ETV Bharat / state

ಕೋರ್ ಕಮಿಟಿ ಸಭೆ: ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಸಿಎಂಗೆ ಮನವಿ

author img

By

Published : Oct 7, 2022, 12:31 PM IST

ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಸಿಎಂಗೆ ಮನವಿ
ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಸಿಎಂಗೆ ಮನವಿ

ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವಂತೆ ಸರ್ವಾನುಮತದಿಂದ ಸಿಎಂಗೆ ಆಗ್ರಹ ಮಾಡಲಾಗಿದೆ. ಬಿಜೆಪಿ ಬಹಳ ಹಿಂದಿನಿಂದಲೂ ಎಸ್ಸಿ, ಎಸ್ಟಿ ಸಮುದಾಯದ ಪರವಾಗಿ ಕೆಲಸ ಮಾಡಿದೆ. ಅಕ್ಟೋಬರ್ 9 ರೊಳಗೆ ನಿರ್ಣಯಕ್ಕೆ ಸೂಚನೆ ನೀಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

ಬೆಂಗಳೂರು: ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವಂತೆ ಸರ್ವಾನುಮತದಿಂದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ಒತ್ತಾಯ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಮೀಸಲಾತಿ ಹೆಚ್ಚಳ, ರಾಜ್ಯ ಪ್ರವಾಸ, ಸಮಾವೇಶಗಳ ಆಯೋಜನೆ ಕುರಿತು ಮಹತ್ವದ ಮಾತುಕತೆ ನಡೆಸಲಾಯಿತು.

ಸರ್ವಾನುಮತದಿಂದ ಸಿಎಂಗೆ ಆಗ್ರಹ: ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ ರವಿ, ಇಂದು ಬೆಳಗ್ಗೆ 9ರಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಸರ್ವಾನುಮತದಿಂದ ಸಿಎಂಗೆ ಆಗ್ರಹ ಮಾಡಲಾಗಿದೆ. ಅಕ್ಟೋಬರ್ 9 ರ ಒಳಗೆ ವಾಲ್ಮೀಕಿ ಸಮುದಾಯದ ಎಸ್ಟಿ ಮೀಸಲಾತಿ ಬೇಡಿಕೆ ಪುರಸ್ಕರಿಸಿ, ಹೆಚ್ಚಿಸುವ ನಿರ್ಣಯ ಮಾಡುವಂತೆ ಮನವಿ ಮಾಡಿದೆ. ಬಿಜೆಪಿ ಬಹಳ ಹಿಂದಿನಿಂದಲೂ ಎಸ್ಸಿ, ಎಸ್ಟಿ ಸಮುದಾಯದ ಪರವಾಗಿ ಕೆಲಸ ಮಾಡಿದೆ. ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸುವ ನಿರ್ಣಯ ಮಾಡಲಾಗಿದೆ ಎಂದರು.

ಬಿಜೆಪಿ‌ ಸಾಮಾಜಿಕ ನ್ಯಾಯಕ್ಕಾಗಿ ಬದ್ಧ: ಅಕ್ಟೋಬರ್ 9ರೊಳಗೆ ನಿರ್ಣಯಕ್ಕೆ ಸೂಚನೆ ನೀಡುವುದಾಗಿ ಸಿಎಂ ತಿಳಿಸಿದ್ದಾರೆ. ಎಸ್ಸಿ ಸಮುದಾಯದ ಸಾಧಕ ಬಾದಕದ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಈಗ ಎಸ್ಟಿ ಸಮುದಾಯಕ್ಕೆ ಮಾತ್ರ ಹೆಚ್ಚಿಸಲು ಮನವಿ ಮಾಡಿದ್ದೇವೆ. ಎಷ್ಟು ಮಾಡಬೇಕು ಅಂತ ಸಿಎಂ ನಿರ್ಧಾರ ಮಾಡಲಿದ್ದಾರೆ. ಎಸ್ಸಿ, ಎಸ್ಟಿ ಮೀಸಲಾತಿ ಎಷ್ಟು ಮಾಡಬೇಕು ಅಂತ ಸಮಿತಿ ರಚಿಸಲಾಗಿತ್ತು. ಬಿಜೆಪಿ‌ ಸಾಮಾಜಿಕ ನ್ಯಾಯಕ್ಕಾಗಿ ಬದ್ಧವಾಗಿದೆ. ಅದರಲ್ಲಿ ರಾಜಿ ಇಲ್ಲ. ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಗೆ ಬಿಜೆಪಿ ಸಕಾರಾತ್ಮಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ: ದೇಶ ಇಬ್ಭಾಗ ಮಾಡುವಾಗ ಸಹಿ ಹಾಕಿದ್ದು ಕಾಂಗ್ರೆಸ್, ಬಿಜೆಪಿಯಲ್ಲ: ಸಿ ಟಿ ರವಿ

ಹೆದರಿ ಸಮಾವೇಶ ಮಾಡುತ್ತಿಲ್ಲ: ಕೋರ್ ಕಮಿಟಿಯಲ್ಲಿ ವಿವಿಧ ಮೋರ್ಚಾ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ. ಕೇಂದ್ರ ನಾಯಕರ ಜೊತೆ ಚರ್ಚೆ ಮಾಡಿ ದಿನಾಂಕ ಅಂತಿಮ ಮಾಡಲಿದೆ. ಭಾರತ್ ಜೋಡೋ ಮಾಡಿರೋದಕ್ಕೆ ಹೆದರಿ ಸಮಾವೇಶ ಮಾಡುತ್ತಿದ್ದೇವೆ ಎನ್ನುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆ.

ಅವರನ್ನ ನೋಡಿ ಹೆದರೋ ಪ್ರಶ್ನೆ ಇಲ್ಲ. ಅವರ್ಯಾರೂ ದೆವ್ವ, ಭೂತ ಯಾವುದೂ ಅಲ್ಲ. ಅವರಿಗೆ ಹೆದರೋ ಪ್ರಶ್ನೆಯೇ ಇಲ್ಲ. ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಸುಳ್ಳುಗಳ ರಾಜ: ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಹೇಳಿಕೆಗೆ ಸಿದ್ದರಾಮಯ್ಯ ವಿರೋಧ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಸುಳ್ಳನ್ನೇ ಮನೆ ದೇವರನ್ನ ಮಾಡಿಕೊಂಡಿರೋದು ಸಿದ್ದರಾಮಯ್ಯ.

ಸ್ವಾತಂತ್ರ್ಯ ಬಂದಾಗ 37ಕೋಟಿ ಜನಸಂಖ್ಯೆ ಇತ್ತು. ಈಗ 137ಕೋಟಿ ಇದೆ. ಕರ್ನಾಟಕದಲ್ಲಿ 1.5 ಕೋಟಿ ಜನಸಂಖ್ಯೆ ಇತ್ತು, ಈಗ 6 ಕೋಟಿ ಇದೆ. ಸುಳ್ಳು ಹೇಳೋದರಲ್ಲಿ ಸಿದ್ದರಾಮಯ್ಯ ಅವರನ್ನ ಬಿಟ್ಟರೆ, ಕಾಂಗ್ರೆಸ್ ಆಗಲಿ, ಬಿಜೆಪಿಯವರಾಗಲಿ ಅವರನ್ನ ಕಾಂಪಿಟೇಟ್ ಮಾಡಲು ಸಾಧ್ಯವಿಲ್ಲ. ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮ ಮನೇ ದೇವರಯ್ಯ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಸುಳ್ಳುಗಳ ರಾಜ ಎಂದು ವ್ಯಂಗ್ಯವಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.