ETV Bharat / state

ಲಾರಿ ಮಾಲೀಕರ ಸಂಘದಿಂದ ಕರೆ ನೀಡಲಾಗಿದ್ದ ಮುಷ್ಕರ ವಾಪಸ್

author img

By

Published : Mar 16, 2023, 5:10 PM IST

Updated : Mar 16, 2023, 7:50 PM IST

ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಲು ಸರ್ಕಾರ ನೀಡಿರುವ ಆದೇಶ ವಿರೋಧಿಸಿ ನಡೆಯಬೇಕಿದ್ದ ಮುಷ್ಕರ ರದ್ದಾಗಿದೆ.

Lorry Owners and Agents Association President G.R. Shanmugappa
ಲಾರಿ ಮಾಲೀಕರು ಮತ್ತು ಏಜೆಂಟ್​ಗಳ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ

ಲಾರಿ ಮಾಲೀಕರ ಸಂಘ ಮುಷ್ಕರವನ್ನು ಕೈ ಬಿಟ್ಟಿದೆ.

ಬೆಂಗಳೂರು : ಎಫ್‌ಸಿ ನವೀಕರಣಕ್ಕೆ ಕ್ಯೂಆರ್ ಕೋಡ್ ಹೊಂದಿರುವ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಲು ಸರ್ಕಾರ ನೀಡಿರುವ ಆದೇಶವನ್ನು ವಿರೋಧಿಸಿ ಶುಕ್ರವಾರ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟ್​ಗಳ ಸಂಘ ಬಂದ್​ಗೆ ಕರೆ ನೀಡಿತ್ತು. ಆದರೆ ಇಂದು ಲಾರಿ ಮಾಲೀಕರ ಸಂಘ ಉದ್ದೇಶಿತ ಮುಷ್ಕರವನ್ನು ದಿಢೀರ್​ ಕೈ ಬಿಟ್ಟಿದೆ. ಫೆಡರೇಷನ್‌ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳ ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ. ಎಂ.ಎ. ಸಲೀಮ್ ಜೊತೆಗಿನ ಮಾತುಕತೆ ಯಶಸ್ವಿಯಾಗಿದ್ದು, ಮುಷ್ಕರವನ್ನು ಹಿಂಪಡೆದುಕೊಂಡಿದ್ದಾರೆ.

ಗುರುವಾರ ಮಧ್ಯರಾತ್ರಿಯಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು. ಮಧ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ಬೆಳಗ್ಗೆ ಮತ್ತು ಸಂಜೆ ನಿಷೇಧಿಸಿರುವುದನ್ನು ವಿರೋಧಿಸಿ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ರಾಜ್ಯದಲ್ಲಿ ಲಾರಿ ಮಾಲೀಕರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಅವೈಜ್ಞಾನಿಕ ನೀತಿಗಳನ್ನು ಸರ್ಕಾರವು ಹಿಂಪಡೆಯದಿದ್ದರೆ, ಮಾ 17ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಈ ಹಿಂದೆ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಹಾಗೂ ಎಜೆಂಟರ ಸಂಘ ಎಚ್ಚರಿಕೆ ನೀಡಿತ್ತು.

ಈ ಕುರಿತು ಮಾತನಾಡಿದ ಲಾರಿ ಮಾಲೀಕರು ಮತ್ತು ಏಜೆಂಟ್​ಗಳ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ಅವರು, ಇಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ. ಎಂ.ಎ. ಸಲೀಮ್ ಅವರ ಜೊತೆ ಮೂರು ಸುತ್ತಿನಲ್ಲಿ ನಡೆದ ಮಾತುಕತೆ ಸಫಲವಾಗಿದೆ. ನಗರದಲ್ಲಿ 7.50 ಟನ್​ ತೂಕದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರಿಂದ ಮುಷ್ಕರವನ್ನು ನಡೆಸುವುದನ್ನು ಕೈ ಬಿಟ್ಟಿದ್ದೇವೆ ಎಂದು ಹೇಳಿದರು. ಇಂದು ನಡೆದ ಮೂರನೇ ಸುತ್ತಿನ ಮಾತುಕತೆಯಲ್ಲಿ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಕೆ.ಎನ್. ಅಶ್ವತ್ಥ್ , ಜಂಟಿ ಕಾರ್ಯದರ್ಶಿ ಮಧು, ಮುರುಗನ್, (ಕೆಜಿಟಿಎ ಅಧ್ಯಕ್ಷ) ಪಾಂಡೆ, (ಕೆಸಿಟಿಎ ಅಧ್ಯಕ್ಷ) ಮುನಿಕೃಷ್ಣ, (ಎಸ್​ಕೆಟಿ) ಮುಖಂಡರಾದ ಸೆಂದಿಲ್ ಕುಮಾರ್, ರಾಜೇಶ್ ಗೌಡ, ರಾಮಸ್ವಾಮಿ ರೆಡ್ಡಿ ಮತ್ತಿತರರು ಭಾಗಿಯಾಗಿದ್ದರು.

ಸಂಘದ ಅಧ್ಯಕ್ಷರ ಪ್ರತಿಕ್ರಿಯೆ : ಇದಕ್ಕೂ ಮುಂಚೆ ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಲಾರಿ ಮಾಲೀಕರು ಮತ್ತು ಏಜೆಂಟ್​ಗಳ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಸಾರಿಗೆ ಇಲಾಖೆ ವಾಣಿಜ್ಯ ವಾಹನಗಳಿಗೆ ರೆಟ್ರೊ ರಿಫ್ಲೆಕ್ಟರ್ ಟೇಪುಗಳನ್ನು ಅಳವಡಿಸುವಂತೆ ಆದೇಶಿಸಿರುವ ನಿಯಮಗಳನ್ನು ವಾಹನದ ಮಾಲೀಕರು ಪಾಲಿಸಲು ಸಿದ್ಧರಿದ್ದಾರೆ. ಆದರೆ ‘ಕ್ಯೂ ಆರ್ ಕೋಡ್’ ಆಧಾರಿತ ರಿಫ್ಲೆಕ್ಟರ್ ಟೇಪುಗಳನ್ನು ಸಂಘಟನೆ ವಿರೋಧಿಸುತ್ತದೆ ಎಂದರು. ಇನ್ನು ನೂತನವಾಗಿ ಸಿದ್ಧವಾಗಿರುವ ಬೆಂಗಳೂರು - ಮೈಸೂರು ದಶಪಥ ರಸ್ತೆ ಬಗ್ಗೆ ಮಾತನಾಡಿ ಈ ರಸ್ತೆಯಲ್ಲಿ 82 ಜನ ಸಾವನ್ನಪ್ಪಿದ್ದಾರೆ. ಹಾಗಾಗಿ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ದ್ವಿಚಕ್ರ ಹಾಗೂ ಮಂದಗತಿಯಲ್ಲಿ ಚಲಿಸುವ ಟ್ರ್ಯಾಕ್ಟರ್, ಆಟೋರಿಕ್ಷಾಗಳನ್ನು ಚಲಿಸಲು ಅನುಮತಿ ನೀಡಬಾರದು. ಈ ವಾಹನಗಳಿಗೆ ಪ್ರತ್ಯೇಕವಾಗಿ ಸರ್ವೀಸ್ ರಸ್ತೆಯಲ್ಲೇ ಓಡಾಡುವ ನಿಯಮ ತಂದು ಕಡ್ಡಾಯಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಟೋಲ್​ಗಳಲ್ಲಿ ಹಗಲು ದರೋಡೆ: ನಗರದ ವರ್ತುಲ ನೈಸ್ ರಸ್ತೆಗಳಲ್ಲಿ ಟೋಲ್‌ಗಳು ಸುಮಾರು 10 ವರ್ಷಗಳಿಗಿಂತಲೂ ಹೆಚ್ಚು ಸುಂಕವನ್ನು ಪಡೆಯುತ್ತಿದ್ದು, ಇದು ಈಗಾಗಲೇ ರಸ್ತೆಗಳಿಗಾಗಿ ವೆಚ್ಚ ಮಾಡಿದಂತಹ ಹಣದೊಂದಿಗೆ ಅತಿ ಹೆಚ್ಚು ಲಾಭ ಪಡೆದಿರುತ್ತಾರೆ. ಆದರೂ ಟೋಲ್‌ಗಳ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಿಸಿ ಹಗಲು ದರೋಡೆ ಮಾಡಲಾಗುತ್ತಿದೆ. ಆರು ತಿಂಗಳಿನಿಂದ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಏಕಮುಖ ಸಂಚಾರದಿಂದ ವಾಹನಗಳು ಚಲಿಸುತ್ತಿವೆ. ಈ ರಸ್ತೆಗಳಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹಾಗಾಗಿ ಕೂಡಲೇ ಸುಂಕ ಪಡೆಯುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಲಾರಿ ಚಾಲಕರಿಗೆ ವಿಶ್ರಾಂತಿ ಕೋಣೆಗಳನ್ನು ನಿರ್ಮಾಣ ಮಾಡಿಕೊಡಬೇಕು. ಅವರ ಮಕ್ಕಳಿಗೆ ಸರಕಾರ ಪ್ರತ್ಯೇಕ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದ ಅವರು, ಹೆದ್ದಾರಿಗಳ ಟೋಲ್ ಸುಂಕವನ್ನು ಲಾರಿ ಮಾಲೀಕರು ಪಾವತಿಸುವುದಿಲ್ಲ. ಬದಲಾಗಿ ಸರಕಿನ ಮಾಲೀಕರೇ ಪಾವತಿ ಮಾಡಬೇಕು ಎಂಬ ನೀತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ಇನ್ನು ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಸಮಯ ಎಂದು ದಿನದ ಹತ್ತು ಗಂಟೆ ಕಾಲ ಆರು ಚಕ್ರದ ವಾಹಗಳಿಗೆ ಸಂಚರಿಸಲು ಅವಕಾಶ ನೀಡುತ್ತಿಲ್ಲ. ಇದನ್ನು ಸಂಘವು ಬಲವಾಗಿ ಖಂಡಿಸುತ್ತದೆ. ಕೂಡಲೇ ಸರಕಾರವು ಆರು ಚಕ್ರದ ವಾಹನಗಳಿಗೆ ವಿಧಿಸಿರುವ ಈ ನಿಯಮ ರದ್ದುಪಡಿಸಬೇಕು ಎಂದು ಜಿ.ಆರ್. ಷಣ್ಮುಗಪ್ಪ ಹೇಳಿದರು.

ಇದನ್ನೂ ಓದಿ :ಸರ್ಕಾರಿ ಆಸ್ತಿ ರಕ್ಷಣೆಗೆ ಆಸಕ್ತಿ ಇದೆಯೇ ಎಂಬುದನ್ನು ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Last Updated :Mar 16, 2023, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.