ETV Bharat / state

ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರದ ಧ್ವನಿಸುರಳಿ ಬಿಡುಗಡೆಗೊಳಿಸಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

author img

By ETV Bharat Karnataka Team

Published : Jan 10, 2024, 3:49 PM IST

ದಾಸವರೇಣ್ಯ ಶ್ರೀ ವಿಜಯ ದಾಸರು ಚಿತ್ರ
ದಾಸವರೇಣ್ಯ ಶ್ರೀ ವಿಜಯ ದಾಸರು ಚಿತ್ರ

ಸದ್ಯ ಹಾಡುಗಳಿಂದ ಗಮನ ಸೆಳೆಯುತ್ತಿರೋ ದಾಸವರೇಣ್ಯ ಶ್ರೀ ವಿಜಯದಾಸರು ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಕನ್ನಡ ಚಿತ್ರರಂಗದಲ್ಲಿ ಕಾದಂಬರಿ ಹಾಗೂ ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆ ಸಿನಿಮಾ ಆಗೋದು ಟ್ರೆಂಡ್ ಆಗಿದೆ. ಇದೀಗ ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಕುರಿತಾಗಿ ಸಿನಿಮಾ ಬೆಳ್ಳಿ ತೆರೆಗೆ ಬರಲು ರೆಡಿಯಾಗಿದೆ. ಈ ಚಿತ್ರಕ್ಕೆ ’ದಾಸವರೇಣ್ಯ ಶ್ರೀ ವಿಜಯದಾಸರು‘ ಎಂಬ ಟೈಟಲ್ ಇಟ್ಟಿದ್ದು, ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿದೆ‌.

ನಿರ್ದೇಶಕ ಮಧುಸೂದನ್ ಹವಾಲ್ದಾರ್ ನಿರ್ದೇಶನವಿರುವ ದಾಸವರೇಣ್ಯ ಶ್ರೀ ವಿಜಯದಾಸರು ಸಿನಿಮಾಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರ ಸಾಥ್ ಸಿಕ್ಕಿದೆ. ಹೌದು, ಈ ಚಿತ್ರದ ಧ್ವನಿ ಸುರುಳಿಯನ್ನು ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪಂಡಿತ ಪೂಜ್ಯ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಮಾಜಿ ಶಾಸಕ ಬಸವನಗೌಡ, ರವಿ ಸುಬ್ರಹ್ಮಣ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಲಹರಿ ವೇಲು ಸೇರಿದಂತೆ ಅನೇಕ ಗಣ್ಯರು ಪ್ರಹ್ಲಾದ ಜೋಷಿ ಅವರಿಗೆ ಸಾಥ್ ನೀಡಿದರು.

ಬಳಿಕ ಮಾತನಾಡಿದ ಕೇಂದ್ರ ಸಚಿವರು, ಶ್ರೀವೇದವ್ಯಾಸರು ರಚಿಸಿದ ವೇದಗಳು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟ. ಹರಿದಾಸರು ವೇದಗಳ ಸಾರವನ್ನು ಕನ್ನಡ ಭಾಷೆಯಲ್ಲಿ ಜನರಿಗೆ ಅರ್ಥವಾಗುವ ಹಾಗೆ ಹಾಡುಗಳ ಮೂಲಕ ನೀಡಿದ್ದಾರೆ‌‌. ಶ್ರೀಪುರಂದರದಾಸರ ನಂತರ ಬರುವ ಶ್ರೀವಿಜಯದಾಸರು 2,800 ಕ್ಕೂ ಹೆಚ್ಚು ಸುಳಾದಿಗಳನ್ನು, ಸಾಕಷ್ಟು ದೇವರನಾಮ ಹಾಗೂ ಸುಳಾದಿಗಳನ್ನು ರಚಿಸಿದ್ದಾರೆ. ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಕುರಿತಾದ ಈ ಚಿತ್ರವನ್ನು ಸ್ನೇಹಿತರಾದ ತ್ರಿವಿಕ್ರಮ ಜೋಶಿ ನಿರ್ಮಾಣ ಮಾಡಿದ್ದಾರೆ. ಹರಿದಾಸರ ಚಿತ್ರಗಳ ಹ್ಯಾಟ್ರಿಕ್ ನಿರ್ದೇಶಕ ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿದ್ದಾರೆ‌‌. ವಿಜಯಕೃಷ್ಣ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ನಂತರ ಮಾತನಾಡಿದ ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಶಿ ಕನ್ನಡದಲ್ಲಿ ನವಕೋಟಿ ನಾರಾಯಣ, ಭಕ್ತ ಕನಕದಾಸ ಚಿತ್ರಗಳ ನಂತರ ಯಾವುದೇ ಹರಿದಾಸರ ಚಿತ್ರಗಳು ಬಂದಿಲ್ಲ. ಶ್ರೀ ಮಾತಾಂಬುಜ ಮೂವೀಸ್ ಮೂಲಕ ನಿರ್ಮಾಣವಾಗಿದ್ದ ಶ್ರೀ ಜಗನ್ನಾಥ ದಾಸರು ಚಿತ್ರದ ಮೂಲಕ ನಾನು ಸಹ ನಿರ್ಮಾಪಕನಾಗಿ ಚಿತ್ರರಂಗ ಪ್ರವೇಶಿಸಿದೆ. ಈಗ ಶ್ರೀ ದಾಸವರೇಣ್ಯ ವಿಜಯದಾಸರು ಚಿತ್ರವನ್ನು ನಮ್ಮ ತಂದೆ - ತಾಯಿಯ ಆಶೀರ್ವಾದದಿಂದ ಎಸ್​ಪಿಜೆ ಮೂವೀಸ್ ಮೂಲಕ ನಿರ್ಮಿಸಿದ್ದೇನೆ. ಮುಂದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಸರ ಕುರಿತಾದ ಚಿತ್ರಗಳನ್ನು ನಿರ್ಮಿಸುವ ಆಸೆಯಿದೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿದ್ದಾರೆ. ವಿಜಯಕೃಷ್ಣ ಸಂಗೀತ ನೀಡಿದ್ದಾರೆ. ಈ ಚಿತ್ರದ ಹಾಡುಗಳನ್ನು ಪ್ರಹ್ಲಾದ್​ ಜೋಶಿ ಅವರು ಬಿಡುಗಡೆ ಮಾಡಿ ಕೊಟ್ಟಿರೋದು ಖುಷಿ ತಂದಿದೆ ಎಂದರು.

ಇದನ್ನೂ ಓದಿ : 'ಜೂನಿ' ಕ್ಯಾರೆಕ್ಟರ್ ಟೀಸರ್ ಅನಾವರಣ; ಚೆಫ್ ಆದ ಪೃಥ್ವಿ ಅಂಬಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.