ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಗಾಗ ಮೈ ರೋಮಾಂಚನಗೊಳಿಸೋ ರ್ಯಾಲಿಗಳಿಗೇನೂ ಕೊರತೆ ಇರೋದಿಲ್ಲ. ಅದರಲ್ಲೂ ಆಫ್ ರೋಡ್ ಜೀಪ್ ರ್ಯಾಲಿಯಂತೂ ನೋಡುಗರಿಗೆ ಸಖತ್ ಥ್ರಿಲ್ ನೀಡಿದ್ರೆ, ಸ್ಪರ್ಧಿಗಳಿಗೆ ಹೊಸದಾದ ಅಡ್ವೆಂಚರ್ ಮಾಡೋದಕ್ಕೆ ಅವಕಾಶ ಸಿಗುತ್ತೆ. ಕಾಫಿ ತೋಟ, ಅಡಿಕೆ ತೋಟ, ಕಲ್ಲು, ಬಂಡೆ, ಹಳ್ಳ-ಕೊಳ್ಳಗಳನ್ನು ಸೀಳಿಕೊಂಡು ಜೀಪ್ಗಳು ಹೋಗುತ್ತಿದ್ದರೆ ಪ್ರೇಕ್ಷಕರ ಕಣ್ಣಿಗೆ ಹಬ್ಬ.
ಜಿಲ್ಲೆಯ ಕೊಪ್ಪ ತಾಲೂಕಿನ ದೊರಗಲ್ಲು, ಕೊಕ್ಕೊಡು, ಬಾಳೆಗದ್ದೆ, ಕಿರಣಕೆರೆ, ಚಾವಲ್ಮನೆ ಗ್ರಾಮದ ರಸ್ತೆಗಳಲ್ಲಿ ಜೀಪ್ಗಳ ಜಬರ್ದಸ್ತ್ ಆಫ್ ರೋಡ್ ರ್ಯಾಲಿ ನಡೆಯಿತು. ಕೆಸರುಮಯ ರಸ್ತೆಯನ್ನ ಸೀಳಿಕೊಂಡು ಮುನ್ನುಗ್ಗಲು ಯತ್ನಿಸ್ತಿರೋ ಜೀಪ್ಗಳನ್ನ ನೋಡಿ ಜನರು ಸಂತೋಷ ಪಟ್ಟು ಸಂಭ್ರಮಿಸಿದರು. ಸುಂದರ ಹಸಿರ ಸಿರಿಯ ನಡುವೆ ಬೆಟ್ಟಗುಡ್ಡಗಳನ್ನು ಏರಿ ಹೊರಟ ಜೀಪ್ ಸವಾರರಂತೂ ಅಡ್ವೆಂಚರ್ ಜರ್ನಿಯನ್ನ ಸಖತ್ ಎಂಜಾಯ್ ಮಾಡಿದರು. ರಸ್ತೆಯೇ ಇಲ್ಲದ ಬೆಟ್ಟಗುಡ್ಡಗಳನ್ನ ಸೀಳಿಕೊಂಡು ಸಾಗೋ ಈ ಸ್ಪರ್ಧೆ ನೆರೆದಿದ್ದ ಸ್ಪರ್ಧಿಗಳಿಗೆ ಸಖತ್ ರೋಮಾಂಚನಕಾರಿ ಅನುಭವ ನೀಡಿತು.
ಕೊಪ್ಪ ಸ್ಪೋರ್ಟ್ಸ್ ಕ್ಲಬ್-ಅರವಿಂದ ಆಫ್ ಬೀಟ್ ಡ್ರೈವ್ 2020 ಆಫ್ ರೋಡ್ ರ್ಯಾಲಿಯನ್ನು ಆಯೋಜನೆ ಮಾಡಿದ್ದರು. ಈ ಆಫ್ ರೋಡ್ ರ್ಯಾಲಿಯಲ್ಲಿ ಚಿಕ್ಕಮಗಳೂರು ಸೇರಿದಂತೆ ಸಕಲೇಶಪುರ, ಕೊಡಗು, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 50 ಜೀಪ್ಗಳಲ್ಲಿ 100ಕ್ಕೂ ಅಧಿಕ ಸ್ಪರ್ಧಿಗಳು ಆಗಮಿಸಿದ್ದರು. ಸವಾಲಿನ ದಾರಿಯನ್ನ ಬುದ್ಧಿವಂತಿಕೆಯಿಂದ ಎದುರಿಸಿ ಮುನ್ನುಗ್ಗೋ ಸ್ಪರ್ಧಿಗಳು ಗೆಲುವಿಗಾಗಿ ಕಸರತ್ತು ನಡೆಸಿದರು. ಕಾಫಿ ತೋಟ, ಅಡಿಕೆ ತೋಟ, ಹಳ್ಳ ಕೊಳ್ಳಗಳ ಮಧ್ಯೆ ಕೆಸರುಮಯ ರಸ್ತೆಗಳಲ್ಲಿ ಸಾಗಿದ ಪಯಣ ನಿಜಕ್ಕೂ ಎದೆ ನಡುಗಿಸುವಂತಿತ್ತು.