ETV Bharat / state

ಅನೈತಿಕ ಸಂಬಂಧದ ಶಂಕೆ: ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ, ಮಹಿಳೆ ಸಾವು

author img

By ETV Bharat Karnataka Team

Published : Oct 14, 2023, 9:18 PM IST

husband killed his wife incident
ಪತಿ ಪತ್ನಿಯನ್ನು ಕೊಲೆಗೈದಿರುವ ಘಟನೆ

ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ಅನೈತಿಕ ಸಂಬಂಧದ ಬಗ್ಗೆ ಸಂಶಯ ಪಟ್ಟು ಪತಿ ಪತ್ನಿಯನ್ನು ಕೊಲೆಗೈದಿದ್ದಾನೆ.

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಪತ್ನಿಯ ಅನೈತಿಕ ಸಂಬಂಧ ಬಗ್ಗೆ ಶಂಕೆ ವ್ಯಕ್ತಪಡಿಸಿ ಪತಿ ಪತ್ನಿಯನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ನಡೆದಿದೆ.

ಮೃತಳನ್ನು ಪದ್ಮಾಕ್ಷಿ (40) ಎಂದು ಗುರುತಿಸಲಾಗಿದೆ. ಕಿರಗುಂದ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ-ಪದ್ಮಾಕ್ಷಿ ದಂಪತಿ ಮಧ್ಯೆ ಆಗಾಗ್ಗೆ ಕುಡಿತ ಚಟ ಮತ್ತು ಅನೈತಿಕ ಸಂಬಂಧದ ಬಗ್ಗೆ ಗಲಾಟೆ ನಡೆಯುತ್ತಲೇ ಇತ್ತು ಎಂಬ ಮಾತುಗಳು ಕೇಳಿಬಂದಿವೆ.

ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದ ಪತಿ ಚಂದ್ರ ಪತ್ನಿ ಜೊತೆ ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿ ಅನೈತಿಕ ಸಂಬಂಧದ ವಿಷಯ ತೆಗೆದು ಜಗಳವಾಡಿ ಪತ್ನಿಗೆ ಹೊಡೆದಿದ್ದಾನೆ. ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಕೊಡಲಿಯಿಂದ ಹಲ್ಲೆಗೈದ ಪತಿ ಆಕೆಯನ್ನು ಮನೆಯಿಂದ ಹೊರತಳ್ಳಿ ಬಾಗಿಲು ಹಾಕಿಕೊಂಡು ಮಲಗಿದ್ದಾನೆ. ಕೊಡಲಿಯಿಂದ ಹಲ್ಲೆಗೈದಿದ್ದರಿಂದ ಇಡೀ ರಾತ್ರಿ ರಕ್ತಸ್ರಾವವುಂಟಾಗಿ ಮಹಿಳೆ ಪದ್ಮಾಕ್ಷಿ ಅತಿಯಾದ ಶೀತದಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಪತ್ನಿಗೆ ಹೊಡೆದು ಹೊರ ತಳ್ಳಿ ಮಲಗಿದ್ದ ಪತಿ ಚಂದ್ರ ಬೆಳಗ್ಗೆ ಎದ್ದು ನೋಡಿದಾಗ ಪತ್ನಿ ಸಾವಿಗೀಡಾಗಿದ್ದನ್ನು ಕಂಡು ಪತ್ನಿಯ ಶವದ ಮುಂದೆ ಕೂತು ಕಣ್ಣೀರಿಟ್ಟಿದ್ದಾನೆ.

ಮೃತಳಿಗೆ 18 ಹಾಗೂ 15 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು ಇವರಿಬ್ಬರ ಜಗಳದ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಬೆಳಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಚಂದ್ರನನ್ನು ಬಂಧಿಸಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯೇಕ ಘಟನೆ - ಮಗಳನ್ನು ಕೊಲೆ ಮಾಡಿ ತಾಯಿ ಆತ್ಮಹತ್ಯೆ.. ಮಗಳನ್ನು ತಾಯಿಯೇ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಗಮ್‌ಬಿ (45) ಎಂಬ ತಾಯಿ ತನ್ನ ಮಗಳಾದ ಶಮಬಾನು (18)ಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಇದೇ ವೇಳೆ ಬೇಗಮ್‌ಬಿ ತನ್ನ ಮಗ ಅಮಾನುಲ್ಲಾ ಮೇಲೆಯೂ ಹಲ್ಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳು ತನ್ನ ಮಾತು ಕೇಳುತ್ತಿಲ್ಲ ಎಂದು ತಾಯಿ ಹಾಗೂ ಮಕ್ಕಳಿಬ್ಬರ ನಡುವೆ ಶುಕ್ರವಾರ ರಾತ್ರಿ ಕಲಹ ನಡೆದಿದೆ. ಈ ಸಂದರ್ಭದಲ್ಲಿ ತಾಯಿ ಬೇಗಮ್‌ಬಿ ತನ್ನ ಇಬ್ಬರೂ ಮಕ್ಕಳಿಗೆ ಕಟ್ಟಿಗೆಯಿಂದ ಬಲವಾಗಿ ತಲೆಗೆ ಹೊಡೆದಿದ್ದಾರೆ. ಇಬ್ಬರೂ ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಅವರಿಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಳಿಕ ಬೇಗಮ್‌ಬಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:ಬುದ್ಧಿಮಾಂದ್ಯ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.