ETV Bharat / state

ಬೆಂಗಳೂರು ಕೃಷಿ ಮೇಳ: ಜನರನ್ನು ಆಕರ್ಷಿಸಿದ ಸಿರಿಧಾನ್ಯ ಆಹಾರ ಮೇಳ

author img

By ETV Bharat Karnataka Team

Published : Nov 18, 2023, 10:52 PM IST

Updated : Nov 19, 2023, 7:47 PM IST

ಕೇಂದ್ರ ಸರ್ಕಾರ, 2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಿದೆ. ಈ ಹಿನ್ನೆಲೆ ಬೆಂಗಳೂರು ಕೃಷಿ ವಿವಿಯಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ಒದಗಿಸಲು ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ ಎಂದು ಕೃಷಿ ವಿವಿಯ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ ಜಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.

Cereal food fair
ಆಕರ್ಷಿಸಿದ ಸಿರಿಧಾನ್ಯ ಮೇಳ

ಸಿರಿಧಾನ್ಯ ಮೇಳ

ಬೆಂಗಳೂರು: ರಾಜಧಾನಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಸಿರಿಧಾನ್ಯ ಮೇಳ ಜನರನ್ನು ಆಕರ್ಷಿಸಿಸುತ್ತಿದೆ. ಆರೋಗ್ಯಕರ ಜೀವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಈ ಬಾರಿಯ ಕೃಷಿ ಮೇಳದಲ್ಲಿ ಶನಿವಾರ 'ಸಿರಿಧಾನ್ಯ ಆಹಾರ ಮೇಳ'ವನ್ನು ಹಮ್ಮಿಕೊಳ್ಳಲಾಗಿತ್ತು.

ಸುಮಾರು ಸಿರಿಧಾನ್ಯ ಮಳಿಗೆಗಳನ್ನು ಸ್ಥಾಪಿಸಿದ್ದು, ಸ್ವಸಹಾಯ ಸಂಘಗಳು ಸಿರಿಧಾನ್ಯಗಳಿಂದ ತಯಾರಿಸಿರುವ ಇಡ್ಲಿ, ಚಕ್ಕುಲಿ, ಪಿಜಾ, ಕೇಕ್, ಕುಕ್ಕಿಸ್, ಚಾಕೊಲೇಟ್, ಉಂಡೆ ಸೇರಿದಂತೆ ನಾನಾ ಪದಾರ್ಥಗಳು ಆಹಾರ ಪ್ರೇಮಿಗಳನ್ನು ಆಕರ್ಷಿಸಿದವು. ರೈತರು ಬೆಳೆದ ಸಿರಿಧಾನ್ಯ ಬೆಳೆಗೆ ಮಾರುಕಟ್ಟೆ ಕಲ್ಪಿಸಲು ಹಾಗೂ ಆರೋಗ್ಯಕರ ಜೀವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಕೃಷಿ ಮೇಳದಲ್ಲಿ ಸ್ಥಾಪಿಸಿದ್ದ ಸಿರಿಧಾನ್ಯ ಆಹಾರ ಮೇಳ ಎಲ್ಲರ ಮೆಚ್ಚುಗೆ ಗಳಿಸಿತು.

ಕೃಷಿ ಮೇಳದಲ್ಲಿ ನವೋದ್ಯಮಗಳಿಗೆ ಸಿರಿಧಾನ್ಯದ ಉಪ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲು ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿದೆ. ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಿರಿಧಾನ್ಯ ಉತ್ಪನ್ನ ಉತ್ಪಾದಕರಿಗೆ ಉಚಿತವಾಗಿ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ.

ಶನಿವಾರ ಮುಂಜಾನೆಯಿಂದ ಸಂಜೆವರೆಗೆ ಸಿರಿಧಾನ್ಯದಿಂದ ತಯಾರಿಸಿದ ಪಕೋಡಾ, ಚಕ್ಕುಲಿ, ಬಿಸ್ಕೇಟ್, ಚಾಕೊಲೇಟ್, ಪಿಜ್ಜಾ ಕೇಕ್, ಪೇಸ್ಟರಿ, ನಿಪ್ಪಟ್ಟು, ರಾಗಿ ಲಡ್ಡು, ಸಿಹಿ ತಿನಿಸುಗಳು, ಪಕೋಡಾ, ಮಸಾಲೆ ವಡೆ, ದೋಸೆ, ಪಲಾವ್, ಉಪ್ಪಿಟ್ಟು, ಹಲ್ವಾ, ಅಂಬಲಿ, ಕೇಸರಿ ಬಾತ್, ಉಂಡೆ, ಜಾಮೂನ್, ಕಿಚಡಿ, ಬರ್ಫಿ ಸೇರಿದಂತೆ ನಾನಾ ಬಗೆಯ ತಿನಿಸುಗಳನ್ನು ಗ್ರಾಹಕರ ವೀಕ್ಷಿಸಿ ಖರೀದಿಸಿದರು.

ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ ಜಿ ವಿಜಯಲಕ್ಷ್ಮಿ ಈಟಿವಿ ಭಾರತದೊಂದಿಗೆ ಮಾತನಾಡಿ, 2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಬೆಂಗಳೂರು ಕೃಷಿ ವಿವಿಯಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ಒದಗಿಸಲು ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿರಿಧಾನ್ಯ ಮೇಳಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಆರೋಗ್ಯದ ಕಣಜ ಸಿರಿಧಾನ್ಯ: ಜೋಳ, ರಾಗಿ, ಸಜ್ಜೆ, ನವಣೆ, ಬರಗು, ಕೊರಲೆ, ಸಾಮೆ, ಊದಲು, ಹಾರಕ 9 ಸಿರಿ ಧಾನ್ಯಗಳು ಆರೋಗ್ಯ ವೃದ್ಧಿಯಲ್ಲಿ ಸಹಕಾರಿ ಆಗಿವೆ. ಸಿರಿಧಾನ್ಯಗಳಲ್ಲಿ ಅಧಿಕ ನಾರಿನಂಶ, ಪೋಷಕಾಂಶ, ಖನಿಜಾಂಶ ಹೇರಳವಾಗಿದೆ. ಇದರಿಂದ ರಕ್ತದೊತ್ತಡ, ಮಧುಮೇಹ, ಬೊಜ್ಜು, ಮಲಬದ್ಧತೆ, ಅಂಡಾಶಯ ಸಮಸ್ಯೆ, ಮುಟ್ಟಿನ ಸಮಸ್ಯೆ, ನರ ದೌರ್ಬಲ್ಯ, ಮೂರ್ಛೆ ರೋಗ, ರಕ್ತ ಹೀನತೆ, ಲಿವರ್, ಕಿಡ್ನಿ ಸಮಸ್ಯೆ, ಜೀರ್ಣಾಂಗದ ಸಮಸ್ಯೆ, ಹೃದ್ರೋಗ, ಕ್ಯಾನ್ಸರ್ ಸಮಸ್ಯೆ ಸಮಸ್ಯೆ ಇರುವವವರು ನಿತ್ಯ ಸಿರಿಧಾನ್ಯ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಎಂದು ಕೆ ಜಿ ವಿಜಲಕ್ಷ್ಮಿ ತಿಳಿಸಿದರು.

ಇದನ್ನೂಓದಿ: ನಾಲ್ಕು ದಿನಗಳ ಕೃಷಿ ಮೇಳ ಉದ್ಘಾಟಿಸಿದ ಸಿಎಂ: ಈ ಬಾರಿಯ ಆಕರ್ಷಣೆಗಳೇನು?

Last Updated :Nov 19, 2023, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.