ETV Bharat / state

ಕಾಂಗ್ರೆಸ್ ಹತಾಶೆಯಾಗಿ ಉಚಿತಗಳ ಮಹಾಪೂರವನ್ನೇ ಹರಿಸುತ್ತಿದೆ: ಶಾಸಕ ಸಿಟಿ ರವಿ

author img

By

Published : Jan 26, 2023, 9:16 PM IST

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ

ಕಾಫಿನಾಡಲ್ಲಿ 74ನೇ ಗಣರಾಜ್ಯೋತ್ಸವದ ಸಂಭ್ರಮ - ಜಿಲ್ಲಾಧಿಕಾರಿ ಕೆ ಎನ್ ರಮೇಶ್‌ ದ್ವಜಾರೋಹಣ - ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲ‌‌ನ.

ಪದ್ಮಶ್ರೀ ಪ್ರಶಸ್ತಿ ಕುರಿತು ಶಾಸಕ ಸಿ ಟಿ ರವಿ ಅವರು ಮಾತನಾಡಿದರು

ಚಿಕ್ಕಮಗಳೂರು: ಕಾಂಗ್ರೆಸ್ ಹತಾಶೆಯಾಗಿ ಉಚಿತಗಳ ಮಹಾಪೂರವನ್ನೇ ಹರಿಸುತ್ತಿದೆ. ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಅನ್ನೋದಕ್ಕೆ ಇತಿಹಾಸವೇ ಸಾಕ್ಷಿ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ. ಕಾಫಿನಾಡಲ್ಲಿ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ಜಿಲ್ಲಾಧಿಕಾರಿ ಕೆ. ಎನ್ ರಮೇಶ್‌ ದ್ವಜಾರೋಹಣ ನೆರವೇರಿಸಿದ್ದು, ನಗರದ ಸುಭಾಷ್ ಚಂದ್ರಬೋಸ್ ಮೈದಾನದಲ್ಲಿ ಪೊಲೀಸ್, ಎನ್​ಸಿಸಿ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲ‌‌ನ ನಡೆಯಿತು.

ರಾಹುಲ್ ಗಾಂಧಿ ನೀಡಿದ ಭರವಸೆಯನ್ನೇ ಈಡೇರಿಸಿಲ್ಲ: ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿ ಟಿ ರವಿ, ರಾಜ್ಯದ ಜನರಿಗೆ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ರಾಜಸ್ಥಾನದ ಚುನಾವಣೆ ಪ್ರಚಾರದ ವೇಳೆ ಕೊಟ್ಟ ಭರವಸೆಯನ್ನೇ ಈಡೇರಿಸಿಲ್ಲ. ರಾಜಸ್ಥಾನದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ದಿನದಲ್ಲಿ ಸಾಲಮನ್ನಾ ಭರವಸೆ ನೀಡಿತ್ತು. ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ನೀಡಿದ ಭರವಸೆಯನ್ನೇ ಈಡೇರಿಸಿಲ್ಲ ಎಂದರು.

ಪದ್ಮಶ್ರೀ ಪ್ರಶಸ್ತಿ ಪೀಪಲ್ ಪ್ರಶಸ್ತಿಯಾಗಿದೆ: ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ರಾಜ್ಯದಲ್ಲಿ ಬಿಜೆಪಿಗೆ ನಿಚ್ಚಳವಾದ ಬಹುಮತ ಬರುವ ವಿಶ್ವಾಸವಿದೆ. ಕಾಂಗ್ರೆಸ್ ರಾಜ್ಯದಲ್ಲೂ ಮುಂಬರುವ ಚುನಾವಣೆಗಾಗಿ ಸುಳ್ಳು ಭರವಸೆ ನೀಡುತ್ತಿದೆ. ಹೆಸರು ಪ್ರಜಾಧ್ವನಿ ಯಾತ್ರೆ. ಆದರೆ ಮಾಡುತ್ತಿರುವುದು ಪ್ರಜಾದ್ರೋಹದ ಕೆಲಸ ಎಂದು ಹೇಳಿದರು. ನಂತರ ಮೋದಿ ಬಂದ ಮೇಲೆ ಪದ್ಮಶ್ರೀ ಪ್ರಶಸ್ತಿ ಹಿರಿಮೆ - ಗರಿಮೆ ಹೆಚ್ಚಾಗಿದೆ. ಈಗ ಪದ್ಮಶ್ರೀ ಪ್ರಶಸ್ತಿ ಪೀಪಲ್ ಪ್ರಶಸ್ತಿಯಾಗಿದೆ. ಈ ಹಿಂದೆ ಪದ್ಮಶ್ರೀ ಪ್ರಶಸ್ತಿಗೆ ದೊಡ್ಡ ಲಾಭಿ ನಡೆಯುತ್ತಿತ್ತು. ಈಗ ಜನರ ಭಾವನೆಯಿಂದ ಹೆಸರು ವಾಸಿಯಾಗಿರುವವರಿಗೆ ಪ್ರಶಸ್ತಿ ಸಿಕ್ಕಿದೆ ಎಂದರು.

ಇದನ್ನೂ ಓದಿ: ನನಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ: ಎಸ್ ಎಲ್ ಭೈರಪ್ಪ

ಶ್ರೀಮಂತಿಕೆಯನ್ನ ಸೇವೆಗೆ ಉಪಯೋಗಿಸಿದವರು ಸುಧಾಮೂರ್ತಿಯವರು: ಎಲೆ ಮರೆ ಕಾಯಿಯಾಗಿ ಕೆಲಸ ಮಾಡುತ್ತಿರುವವರಿಗೆ ಪ್ರಶಸ್ತಿ ಹುಡುಕಿಕೊಂಡು ಬರುತ್ತಿವೆ. ಕರ್ನಾಟಕದ ಎಂಟು ಗಣ್ಯರಿಗೆ ಪದ್ಮಶ್ರೀ ಲಭಿಸಿದೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಮುತ್ಸದ್ದಿ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ಎಸ್ ಎಂ ಕೃಷ್ಣ ಪದ್ಮವಿಭೂಷಣ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಅಹಂಕಾರದ ಅವಶೇಷವೂ ಇಲ್ಲದೆ, ಶ್ರೀಮಂತಿಕೆಯನ್ನ ಸೇವೆಗೆ ಉಪಯೋಗಿಸಿದವರು ಸುಧಾಮೂರ್ತಿಯವರು. ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಚಾಪು‌ ಮೂಡಿಸಿದವರು ಎಸ್ ಎಲ್ ಭೈರಪ್ಪ ಎಂದು ಅವರು ಹೇಳಿದರು.

ದೊಡ್ಡಗೌಡ್ರು ಕುಟುಂಬದ ಜಗಳದಲ್ಲಿ ನಾವು ತಲೆ ಹಾಕುವುದಕ್ಕೆ ಬಯಸುವುದಿಲ್ಲ: ನಂತರ ಹಾಸನದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ವಿಚಾರದ ಬಗ್ಗೆ ಮಾತನಾಡಿದ ಇವರು, ಅವರ ಕುಟುಂಬದ ಒಳಗಿನ ಜಗಳದಲ್ಲಿ ನಮ್ಮ ಪಾತ್ರ ಏನಿಲ್ಲ. ಆ ಕುಟುಂಬದೊಳಗಿನ ಜಗಳದ ಒಳಗೆ ನಾವೇಕೆ ಕೈ ಹಾಕಬೇಕು. ಆ ಕುಟುಂಬದ ಜಗಳ ಅವರಿಗೆ ಬಿಡ್ತೀವಿ. ದೊಡ್ಡಗೌಡ್ರು ಕುಟುಂಬದ ಜಗಳದಲ್ಲಿ ನಾವು ತಲೆ ಹಾಕುವುದಕ್ಕೆ ಬಯಸುವುದಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ ಟಿ ರವಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಅವರು ಆಕಾಶದಲ್ಲಿ ಇರುವವರು, ನಾನು ಭೂಮಿಯಲ್ಲಿ ಇರುವವನು : ಹೆಚ್​ಡಿಕೆ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.