ETV Bharat / state

Basavaraj Bommai: ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ ₹ 30 ಲಕ್ಷ, ದೊಡ್ಡ ಹುದ್ದೆಗೆ ಕೋಟಿ ಕೋಟಿ ಇದೆ: ಮಾಜಿ ಸಿಎಂ ಬೊಮ್ಮಾಯಿ

author img

By

Published : Jul 3, 2023, 3:55 PM IST

Updated : Jul 3, 2023, 4:55 PM IST

ಬಿಟ್ ಕಾಯಿನ್ ಹಗರಣದ ಬಗ್ಗೆ ಯಾರಿಂದ ಬೇಕಾದರೂ ತನಿಖೆ ನಡೆಸಲಿ. ಒಳ್ಳೆಯದಾಗಲಿ.. ಎಸ್​ಐಟಿ, ಲೋಕಾಯುಕ್ತದಿಂದ ಬೇಕಿದ್ದರೂ ತನಿಖೆ ಮಾಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

former-cm-basavaraj-bommai-reaction-on-corruption-allegation-on-congress-govt
ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ 30 ಲಕ್ಷ, ದೊಡ್ಡ ಹುದ್ದೆಗೆ ಕೋಟಿ ಕೋಟಿ ಇದೆ: ಮಾಜಿ ಸಿಎಂ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ 30 ಲಕ್ಷ ರೂ., ದೊಡ್ಡ ಹುದ್ದೆಗೆ ಕೋಟಿ ಕೋಟಿ ಹಣ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು. ಭ್ರಷ್ಟಾಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ಅವರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅದು ಯಾವುದೋ ಸಣ್ಣ ಹುದ್ದೆ ಇರಬೇಕು. ಅದಕ್ಕೆ 30 ಲಕ್ಷ‌ ಕೇಳಿದ್ದಾರೆ, ಅಲ್ಲಿ ಕೋಟ್ಯಂತರ ರೂಪಾಯಿ ಕೇಳುತ್ತಿದ್ದಾರೆ ಎಂದು ಹೆಚ್​ಡಿಕೆ ಆರೋಪಕ್ಕೆ ಬೊಮ್ಮಾಯಿ ಧ್ವನಿಗೂಡಿಸಿದರು.

ಐಎಎಸ್, ಐಪಿಎಸ್ ಸೀನಿಯರ್ ಅಧಿಕಾರಿ ವರ್ಗಾವಣೆ ಹಲವಾರು ಬಾರಿ ಆಗುವುದು, ಬಳಿಕ ರದ್ದಾಗುವುದು ಅನೇಕ ಸಲ ಆಗಿದೆ. ವರ್ಗಾವಣೆ ದಂಧೆಗೆ ಇದೇ ಸಾಕ್ಷಿಯಾಗಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ಸುಖಾ ಸುಮ್ಮನೆ ಆರೋಪ ಮಾಡಿದ್ದೀರಿ. ಆಗ ಸಾಕ್ಷ್ಯ ಕೇಳಿದಾಗ ಕೊಡಲು ಆಗುತ್ತಾ ಅಂದ್ರಿ. ಈಗ ಸಾಕ್ಷಿ ಹೇಗೆ ಕೇಳುತ್ತೀರಿ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಬೊಮ್ಮಾಯಿ ಸವಾಲು: ಈ ಹಿಂದೆ ನಮ್ಮ ವಿರುದ್ಧ ಆರೋಪ ಮಾಡಿದಾಗ ಅದಕ್ಕೆ ಎಲ್ಲದಕ್ಕೂ ದಾಖಲೆ ಕೊಡೋಕೆ ಆಗುತ್ತಾ ಅಂತಿದ್ರು. ಈಗ ಯಾಕೆ ದಾಖಲೆ ಕೇಳ್ತಾ ಇದ್ದಾರೆ. 40%, 40% ಅಂತಿದ್ರಲ್ವಾ, ಈಗ 40% ಇಲ್ವಲ್ಲ. ಈಗ ಕೆಲಸ ಮಾಡಿ ತೋರಿಸಲಿ ಎಂದು ಬೊಮ್ಮಾಯಿ ಸವಾಲು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರಿ ಪ್ರಾಮಾಣಿಕತೆಯ ಬಗ್ಗೆ ಮಾತಾನಾಡುತ್ತ ಇದ್ದಾರೆ‌. ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಾಗ ಮಾತ್ರ ಈಗ ಹೊರಗಡೆ ಬರಲು ಸಾಧ್ಯ. ಎಲ್ಲಾ ಕಾಮಗಾರಿಗಳಲ್ಲಿ 40% ರೆಡ್ಯೂಸ್ ಮಾಡಿ ಕಾಮಗಾರಿ ಮಾಡಿ. ಕಾಂಟ್ರ್ಯಾಕ್ಟರ್ ಕೂಡ ಅದೇ ದರಕ್ಕೆ ಒಪ್ಪಿಕೊಳ್ಳಬೇಕು. ಈಗ ದುಡ್ಡು ಕಡಿಮೆಯಾಗಬೇಕಲ್ಲ. ನಮ್ಮಲ್ಲಿ 40% ಇತ್ತು ಅಂತಾ ಆರೋಪ ಮಾಡಿದ್ರಲ್ಲ. ಈಗ ಕಡಿಮೆ ಆಗಬೇಕು‌ ಎಂದು ಸರ್ಕಾರಕ್ಕೆ ಬೊಮ್ಮಾಯಿ ಕುಟುಕಿದರು. ಬಿಟ್ ಕಾಯಿನ್ ವಿಚಾರ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, ತನಿಖೆ ಮಾಡಲಿ. ಒಳ್ಳೆಯದಾಗಲಿ. ಎಸ್​ಐಟಿ, ಲೋಕಾಯುಕ್ತ ಯಾವ ತನಿಖೆಯನ್ನು ಬೇಕಾದ್ರೂ ಮಾಡಿಸಲಿ ಎಂದು ಬೊಮ್ಮಾಯಿ ಹೇಳಿದ್ರು.

ಸುಳ್ಳಿನ ಕಂತೆಯ ಭಾಷಣ: ರಾಜ್ಯಪಾಲ ಥಾವರ್​ಸಿಂಗ್​ ಚಂದ್​ ಗೆಹ್ಲೋಟ್​ ಅವರ ಭಾಷಣದಲ್ಲಿದ್ದ ಗ್ಯಾರಂಟಿಯೇ ಬೇರೆ. ಅನುಷ್ಠಾನ ಆಗಿರುವ ಗ್ಯಾರಂಟಿಯೇ ಬೇರೆ. ರಾಜ್ಯಪಾಲರ ಭಾಷಣ ಅತ್ಯಂತ ಸಪ್ಪೆ ಭಾಷಣ‌, ಹೊಸ ಸರ್ಕಾರ ಕವಲು ದಾರಿಯಲ್ಲಿ ಮುಂದುವರೆದಿದೆ. ಸುಳ್ಳಿನ ಕಂತೆಯ ಭಾಷಣ ಇದಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಗೃಹಜ್ಯೋತಿ ಯೋಜನೆ ಅಡಿ 200 ಯೂನಿಟ್ ಉಚಿತ ವಿದ್ಯುತ್​ ಕೊಡುತ್ತೇವೆ ಅಂದಿದ್ದಾರೆ. ಆ ಮೂಲಕ ಮತ್ತೆ ಸುಳ್ಳು ಹೇಳಿದ್ದಾರೆ. ಬೊಗಳೆ ಭಾಷಣವನ್ನು ರಾಜ್ಯಪಾಲರ ಮೂಲಕ ಮಾಡಿಸಿದ್ದಾರೆ. 2022-23ರಲ್ಲಿ ಯುವ ನಿಧಿ ಯೋಜನೆಯನ್ನು 6 ತಿಂಗಳಲ್ಲಿ ಕೊಡುತ್ತೇವೆ ಎಂದಿದ್ದಾರೆ. ಆದರೆ ಇನ್ನೂ ಆ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ‌‌ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Governor Speech: ಹಸಿದವರಿಗೆ ಅನ್ನ ನೀಡಿದ ಅತ್ಯಂತ ಜನಸ್ನೇಹಿ ಸರ್ಕಾರ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ

Last Updated :Jul 3, 2023, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.