ETV Bharat / state

ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡದಿಂದ ₹10 ಲಕ್ಷ ನಷ್ಟ: ನೌಕರನ ಅಮಾನತು

author img

By ETV Bharat Karnataka Team

Published : Dec 2, 2023, 10:59 PM IST

Etv Bharatmore-then-10-lakh-loss-due-to-fire-accident-in-male-mahadeshwar-hill
ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡದಿಂದ ₹10 ಲಕ್ಷ ನಷ್ಟ: ನೌಕರನ ಅಮಾನತು

ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಲಾಡು ತಯಾರಿಕಾ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಲಕ್ಷ ಮೌಲ್ಯದ ವಸ್ತುಗಳು ನಾಶವಾಗಿವೆ.

ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅವಘಡದಿಂದ 10 ಲಕ್ಷ ರೂ. ಮೌಲ್ಯದ ವಸ್ತು ನಾಶವಾಗಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮಾಹಿತಿ ನೀಡಿ, ಶುಕ್ರವಾರ ಮಧ್ಯಾಹ್ನ ಲಾಡು ಪ್ರಸಾದ ತಯಾರಿಕಾ ಘಟಕದಲ್ಲಿ ನಡೆದ ಅಗ್ನಿ ಅವಘಡದಲ್ಲಿ 36,220 ಲಾಡು, 28 ಟಿನ್ ಎಣ್ಣೆ, 50 ಕೆಜಿಯ 9 ಮೂಟೆ ಸಕ್ಕರೆ, 30 ಕೆಜಿ ದ್ರಾಕ್ಷಿ, 40 ಕೆಜಿ ನಂದಿನಿ ತುಪ್ಪ, 96 ಕೆಜಿ ಕಡ್ಲೆ ಹಿಟ್ಟು ಸಿಲಿಂಡರ್ ಪೈಪ್ ಲೈನ್ ಸಂಪೂರ್ಣ ಹಾನಿಯಾಗಿದೆ. ಒಟ್ಟಾರೆ ಅಗ್ನಿ ಅವಘಡದಿಂದ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ 10.2 ಲಕ್ಷ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.

ನೌಕರನ ಅಮಾನತು: ಲಾಡು ಪ್ರಸಾದ ತಯಾರಿಕಾ ಘಟಕದಲ್ಲಿ ಸಿಲಿಂಡರ್​ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಬಿದ್ದು ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಕೆ.ಪಿ. ಮಹದೇವಸ್ವಾಮಿ ಅವರನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಮಾನತು‌ ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಹಾಗೂ ಹಿರಿಯ ಅಧಿಕಾರಿಗಳ ಆದೇಶದನ್ವಯ ಲಾಡು ಪ್ರಸಾದ ತಯಾರಿಕಾ ಘಟಕದ ದ್ವಿತೀಯ ದರ್ಜೆ ಸಹಾಯಕ ಕೆಪಿ ಮಹದೇವಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಸರಸ್ವತಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಗ್ನಿ ದುರಂತದಲ್ಲಿ ಏಳು ಕಾರ್ಮಿಕರು ಸಾವು: ಮೃತರ ಕುಟುಂಬಗಳಿಗೆ 50 ಲಕ್ಷ ಪರಿಹಾರ ಘೋಷಿಸಿದ ಕಂಪನಿ

ಹೊತ್ತಿ ಉರಿದ ಜ್ಯುವೆಲ್ಲರಿ(ಗಂಗಾವತಿ): ಇತ್ತೀಚೆಗೆ, ಚಿನ್ನಾಭರಣ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಆಸ್ತಿ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಸಂಭವಿಸಿತ್ತು. ಗಂಗಾವತಿ ನಗರದ ಹೃದಯ ಭಾಗದಲ್ಲಿರುವ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಆ ಕಟ್ಟಡದಲ್ಲಿದ್ದ ಜ್ಯುವೆಲರಿ ಶಾಪ್​ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು

ನಗರದ ಗಣೇಶ ಸರ್ಕಲ್​ನಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಈ ಕಟ್ಟಡದಲ್ಲಿ ಕೆಜೆಪಿ ಜ್ಯುವೆಲರಿ ಶಾಪ್ ಇದೆ. ನೋಡು ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಮೂರು ಅಂತಸ್ತಿಗೆ ಆವರಿಸಿತ್ತು. ಹೀಗಾಗಿ ಶಾಪ್​ನಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ ಸೇರಿದಂತೆ ಇತರ ವಸ್ತುಗಳು ಸುಟ್ಟು ಕರಕಲಾಗಿರುವ ಶಂಕೆ ವ್ಯಕ್ತವಾಗಿತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.