ಬೆಂಗಳೂರು: ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯ ಕೀ ಉತ್ತರಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಕೀ ಉತ್ತರಗಳನ್ನು ಪರೀಕ್ಷಿಸಿಕೊಳ್ಳಬಹುದು. ಆಕ್ಷೇಪಣೆಗಳಿದ್ದಲ್ಲಿ ಆನ್ನೈಲ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಮುಖ್ಯ ಪರೀಕ್ಷೆಗೆ ಸಂಬಂಧಪಟ್ಟಂತೆ ಎಲ್ಲ ವಿಷಯಗಳ ಕೀ ಉತ್ತರಗಳನ್ನು ಮಂಡಳಿ kseab.karnataka.gov.in ಯಲ್ಲಿ ಪ್ರಕಟಿಸಿದೆ. ಮೂರು ದಿನಗಳೊಳಗೆ ಕೀ ಉತ್ತರಗಳ ಕುರಿತು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು.
ಆಕ್ಷೇಪಣೆ ಸಲ್ಲಿಸುವುದು ಹೇಗೆ?: ವಿದ್ಯಾರ್ಥಿಯು ಮಂಡಳಿಯ ಅಂತರ್ಜಾಲದಲ್ಲಿ ಲಾಗಿನ್ ಆಗಿ ನೋಂದಣಿ ಸಂಖ್ಯೆ, ಒಟಿಪಿ ದಾಖಲಿಸಿ ಆಕ್ಷೇಪಣೆ ಸಲ್ಲಿಸಬಹುದು. ಏಪ್ರಿಲ್ 16 ರಿಂದ ಏಪ್ರಿಲ್ 18ರ ಸಂಜೆ 5.30 ರ ವರೆಗೆ ಸಲ್ಲಿಕೆಗೆ ಕಾಲಾವಕಾಶವಿದೆ.
ಈ ಬಾರಿ ಪರೀಕ್ಷೆಗೆ ಒಟ್ಟು 15,498 ಶಾಲೆಗಳಿಂದ ವಿದ್ಯಾರ್ಥಿಗಳು ನೋಂದಾಯಿತರಾಗಿದ್ದರು. 5,833 ಸರ್ಕಾರಿ ಶಾಲೆಗಳು, 3605 ಅನುದಾನಿತ ಶಾಲೆಗಳು ಹಾಗು 6060 ಅನುದಾನರಹಿತ ಶಾಲೆಗಳಿಂದ ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. 7,94,611 ಮಂದಿ ಮೊದಲ ಬಾರಿ ಪರೀಕ್ಷೆ ಬರೆಯುವ ಶಾಲಾ ವಿದ್ಯಾರ್ಥಿಗಳಾಗಿದ್ದರೆ, 20,750 ಪುನರಾವರ್ತಿತ ವಿದ್ಯಾರ್ಥಿಗಳು, 18,272 ಖಾಸಗಿ ಅಭ್ಯರ್ಥಿಗಳು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನ 301 ಪುನರಾವರ್ತಿತ ಅಭ್ಯರ್ಥಿಗಳು ಹಾಗು 2010ಕ್ಕಿಂತ ಹಿಂದಿನ ಸಾಲಿನ 15 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಇದ್ದರು. 1845 ಕ್ಲಸ್ಟರ್ ಪರೀಕ್ಷಾ ಕೇಂದ್ರ, 1354 ನಾನ್ ಕ್ಲಸ್ಟರ್ ಪರೀಕ್ಷಾ ಕೇಂದ್ರಗಳು, 106 ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 3,60,862 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು, 2,20,831 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು, 2,61,118 ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳಿದ್ದರು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 3305 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು.
ಶೇ 10 ರಷ್ಟು ಕೃಪಾಂಕ: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದ ಪ್ರಮಾಣ ಹೆಚ್ಚಿಸಲು ಈ ವರ್ಷವೂ ಶೇ. 10 ರಷ್ಟು ಕೃಪಾಂಕ ನೀಡಲು ಕೆಎಸ್ಇಎಬಿ ನಿರ್ಧರಿಸಿದೆ. ಉತ್ತೀರ್ಣಕ್ಕೂ ಕಡಿಮೆ ಅಥವಾ ಒಟ್ಟಾರೆ ಕನಿಷ್ಠ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.10 ರಷ್ಟು ಕೃಪಾಂಕ ನೀಡುವ ಮೂಲಕ ಉತ್ತೀರ್ಣದ ಸಮೀಪಕ್ಕೆ ಬಂದು ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಅವಕಾಶ ಕಲ್ಪಿಸಿದೆ.
ಇದನ್ನೂಓದಿ: ಭಾರತೀಯ ಶಿಕ್ಷಣ ಪದ್ಧತಿ ಆಧರಿತ ಹೊಸ ಡಿಗ್ರಿ ಕೋರ್ಸ್ಗಳ ಆರಂಭ