ETV Bharat / state

ನನಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ: ಎಸ್ ಎಲ್ ಭೈರಪ್ಪ

author img

By

Published : Jan 26, 2023, 5:58 PM IST

Updated : Jan 26, 2023, 7:13 PM IST

ಪ್ರಶಸ್ತಿಗಿಂತಲೂ ಮೀರಿದ ಸಂತೋಷ ಎಂದರೆ ನನ್ನ ಪುಸ್ತಕಗಳನ್ನು ಲಕ್ಷಾಂತರ ಬರಹಗಾರರು ಓದುವುದು - ಪದ್ಮಭೂಷಣ ಪುರಸ್ಕೃತ ಸಾಹಿತಿ ಎಸ್ ಎಲ್ ಭೈರಪ್ಪ

ಪದ್ಮ ಭೂಷಣ ಎಸ್ ಎಲ್ ಭೈರಪ್ಪ
ಪದ್ಮ ಭೂಷಣ ಎಸ್ ಎಲ್ ಭೈರಪ್ಪ

ಪದ್ಮ ಭೂಷಣ ಎಸ್ ಎಲ್ ಭೈರಪ್ಪ ಅವರು ಮಾತನಾಡಿದರು

ಮೈಸೂರು: ನಾನೊಬ್ಬ ಲೇಖಕ, ನನಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ. ಆದರೆ ಈ ಪ್ರಶಸ್ತಿಗಿಂತಲೂ ಮೀರಿದ ಸಂತೋಷವೆಂದರೆ ನನ್ನ ಪುಸ್ತಕಗಳನ್ನು ಲಕ್ಷಾಂತರ ಬರಹಗಾರರು ಓದಿ ಪ್ರತಿದಿನವೂ ಏನಾದರೊಂದು ಸಂತೋಷದ ವಿಚಾರವನ್ನು ಹೇಳುತ್ತಲೇ ಇರುತ್ತಾರೆ ಎಂದು ಪದ್ಮಭೂಷಣ ಪುರಸ್ಕೃತ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಹೇಳಿದ್ದಾರೆ.

ನಿನ್ನೆ(ಬುಧವಾರ) ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿವಾಸಕ್ಕೆ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಭೇಟಿ ನೀಡಿ ಹಿರಿಯ ಕಾದಂಬರಿಕಾರರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬರುವ 2029ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಮುಂದುವರೆಯಲಿ. ಆನಂತರ ನಿವೃತ್ತಿ ಹೊಂದಲಿ ಎಂದು ಹೇಳಿದರು. 'ನಾನು 2019 ರಲ್ಲಿ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮೋದಿ ಸ್ಪಷ್ಟ ಬಹಮತದೊಂದಿಗೆ ಪ್ರಧಾನಿಯಾದರು. ಈಗ ಹೇಳುತ್ತಿದ್ದೇನೆ. 2029 ರವರೆಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆಯಲಿ. ಏಕೆಂದರೆ ಅವರಂಥ ಸೇವಾ ಮನೋಭಾವ ಇರುವ ವ್ಯಕ್ತಿಯನ್ನ ನಾವು ಹಿಂದೆ ನೋಡಿಲ್ಲ. ಅಂತಹ ವ್ಯಕ್ತಿ ಇನ್ನು ಐದು ವರ್ಷಗಳ ಕಾಲ ಪ್ರಧಾನಿಯಾದರೆ ದೇಶಕ್ಕೆ ಒಳ್ಳೆಯದು' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಾನು ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ. ಯಾವ ರಾಜಕೀಯ ಪಕ್ಷವನ್ನು ಓಲೈಕೆ ಮಾಡಲು ಈ ಮಾತನ್ನು ಹೇಳುತ್ತಿಲ್ಲ. ದೇಶಕ್ಕೆ ಉತ್ತಮ ಆಡಳಿತವನ್ನು ಮೋದಿ ನೀಡುತ್ತಿದ್ದಾರೆ. ಹಾಗಾಗಿ ಅವರ ಸೇವೆ ಇನ್ನಷ್ಟು ಕಾಲ ಈ ದೇಶಕ್ಕೆ ಬೇಕಾಗಿದೆ. ಆ ದೃಷ್ಠಿಯಿಂದ ಈ ಮಾತನ್ನ ಹೇಳುತ್ತಿದ್ದೇನೆ ಎಂದು ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿಕೆ ನೀಡಿದರು.

ಬಿಬಿಸಿ ಸಾಕ್ಷ್ಯ ಚಿತ್ರಕ್ಕೆ ಸಾಹಿತಿ ಕಿಡಿ: ಗುಜರಾತ್​ನ ಗಲಭೆಗೆ ಅಂದು ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಕಾರಣ ಎಂದು ಬಿಂಬಿಸುವ ಬಿಬಿಸಿ ಸಾಕ್ಷ್ಯ ಚಿತ್ರಕ್ಕೆ, ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಕಿಡಿಕಾರಿದ್ದಾರೆ. ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು, ಈಗ ಏಕೆ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಇತ್ತೀಚೆಗೆ ನರೇಂದ್ರ ಮೋದಿ ಮುಂದಾಳತ್ವದಲ್ಲಿ ಭಾರತ ಆರ್ಥಿಕವಾಗಿ ಹಾಗೂ ಇತರ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುತ್ತಿದೆ. ಇದನ್ನ ಸಹಿಸಿಕೊಳ್ಳಲು ಸಾಧ್ಯವಾಗದವರು ಈ ರೀತಿ ಕೆಲಸವನ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಸಾಹಿತಿಗಳು, ಹಾಗಾದರೆ ಅಯೋದ್ಯೆಗೆ ಬರುತ್ತಿದ್ದ, ಕರಸೇವೆಗೆ ಬರುತ್ತಿದ್ದ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿದವರು ಯಾರು?. ಈ ಘಟನೆಗೆ ಕಾರಣರಾದವರ ಬಗ್ಗೆ ಈ ಸಾಕ್ಷ್ಯಚಿತ್ರದಲ್ಲಿ ಪ್ರಸ್ತಾವನೆ ಮಾಡಲಾಗಿಲ್ಲ ಎಂದು ಟೀಕಿಸಿದರು.

ಏಕರೂಪ ನಾಗರೀಕ ಸಂಹಿತೆ ಜಾರಿ ಸರಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವಿಗೆ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಬೆಂಬಲಿಸಿದ್ದು, ಈ ದೇಶದಲ್ಲಿ ನೆಲಸಿರುವ ಎಲ್ಲ ನಾಗರಿಕರು ಸಮಾನರು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಕಾರಣಕ್ಕಾಗಿ ಏಕ ರೂಪ ನಾಗರಿಕ ಸಂಹಿತೆ ಜಾರಿಗೆ ಮಾಡುವುದು ಅವಶ್ಯಕ. ಈ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನನ್ನ ಬೆಂಬಲ ಇದೆ ಎಂದು ಹಿರಿಯ ಸಾಹಿತಿ ಎಸ್ ಎಲ್. ಭೈರಪ್ಪ ಇದೇ ವೇಳೆ ಸ್ಪಷ್ಟಪಡಿಸಿದರು.

ಓದಿ : ಪದ್ಮವಿಭೂಷಣ ಬಯಸದೇ ಬಂದ ಭಾಗ್ಯ, ಕನ್ನಡಿಗರಿಗೆ ಈ ಪ್ರಶಸ್ತಿ ಅರ್ಪಣೆ: ಮಾಜಿ ಸಿಎಂ ಎಸ್ ಎಂ ಕೃಷ್ಣ

Last Updated :Jan 26, 2023, 7:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.