧಿಕಾರಿ ವರ್ಗಕ್ಕೆ ಜ್ಞಾನೋದಯವಾಗಿದೆ. ತಂತ್ರಜ್ಞಾನ ಪ್ರವೇಶ ಸರ್ವ ಪ್ರಾರ್ಥನಾ ಮಂದಿರದೊಳಗೆ ಸಾಧುವಲ್ಲ. ಭಗವಂತನ ಆತ್ಮನಿವೇದನೆಗೆ ಪುಣ್ಯಕ್ಷೇತ್ರಕ್ಕೆ ಬಂದಾಗ ಮೊಬೈಲ್ ಬಳಕೆ ಸಾಧುವಲ್ಲ.

ಕರಾವಳಿಯ ಪ್ರದೇಶದಲ್ಲಿ ಈಗಾಗಲೇ ಫಲಕ ಹಾಕಲಾಗಿದೆ. ಜನರು ಅದನ್ನು ತಕ್ಕಮಟ್ಟಿಗೆ ಪಾಲನೆ ಮಾಡುತ್ತಿದ್ದಾರೆ. ಸರ್ಕಾರದ ಆದೇಶ ಸ್ವಾಗತಾರ್ಹ. ಎಲ್ಲವೂ ಶಾಸನದಿಂದ ಸಾಧ್ಯವಿಲ್ಲ. ಜನರ ಬದ್ಧತೆಯು ಪ್ರಮುಖವಾದದ್ದು. ಇಂತಹ ಚಿಂತನೆಯನ್ನು ಸ್ವಾಗತಿಸೋಣ ಎಂದರು.

ಇದನ್ನೂ ಓದಿ: ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರ: ಗೋವು ಸಾಕಿದ್ದೀರಾ? ಸೆಗಣಿ, ಉಚ್ಚೆ ತೆಗೆದಿದ್ದಾರಾ? ಸ್ವಾಮೀಜಿಗಳಿಗೆ ಪಾಟೀಲ್ ಗಣಿಹಾರ್ ಪ್ರಶ್ನೆ

Last Updated :Jul 18, 2023, 1:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.