ETV Bharat / state

ತೆಲಂಗಾಣ ಸಿಎಂ ಕೆಸಿಆರ್-ಹೆಚ್​ಡಿಕೆ ದೋಸ್ತಿ.. 2023ರ ಚುನಾವಣಾ ಲೆಕ್ಕಾಚಾರವೇನು?

author img

By

Published : Oct 8, 2022, 10:06 AM IST

Telangana CM KCR and HD Kumaraswamy
ಕೆಸಿಆರ್-ಹೆಚ್​ಡಿಕೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಹೋರಾಡಿ 130 ರಿಂದ 140 ಸೀಟುಗಳನ್ನು ಗೆದ್ದು ಸ್ವಯಂ ಬಲದ ಮೇಲೆ ಅಧಿಕಾರ ಹಿಡಿಯಲು ಪ್ರಯತ್ನಿಸಿ. ಇದಕ್ಕೆ ನನ್ನಿಂದ ಏನು ಸಾಧ್ಯವೋ ಅಷ್ಟೆಲ್ಲ ನೆರವು ನಿಮಗೆ ಸಿಗುತ್ತದೆ ಎಂದು ಚಂದ್ರಶೇಖರ್​ ರಾವ್ ಅವರು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ.

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಜೆಡಿಎಸ್​​ನ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​​ ರಾವ್ ಅವರ ಸಖ್ಯ ಬೆಳೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಜೊತೆ ಮಹತ್ವದ ಸಮಾಲೋಚನೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ.

ಕೆಸಿಆರ್ ನೀಡಿದ ಸಲಹೆ ಏನು?: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಹೋರಾಡಿ 130 ರಿಂದ 140 ಸೀಟುಗಳನ್ನು ಗೆದ್ದು ಸ್ವಯಂ ಬಲದ ಮೇಲೆ ಅಧಿಕಾರ ಹಿಡಿಯಲು ಪ್ರಯತ್ನಿಸಿ. ಇದಕ್ಕೆ ನನ್ನಿಂದ ಏನು ಸಾಧ್ಯವೋ ಅಷ್ಟೆಲ್ಲ ನೆರವು ನಿಮಗೆ ಸಿಗುತ್ತದೆ ಎಂದು ಚಂದ್ರಶೇಖರ್​ ರಾವ್ ಸಲಹೆ ನೀಡಿದ್ದಾರೆ.

ಕರ್ನಾಟಕ ರಾಜಕಾರಣದ ಕುರಿತಂತೆ ಇದುವರೆಗೆ ನಡೆದ ಸರ್ವೇಗಳು ಜೆಡಿಎಸ್ ಪಕ್ಷವನ್ನು ಮೂರನೇ ಸ್ಥಾನದಲ್ಲಿರಿಸಿವೆ. ಪ್ರತಿಪಕ್ಷ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದರೆ, ಆಡಳಿತಾರೂಢ ಬಿಜೆಪಿ ಎರಡನೇ ಸ್ಥಾನದಲ್ಲಿದೆ ಎಂಬುದು ಸರ್ವೇಗಳ ಸದ್ಯದ ಲೆಕ್ಕಾಚಾರ.

ಆದರೆ ಇಂತಹ ಪರಿಸ್ಥಿತಿಯನ್ನು ಬದಲಿಸಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ನಂಬರ್ ಒನ್ ಆಗಿ ಹೊರಹೊಮ್ಮಬೇಕು. ಒಂದು ವೇಳೆ ಇದು ಸಾಧ್ಯವಾಗದೆ ಹೋದರೂ ಜೆಡಿಎಸ್ ಪಕ್ಷ ಪ್ರಬಲ ಶಕ್ತಿಯಾಗಿ ಮೇಲೆದ್ದು ನಿಲ್ಲಬೇಕು ಎಂಬುದು ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್​ ರಾವ್ ಅವರ ಬಯಕೆಯಾಗಿದೆ. ಅವರ ಈ ಬಯಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮೇಲಿನ ಸಿಟ್ಟೇ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕೆಸಿಆರ್ ಹೊಸ ರಾಷ್ಟ್ರೀಯ ಪಕ್ಷ ಬಿಆರ್‌ಎಸ್ ಜೊತೆ ಜೆಡಿಎಸ್ ಮೈತ್ರಿ: ಹೆಚ್ ಡಿ ಕುಮಾರಸ್ವಾಮಿ

ಸ್ಟಾಲಿನ್​ಗೆ ಸ್ನೇಹ ಹಸ್ತ: ತಮಿಳುನಾಡಿನ ರಾಜಕೀಯದಲ್ಲಿ ಮೂಗು ತೂರಿಸಿದಂತೆ ತೆಲಂಗಾಣದ ರಾಜಕಾರಣದಲ್ಲೂ ಬಿಜೆಪಿ ಮೂಗು ತೂರಿಸುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ಪಕ್ಷವನ್ನು ದುರ್ಬಲಗೊಳಿಸಿ ಅಧಿಕಾರ ಹಿಡಿಯಲು ಅದು ಬಯಸಿದೆ ಎಂಬುದು ಕೆ.ಚಂದ್ರಶೇಖರ್​ ರಾವ್ ಅವರಿಗೆ ಪಕ್ಕಾ ಆಗಿದೆ.

ಹೀಗಾಗಿ ಪ್ರಧಾನಿ ಮೋದಿ ಅವರ ವಿರುದ್ಧ ತಿರುಗಿಬಿದ್ದ ಚಂದ್ರಶೇಖರ್​ ರಾವ್ ಎಲ್ಲೆಂದರಲ್ಲಿ ಅವರನ್ನು ಟೀಕಿಸತೊಡಗಿದರು. ಅಷ್ಟೇ ಅಲ್ಲದೇ, ಬಿಜೆಪಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಒಂದು ಒಕ್ಕೂಟ ಮೇಲೇಳಬೇಕು ಅಂತಾ ಬಯಸಿದರು. ಹಾಗಾಗಿಯೇ, ಕೆಸಿಆರ್ ತಮಿಳುನಾಡಿನ ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಅವರಿಗೆ ಸ್ನೇಹ ಹಸ್ತ ಚಾಚಿದರು.

ತಲೆ ಎತ್ತಲು ಹೋರಾಟ ನಡೆಸಿದ್ದ ಬಿಜೆಪಿಗೆ ಹೊಡೆತ ಕೊಡಲು ಸ್ಟಾಲಿನ್ ಅವರಿಗೆ ತಮ್ಮಿಂದಾದ ನೆರವು ನೀಡಿದರು. ಅವರ ನೆರವಿನಿಂದಲೇ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಿತು ಎಂದು ಹೇಳಲಾಗದಿದ್ದರೂ, ಚಂದ್ರಶೇಖರ್​ ರಾವ್ ಅವರ ಸಹಕಾರ ಸ್ಟಾಲಿನ್ ಅವರಿಗೆ ಅನುಕೂಲ ಮಾಡಿಕೊಟ್ಟಿತು ಎಂಬುದಂತೂ ನಿಜ.

ಮೋದಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಒಕ್ಕೂಟ: ಹೀಗೆ ನೋಡ ನೋಡುತ್ತಿದ್ದಂತೆ ಕೆ.ಚಂದ್ರಶೇಖರ್​ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಒಂದು ಒಕ್ಕೂಟ ಕಟ್ಟಲು ಹೊರಟಿದ್ದಾರೆ. ಇದೇ ಕಾರಣಕ್ಕಾಗಿ ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಆರ್​ಜೆಡಿಯ ತೇಜಸ್ವಿ ಯಾದವ್, ಕೇರಳದ ಪಿಣರಾಯಿ ವಿಜಯನ್, ತಮಿಳುನಾಡಿನ ಎಂ.ಕೆ ಸ್ಟಾಲಿನ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಕರ್ನಾಟಕದ ಹೆಚ್.ಡಿ ದೇವೇಗೌಡ ಸೇರಿದಂತೆ ಹಲವರ ಆಪ್ತ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ: ಕೆಸಿಆರ್ ಭೇಟಿಯಾದ ಹೆಚ್​ಡಿಕೆ: ಪರ್ಯಾಯ ರಾಜಕೀಯ ಕೂಟ ರಚನೆ ಬಗ್ಗೆ ಚರ್ಚೆ

ಇಂತಹ ನಾಯಕರನ್ನೆಲ್ಲ ಒಗ್ಗೂಡಿಸಿ ಒಕ್ಕೂಟ ರಚಿಸಿದರೆ ಮತ್ತು ಸಾಧ್ಯವಿರುವ ಕಡೆಯಲ್ಲಿ ಬಿಜೆಪಿಯನ್ನು ತಡೆದರೆ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ದೇಶದ ರಾಜಕಾರಣದಲ್ಲಿ ಹೊಸ ಅಲೆ ಶುರುವಾಗಬಹುದು ಎಂಬುದು ಕೆಸಿಆರ್ ಅವರ ಲೆಕ್ಕಾಚಾರ. ಇಂತಹ ಲೆಕ್ಕಾಚಾರ ಇರುವ ಕಾರಣಕ್ಕೆ ಚಂದ್ರಶೇಖರ್​ ರಾವ್ ಅವರು ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದ ಜೆಡಿಎಸ್ ಮೇಲೆದ್ದು ನಿಲ್ಲಲಿ, ಅಧಿಕಾರ ಹಿಡಿಯಲಿ ಎಂದು ಬಯಸುತ್ತಿದ್ದಾರೆ.

ಜೆಡಿಎಸ್ ಗೆಲುವಿಗೆ ನೆರವು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿದರೆ, ಇಲ್ಲವೇ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೆ 2024ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಬೀದರ್, ರಾಯಚೂರು, ಕೊಪ್ಪಳದಂತಹ ಕ್ಷೇತ್ರಗಳಲ್ಲಿ ತಮಗೆ ಬೇಕಿರುವವರು ಗೆಲ್ಲುವಂತೆ ನೋಡಿಕೊಳ್ಳಬಹುದು ಎಂಬುದು ಅವರ ಯೋಚನೆ.

ಆದರೆ ಇದು ಸಾಧ್ಯವಾಗಬೇಕು ಎಂದರೆ ಮೊದಲು 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕಲ್ಲ?. ಹೀಗಾಗಿ ಮೊನ್ನೆ ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಆ ಭಾಗದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿಗೆ ನನ್ನಿಂದ ಏನು ಮಾಡಲು ಸಾಧ್ಯವೋ? ಅದನ್ನು ಮಾಡುತ್ತೇನೆ ಎಂದು ವಚನ ಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಭಾಗದ 30 ಕ್ಷೇತ್ರಗಳ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದು ಜೆಡಿಎಸ್ ಕೆಲಸ. ಈ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯನ್ನು ನೋಡಿಕೊಳ್ಳುವುದು ನಮ್ಮ ಕೆಲಸ ಎಂದು ಚಂದ್ರಶೇಖರ್​ ರಾವ್ ಅಭಯ ನೀಡಿದ್ದಾರೆ ಎನ್ನಲಾಗ್ತಿದೆ.

ಜೆಡಿಎಸ್ ಬೆಂಬಲಕ್ಕೆ ತಮ್ಮೊಂದಿಗೆ ತಮಿಳುನಾಡಿನ ಸ್ಟಾಲಿನ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಕೇರಳದ ಪಿಣರಾಯಿ ವಿಜಯನ್ ಕೂಡಾ ಕೈಗೂಡಿಸಲಿದ್ದು, ಇದರ ಪರಿಣಾಮವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಗೊಲ್ಲರು, ತಮಿಳರು, ತೆಲುಗು ಭಾಷಿಕರ ಮೇಜರ್ ಷೇರು ನಿಮಗೆ ದೊರೆಯುತ್ತದೆ ಎಂಬುದು ಚಂದ್ರಶೇಖರ್​ ರಾವ್ ಸಲಹೆಯಾಗಿದೆ. ಹೀಗಾಗಿ ಜೆಡಿಎಸ್ ಪಕ್ಷ ಡಾರ್ಕ್ ಹಾರ್ಸ್ ಆಗಿ ಹೊರಹೊಮ್ಮುವುದು ಖಚಿತ ಎಂಬುದು ಚಂದ್ರಶೇಖರ್​ ರಾವ್ ನಂಬಿಕೆ.

ಕಾಸ್ಮೋಪಾಲಿಟನ್ ವೋಟ್ ಬ್ಯಾಂಕ್ ಸೃಷ್ಟಿ: ಬೆಂಗಳೂರಿನ ಕೆಆರ್​ಪುರಂ, ಹೊಸಕೋಟೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸೇರಿದಂತೆ ಹಲವು ಕ್ಷೇತ್ರಗಳು, ರಾಯಚೂರು ಹೀಗೆ ಕರ್ನಾಟಕದ 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೊಲ್ಲರ ಮತಗಳು ಹೆಚ್ಚಿವೆ.

ಬೆಂಗಳೂರು, ಕೋಲಾರ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಹಲವು ಕ್ಷೇತ್ರಗಳಲ್ಲಿ ತಮಿಳು ಭಾಷಿಕರ ಮತಗಳು ಹೆಚ್ಚಿವೆ. ಹೀಗಾಗಿ ಕರ್ನಾಟಕದ 150 ಕ್ಷೇತ್ರಗಳಲ್ಲಿ ಹಲವು ವೋಟ್ ಬ್ಯಾಂಕುಗಳು ಕೈ ಜೋಡಿಸುತ್ತವೆ. ಆ ಮೂಲಕ ಕಾಸ್ಮೋಪಾಲಿಟನ್ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತದೆ. ಜೆಡಿಎಸ್​ಗೆ ಶಕ್ತಿ ತುಂಬುತ್ತವೆಂದು ಕೆಸಿಆರ್ ನಂಬಿದ್ದಾರೆ.

ರೈತರ ಜೊತೆ ಅಲ್ಪಸಂಖ್ಯಾತರು ಮತ್ತು ದಲಿತರು ಮೋದಿ ಸರ್ಕಾರದ ವಿರುದ್ಧ ನಿಂತರೆ ಎಲ್ಲ ರಾಜ್ಯಗಳಲ್ಲೂ ಬಿಜೆಪಿಗೆ ಘಾಸಿಯಾಗಲಿದೆ. ಕರ್ನಾಟಕದಲ್ಲಿ ಜೆಡಿಎಸ್ ನಿರೀಕ್ಷೆ ಮೀರಿದ ಸಾಧನೆ ಮಾಡಲಿದೆ ಎಂದು ಚಂದ್ರಶೇಖರ್​ ರಾವ್ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ. ಅವರ ಈ ಮಾತು ಕುಮಾರಸ್ವಾಮಿ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನಾಳೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.