ETV Bharat / state

'ನಾನೇ ಕ್ಷೇತ್ರಕ್ಕೆ ಬರುತ್ತೇನೆ, ಬೆಂಗಳೂರಿಗೆ ಬರಬೇಡಿ': ಕನಕಪುರ ಕ್ಷೇತ್ರದ ಅಭಿಮಾನಿಗಳಿಗೆ ಡಿಕೆಶಿ ಮನವಿ

author img

By

Published : May 24, 2023, 7:17 AM IST

ತಮ್ಮ ಭೇಟಿಗಾಗಿ ಕನಕಪುರದಿಂದ ಬೆಂಗಳೂರಿಗೆ ಬರುತ್ತಿರುವ ಅಭಿಮಾನಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮ ಹೇಳಿಕೆ ಮೂಲಕ ವಿಶೇಷ ಮನವಿ ಮಾಡಿದ್ದಾರೆ.

dk shivakumar
ಡಿ ಕೆ ಶಿವಕುಮಾರ್

ಬೆಂಗಳೂರು : "ನಾನೇ ಕನಕಪುರಕ್ಕೆ ಬಂದು ನಿಮಗೆ ಕೃತಜ್ಞತೆ ಸಲ್ಲಿಸಿ ಅಭಿನಂದನೆ ಸ್ವೀಕರಿಸುತ್ತೇನೆ. ನೀವ್ಯಾರೂ ಬೆಂಗಳೂರಿಗೆ ಬರುವ ತೊಂದರೆ ತೆಗೆದುಕೊಳ್ಳುವುದು ಬೇಡ" ಎಂದು ಕನಕಪುರ ಕ್ಷೇತ್ರದ ಅಭಿಮಾನಿಗಳು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

"ದೆಹಲಿ ಪ್ರವಾಸದ ನಂತರ ನಾನೇ ಖುದ್ದಾಗಿ ಕನಕಪುರಕ್ಕೆ ಬರುತ್ತೇನೆ. ಕ್ಷೇತ್ರದ ಜನರಿಗೆ ತೊಂದರೆ ಆಗುವುದು ಬೇಡ ಎಂಬ ಕಾಳಜಿಯಿಂದ ಈ ಮನವಿ ಮಾಡುತಿದ್ದೇನೆ. ಯಾರೂ ಅನ್ಯತಾ ಭಾವಿಸುವುದು ಬೇಡ" ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ಮೇ 13 ರಂದು ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನ ಚುನಾವಣಾ ಆಯೋಗದಿಂದ ಪ್ರಮಾಣ ಪತ್ರ ಪಡೆಯಲು ಕನಕಪುರಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್, ಮತ್ತೆ ಇದುವರೆಗೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಮೇ 14 ರಂದೇ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, 15 ರಿಂದ ದೆಹಲಿ ಪ್ರವಾಸದಲ್ಲಿದ್ದರು. ಅಲ್ಲಿಂದ ವಾಪಸ್ ಆಗುತ್ತಿದ್ದಂತೆಯೇ ಸರ್ಕಾರದ ರಚನೆಯಲ್ಲಿ ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿ ಅಧಿಕಾರ ವಹಿಸಿಕೊಂಡರು. ಇದಾಗಿ ಮಾರನೇ ದಿನ ಮತ್ತೆ ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಹಿಂದಿರುಗಿದ ಬಳಿಕ ಮೂರು ದಿನಗಳ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಈ ಮಧ್ಯೆ ಒಮ್ಮೆ ತುಮಕೂರಿನ ಅಜ್ಜಯ್ಯನ ಮಠ ಹಾಗೂ ಮಂಡ್ಯದ ನಾಗಮಂಗಲ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಅಲ್ಲಿನ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದು ದೇಗುಲಗಳಲ್ಲಿ ಪೂಜೆ ಸಲ್ಲಿಸಿ ಹಿಂದಿರುಗಿದ್ದರು.

ಇದನ್ನೂ ಓದಿ : ಎಂ ಬಿ ಪಾಟೀಲ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿ ಕೆ ಶಿವಕುಮಾರ್​ !

ಮೂರು ದಿನಗಳ ವಿಧಾನಸಭಾ ಕಲಾಪದ ಹಿನ್ನೆಲೆಯಲ್ಲಿ ಕನಕಪುರಕ್ಕೆ ತೆರಳಲು ಡಿ.ಕೆ.ಶಿವಕುಮಾರ್ ಅವರಿಗೆ ಸಾಧ್ಯವಾಗದ ಕಾರಣ ಅವರ ಕ್ಷೇತ್ರದ ಅಭಿಮಾನಿಗಳು ಭೇಟಿಗಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸದಾಶಿವನಗರದ ಡಿಕೆಶಿ ನಿವಾಸ ಹಾಗೂ ವಿಧಾನಸೌಧಕ್ಕೆ ಆಗಮಿಸಿ ಅವರ ಭೇಟಿಗಾಗಿ ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯದೊತ್ತಡದ ನಡುವೆ ಭೇಟಿಯಾಗಲು ಸಾಧ್ಯವಾಗದೇ ಇದ್ದುದರಿಂದ ತಾವೇ ಕ್ಷೇತ್ರಕ್ಕೆ ಬರುವುದಾಗಿ ಮಾಧ್ಯಮ ಪ್ರಕಟಣೆ ಮೂಲಕ ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ : ಮುಂಗಾರು ಪೂರ್ವ ಮಳೆ ಅವಾಂತರಕ್ಕೆ ರಾಜ್ಯದಲ್ಲಿ ಈವರೆಗೆ 52 ಮಂದಿ ಸಾವು: ಸಿಎಂ ಸಿದ್ದರಾಮಯ್ಯ

ಡಿಕೆಶಿಗೆ ನಾಲ್ಕು ಕೊಠಡಿ ಹಂಚಿಕೆ : ಇನ್ನು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾಲ್ಕು ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. 335, 336, 337, 337A ಸಂಖ್ಯೆಯ ಉತ್ತರ ದಿಕ್ಕಿನಲ್ಲಿರುವ ಕೊಠಡಿಗಳನ್ನು ನೀಡಲಾಗಿದೆ. ಹಾಗೆಯೇ, ಸಚಿವ ಕೆ.ಜೆ.ಜಾರ್ಜ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 317 ಮತ್ತು 317 ಎ ಮತ್ತು ಎಂ.ಬಿ.ಪಾಟೀಲ್ ಅವರಿಗೆ ವಿಧಾನಸೌಧದ 3ನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 344 ಮತ್ತು 344 ಎ ಹಾಗೂ ಜಮೀರ್​ ಅಹಮ್ಮದ್ ಖಾನ್ ಅವರಿಗೆ ವಿಕಾಸಸೌಧದ ಮೊದಲನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 143 ಮತ್ತು 146 ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಶಾಂತಿ ಸುವ್ಯವಸ್ಥೆ ಹದಗೆಟ್ಟರೆ ಪೊಲೀಸ್ ಅಧಿಕಾರಿಗಳೇ ಹೊಣೆ: ಸಿಎಂ, ಡಿಸಿಎಂ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.