ETV Bharat / state

ಆರೋಗ್ಯ ಇಲಾಖೆಯಿಂದ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟ

author img

By

Published : Mar 31, 2023, 2:19 PM IST

ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪ್ರಚಾರ ರ್ಯಾಲಿ, ಬಹಿರಂಗ ಸಭೆ, ಸಮಾವೇಶ ಆಯೋಜಿಸುವ ಮುನ್ನ ಕೋವಿಡ್ ಸೋಂಕು ತಡೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Covid Guidelines from Department of Health
ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಇತ್ತ ಆರೋಗ್ಯ ಇಲಾಖೆ ದೇಶಾದ್ಯಂತ ಕೋವಿಡ್‌ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಚುನಾವಣಾ ಸಿಬ್ಬಂದಿಗೆ ಬೂಸ್ಟರ್ ಡೋಸ್: ಚುನಾವಣಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗೆ ಕಡ್ಡಾಯವಾಗಿ ಬೂಸ್ಟರ್ ಡೋಸ್ ನೀಡಬೇಕು. ಯಾವುದೇ ಚುನಾವಣಾ ರ್ಯಾಲಿಗಳಲ್ಲಿ ಸೋಂಕು ಹರಡಿದರೆ ಅದರ ಹೊಣೆಯನ್ನು ರ್ಯಾಲಿ ಆಯೋಜಿಸುವ ರಾಜಕೀಯ ಪಕ್ಷಗಳು ಹೊರಬೇಕು.

ಕೋವಿಡ್ ಜಾಗೃತಿ ಅಗತ್ಯ: ಮತದಾನ ನಡೆಯುವ ದಿನ ಮತಗಟ್ಟೆಗಳಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಬೇಕು. ಮತ ಹಾಕಲು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮಾನುಸಾರ ಟೋಕನ್ ವಿತರಿಸಬೇಕು. ಮತದಾನದ ವೇಳೆ ಸಾಮಾಜಿಕ ಅಂತರ ಕಾಪಾಡಲು ಮತಗಟ್ಟೆ ಹಾಗೂ ಹೊರಭಾಗದಲ್ಲಿ ಮಾರ್ಕ್ ಮಾಡಬೇಕು. ಎಲ್ಲ ಮತಗಟ್ಟೆಗಳ ಎದುರು ಕೋವಿಡ್ ಜಾಗೃತಿ ಕುರಿತು ಪೋಸ್ಟರ್ ಅಂಟಿಸಬೇಕು. ಮತದಾನದ ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಮೀಸಲಿಡಬೇಕು.

ಕೋವಿಡ್​​ ಪ್ರಕರಣಗಳ ಲೇಟೆಸ್ಟ್ ಅಪ್ಡೇಟ್‌: ದೇಶದಲ್ಲಿ 129 ದಿನಗಳ ಬಳಿಕ ಸಾವಿರಕ್ಕೂ ಅಧಿಕ ಹೊಸ ಕೋವಿಡ್​-19 ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ 1,071 ಹೊಸ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,915ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,30,802ಕ್ಕೆ ಏರಿದೆ. ದೇಶದಲ್ಲಿ ಈವರೆಗೆ 4.46 ಕೋಟಿ (4,46,95,420) ಮಂದಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ದರ ಶೇ. 0.01 ರಷ್ಟಿದೆ. ರಾಷ್ಟ್ರೀಯ ಕೋವಿಡ್​​-19 ಚೇತರಿಕೆ ದರ 98.8 ಪ್ರತಿಶತದಷ್ಟು ದಾಖಲಾಗಿದೆ.

ಅಂತಾರಾಷ್ಟ್ರೀಯ ತಜ್ಞರ ಪ್ರಕಾರ, "ಮಾರಣಾಂತಿಕ ಕೋವಿಡ್ ಸಾಂಕ್ರಾಮಿಕ ಚೀನಾದ ವುಹಾನ್ ಮಾರುಕಟ್ಟೆಯಲ್ಲಿ ರಕೂನ್ ನಾಯಿಗಳಿಂದ ಹರಡಿರುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗದ ಸುಮಾರು 3 ವರ್ಷಗಳ ನಂತರವೂ ಕೋವಿಡ್​​ನ ಮೂಲ ಸ್ಪಷ್ಟವಾಗಿಲ್ಲ. ವೈರಸ್ ಬಾವಲಿಗಳಿಂದ ಅಥವಾ ಪ್ರಯೋಗಾಲಯದಿಂದ ಸೋರಿಕೆಯಾಗಿದೆ" ಎಂದು ಜಾಗತಿಕವಾಗಿ ವಿಜ್ಞಾನಿಗಳು ಮತ್ತು ರಾಜಕಾರಣಿಗಳೊಂದಿಗೆ ರಾಜಕೀಯ ಮತ್ತು ವೈಜ್ಞಾನಿಕವಾಗಿ ಚರ್ಚೆ ನಡೆದಿತ್ತು, ಅದು ಈಗಲೂ ಮುಂದುವರೆದಿದೆ.

ಈ ಮಧ್ಯೆ ಬಂದ ಹೊಸ ಅಧ್ಯಯನ ಪ್ರಕಟವಾಗಬೇಕಿದೆ. ಇದು ಅರಿಝೋನಾ, ಉತಾಹ್ ಮತ್ತು ಸಿಡ್ನಿ ವಿಶ್ವವಿದ್ಯಾನಿಲಯಗಳು ಮತ್ತು ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಸೇರಿದಂತೆ ತಜ್ಞರ ನೇತೃತ್ವದ ತಂಡ 2020ರ ಜನವರಿಯಲ್ಲಿ ಹುವಾನಾನ್ ಸಮುದ್ರ ಖಾದ್ಯ ಸಗಟು ಮಾರುಕಟ್ಟೆಯಿಂದ ಮತ್ತು ಅದರ ಸುತ್ತಮುತ್ತಲಿನ ಸ್ವ್ಯಾಬ್‌ಗಳಿಂದ ಪಡೆದ ಆನುವಂಶಿಕ ಡೇಟಾ ಆಧರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂಓದಿ:ಶಶಿಕಲಾ ಜೊಲ್ಲೆ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ​ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.