ETV Bharat / state

ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ: ಬಸವರಾಜ್​ ಬೊಮ್ಮಾಯಿ

author img

By ETV Bharat Karnataka Team

Published : Jan 17, 2024, 10:38 PM IST

Etv Bharatformer-cm-basavaraja-bommai-slams-state-government
ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ನಯಾಪೈಸೆಯನ್ನು ಬಿಡುಗಡೆ ಮಾಡಿಲ್ಲ: ಬಸವರಾಜ್​ ಬೊಮ್ಮಾಯಿ

ತಮ್ಮ ಮೇಲಿನ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹಾಕಿದರೆ ರಾಜ್ಯದ ಜನರು ಇವರಿಗೆ ಯಾಕೆ ಅಧಿಕಾರ ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಬೆಂಗಳೂರು: ಬರ ಪರಿಹಾರಕ್ಕೆ ಕೇಂದ್ರ ಒಂದು ಕಂತು ಬಿಡುಗಡೆ ಮಾಡಿದ್ದರೂ, ರಾಜ್ಯ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ತಮ್ಮ ಮೇಲಿನ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹಾಕಿದರೆ ರಾಜ್ಯದ ಜನರು ಇವರಿಗೆ ಯಾಕೆ ಅಧಿಕಾರ ಕೊಡಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ರಾಜ್ಯದಲ್ಲಿ ಬರಗಾಲ ಬಂದು ಆರು ತಿಂಗಳಾಗಿದೆ. ಕೇಂದ್ರ ಸರ್ಕಾರ ಈಗಾಗಲೇ 360 ಕೋಟಿ ರೂ. ಒಂದು ಕಂತು ಬಿಡುಗಡೆ ಮಾಡಿದ್ದು. ಇನ್ನೊಂದು ಕಂತು ಬಿಡುಗಡೆ ಮಾಡಲಿದೆ. ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ನಯಾಪೈಸೆಯನ್ನು ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.

ರಾಜ್ಯದ ವಿಪತ್ತು ನಿಧಿಯ ಹಣವನ್ನು ಬಿಡುಗಡೆ ಮಾಡದೇ ಕೇಂದ್ರದ ಕಡೆಗೆ ರಾಜಕೀಯವಾಗಿ ಬೊಟ್ಟು ಮಾಡಲಾಗುತ್ತಿದೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ಕೇಂದಕ್ಕೆ ಕಾಯದೇ 2500 ಕೋಟಿ ರೂ. ಬಿಡುಗಡೆ ಮಾಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಹೀಗಿದ್ದರೂ ರಾಜ್ಯ ಸರ್ಕಾರ ಯಾಕೆ ಹಣ ಬಿಡುಗಡೆ ಮಾಡಬಾರದು. ತಮ್ಮ ಮೇಲಿನ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹಾಕಿದರೆ ರಾಜ್ಯದ ಜನರು ಇವರಿಗೆ ಯಾಕೆ ಅಧಿಕಾರ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.

15ನೇ ಹಣಕಾಸಿನ ಆಯೋಗ ತನ್ನ ರೂಪುರೇಷೆಗಳನ್ನು ತಯಾರು ಮಾಡುವಾಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತು. ಆಗ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡದೇ ಇವತ್ತು ರಾಜ್ಯದ ತೆರಿಗೆ ಪಾಲು ಶೇ 4.7 ನಿಂದ ಶೇ 3.6ಕ್ಕೆ ಇಳಿದಿದ್ದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಹಣಕಾಸಿನ ಆಯೋಗ ಸಂವಿಧಾನ ಬದ್ಧವಾಗಿ ರಚಿತವಾಗಿರುವ ಸ್ವತಂತ್ರ ಆಯೋಗ. ಅದಕ್ಕೂ ಕೇಂದ್ರ ಸರ್ಕಾರಕ್ಕೆ ಯಾವುದೇ ನೇರವಾದ ಸಂಬಂಧ ಇರುವುದಿಲ್ಲ. ಇದು ಗೊತ್ತಿದ್ದು ಮುಖ್ಯಮಂತ್ರಿಗಳು ರಾಜಕಾರಣ ಮಾಡುತ್ತಿದ್ದಾರೆ. ಆದಾಗ್ಯೂ 14ನೇ ಹಣಕಾಸಿನಲ್ಲಿ 14,996 ಕೋಟಿ ರೂ. ಮಾತ್ರ ಬಂದಿದೆ. 15ನೇ ಹಣಕಾಸಿನ ಆಯೋಗ ಇದುವರೆಗೂ 1,16,828 ಕೋಟಿ ರೂ. ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ಅವಧಿ 2026ರ ವರೆಗೂ ಇದೆ. ಒಟ್ಟು 2.5 ಲಕ್ಷ ಕೋಟಿಗೂ ಮೀರಿ ತೆರಿಗೆ ಹಂಚಿಕೆ ಬರಲಿದೆ ಎಂದು ವಿವರಿಸಿದ್ದಾರೆ.

ಕೇಂದ್ರ ಸರ್ಕಾರವು ಸಹಭಾಗಿತ್ವದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿರುವುದರಿಂದ ರಾಜ್ಯದ ಸಂಚಿತ ನಿಧಿಯಿಂದ ನೆರವು ಕೊಡುವ ವಿಧಾನ ಬದಲಾಗಿರುವುದು ನಿಮಗೆ ಗೊತ್ತಿದೆ. ಆದ್ದರಿಂದ ಸಂಚಿತ ನಿಧಿ ಮತ್ತು ನೇರವಾಗಿ ಬರುತ್ತಿರುವ ಅನುದಾನವನ್ನು ಸೇರಿಸಿ ರಾಜ್ಯಕ್ಕೆ ಒಟ್ಟು ಸರಿಯಾದ ಲೆಕ್ಕ ಸಿಗುತ್ತದೆ. ಮುಖ್ಯಮಂತ್ರಿಗಳಿಗೆ ಈ ವಿಚಾರ ಗೊತ್ತಿದ್ದು, ಸಂಚಿತ ನಿಧಿಗೆ ಬಂದ ಹಣವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು ಅರ್ಧ ಸತ್ಯವನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕಕ್ಕೆ ವಿಶೇಷ ಅನುದಾನ ಹಣಕಾಸಿನ ಆಯೋಗದ ಅಂತಿಮ ವರದಿಯಲ್ಲಿ ಶಿಫಾರಸ್ಸು ಆಗಿರುವುದಿಲ್ಲ ಕಳೆದ ಐದು ವರ್ಷದಿಂದ ಮಧ್ಯಂತರ ವರದಿಯನ್ನೇ ಇಟ್ಟುಕೊಂಡು ಮುಖ್ಯಮಂತ್ರಿಗಳು ತಮ್ಮ ರಾಜಕೀಯ ವಾದಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಇದಾಗ್ಯೂ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡಿರುವುದನ್ನು ಮುಖ್ಯಮಂತಿಗಳು ಎಲ್ಲಿಯೂ ಉಲ್ಲೇಖ ಮಾಡುವುದಿಲ್ಲ. ಮತು ಬೆಂಗಳೂರಿನ ಔಟರ್ ರಿಂಗ್ ರೋಡಿಗೆ 5,500 ಕೋಟಿಗೂ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ನೀಡಿದ್ದರೂ, ಆ ಯೋಜನೆಯನ್ನು ಇನ್ನೂ ಪಾರಂಭ ಮಾಡಿಲ್ಲ ಎಂದು ದೂರಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯ ಕುರಿತು ಸಾರ್ವಜನಿಕ ಚರ್ಚೆಗೆ ಸಿದ್ಧ : ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.