ETV Bharat / state

ಡಿಫೆನ್ಸ್ ಏರೋಸ್ಪೇಸ್ ಪಾರ್ಕ್​ನಲ್ಲಿ ಬೇರೊಂದು ಸಂಸ್ಥೆಗೆ ಜಾಗ ವಿಚಾರ: ಮರಿತಿಬ್ಬೇಗೌಡ, ನಿರಾಣಿ ಜಟಾಪಟಿ..!

author img

By

Published : Feb 14, 2023, 5:15 PM IST

Etv Bharat
ನಿರಾಣಿ ಜಟಾಪಟಿ

ದೇವನಹಳ್ಳಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ​ಜಮೀನು ವಿಚಾರದಲ್ಲಿ ನಿಯಮ ಉಲ್ಲಂಘನೆ - ಜೆಡಿಎಸ್ ಮರಿತಿಬ್ಬೇಗೌಡ ಪ್ರಶ್ನೆಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉತ್ತರ

ಬೆಂಗಳೂರು: ದೇವನಹಳ್ಳಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್​ನಲ್ಲಿ ಬ್ರಿಗೇಡ್ ಸಂಸ್ಥೆ ಅವರಿಗೆ ಮಂಜೂರು ಮಾಡಿರುವ ಜಮೀನು ವಿಚಾರದಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಆಗಿಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ದೇವನಹಳ್ಳಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್​ನಲ್ಲಿ ಬ್ರಿಗೇಡ್ ಸಂಸ್ಥೆ ಅವರಿಗೆ ಜಮೀನು ಮಂಜೂರು ಮಾಡಿದೆ. ಮೊದಲು ಜಾಗ ಕೊಡಲಾಗಿದೆ.

7 ವರ್ಷದ ನಂತರ ಗುತ್ತಿಗೆ ಮತ್ತು ಮಾರಾಟ ಕರಾರು ಮಾಡಿದ್ದಾರೆ‌ ಇದರಿಂದ ಕೆಐಎಡಿಬಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇನ್ನು ಯಾವುದೇ ಕೆಲಸ ಆಗಿಲ್ಲ. ಇದರಲ್ಲಿ ದೊಡ್ಡ ಅಕ್ರಮ ಆಗಿದೆ. ಈ ಬಗ್ಗೆ ತನಿಖೆ ಮಾಡಬೇಕು ಎಂದು ಜೆಡಿಎಸ್ ಮರಿತಿಬ್ಬೇಗೌಡ ಆಗ್ರಹಕ್ಕೆ ಸಚಿವ ಮುರುಗೇಶ್ ನಿರಾಣಿ ಉತ್ತರಿಸಿದರು.

ಬ್ರಿಗೇಡ್ ಗ್ರೂಪ್​ಗೆ ನೀಡಿರುವ ಜಮೀನಿನಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಮಂಜೂರಾದ ಜಾಗದಲ್ಲಿ 15 ಮನೆ, ಶಾಲೆ, ಆಸ್ಪತ್ರೆ, ಉದ್ಯೋಗಿಗಳಿಗೆ ನಿರ್ಮಾಣ ಮಾಡಲು ಅವಕಾಶ ನಿಯಮದಲ್ಲಿ ಇದೆ. ಯಾವುದೇ ಅಕ್ರಮ ಆಗಿಲ್ಲ. 50 ಎಕರೆ ಮತ್ತು 5 ಎಕರೆಗೆ 2012 ರಲ್ಲಿ ಪೂರ್ತಿ ಹಣ ಅವರು ಕಟ್ಟಿದ್ದಾರೆ. ಈಗಾಗಲೇ ಉದ್ಯೋಗಿಗಳಿಗೆ ಮನೆ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. ಬ್ರಿಗೇಡ್ ಗ್ರೂಪ್​ಗೆ ಕೇಂದ್ರ ಕೂಡಾ ಅವಾರ್ಡ್ ಕೊಟ್ಟಿದೆ. ಬ್ರಿಗೇಡ್ ಗ್ರೂಪ್​ಗೆ ಕೊಟ್ಟಿರುವ ಜಮೀನಿನಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ ಎಂದರು.

ಸಚಿವರ ಉತ್ತರಕ್ಕೆ ಅಸಮಧಾನ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ಈ ಜಮೀನು ಹಂಚಿಕೆಯಲ್ಲಿ ಅಕ್ರಮ ಆಗಿದೆ. ಬಡವರಿಗೆ ಮನೆ ಕೊಟ್ಟಿಲ್ಲ. ಕಾರ್ಪೋರೆಟ್ ಕಂಪನಿಗೆ ಮನೆ ಕಟ್ಟಿಕೊಡ್ತಿದ್ದಾರೆ. ಅಕ್ರಮ ಆಗಿದೆ ಸದನ ಸಮಿತಿ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ನಿರಾಣಿ, ಬ್ರಿಗೇಡ್ ಗ್ರೂಪ್​ಗೆ ಕೊಟ್ಟ ಜಾಗದಲ್ಲಿ ಯಾವುದೇ ಅಕ್ರಮ ಆಗಿಲ್ಲ. 100% ಹಣ ಬ್ರಿಗೇಡ್ ಗ್ರೂಪ್ 2012 ರಲ್ಲಿ ಕಟ್ಟಿದ್ದಾರೆ. ಬೆಂಗಳೂರು ಕಾಮರ್ಸ್ ಛೇಂಬರ್ ಕೂಡಾ ಇದರಲ್ಲಿ ಸೇರಿಕೊಂಡಿದೆ. ಕೌಶಲ್ಯಾಭಿವೃದ್ದಿ ಇಲಾಖೆ ಕೂಡಾ ಕೆಲಸ ಮಾಡುತ್ತಿದೆ. ಇದರಲ್ಲಿ ಅಕ್ರಮ ಆಗಿಲ್ಲ ಎಂದರು.

ಸಚಿವರ ಉತ್ತರಕ್ಕೆ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದರು, ಈ ಮಂತ್ರಿಗಳು ರಾಜ್ಯವನ್ನು ಹರಾಜು ಹಾಕುತ್ತಾರೆ ಎಂದರು. ಮರಿತಿಬ್ಬೇಗೌಡ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ರಾಜ್ಯ ಹರಾಜು ಹಾಕುತ್ತಾರೆ ಎಂಬ ಪದ ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಸಭಾಪತಿ ಭರವಸೆ ನೀಡಿದರು.

ಹೂಡಿಕೆಯಲ್ಲಿ ರಾಜ್ಯ ನಂಬರ್ ಒನ್: ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದೆ. ಬೇರೆ ಬೇರೆ ದೇಶದಿಂದ ರಾಜ್ಯಕ್ಕೆ ಬಂಡವಾಳ ಹರಿದು ಬರುತ್ತಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ ಯಾದವ್ ಪ್ರಶ್ನೆಗೆ ಉತ್ತರಿಸಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬಂಡವಾಳ ಹೂಡಿಕೆ ಸಮಾವೇಶದಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಬಂದಿದೆ. ಈಗಾಗಲೇ 2.4 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಿದೆ. 5 ವರ್ಷಗಳಲ್ಲಿ 6-7 ಲಕ್ಷ ಉದ್ಯೋಗ ಇದರಿಂದ ಸೃಷ್ಟಿ ಆಗುತ್ತದೆ. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿ ಇದೆ. ಬೇರೆ ಬೇರೆ ದೇಶದಿಂದ ಬಂಡವಾಳ ಹರಿದು ಬರುತ್ತಿದೆ ಎಂದರು.

ಕಾಂಗ್ರೆಸ್ ತಪ್ಪು ಬಿಜೆಪಿಯಿಂದ ಸರಿಪಡಿಸುವ ಕೆಲಸ: ಸತ್ಯಸಾಯಿ ಬಾಬಾ ಆಸ್ಪತ್ರೆಗೆ 5 ಎಕರೆ ಜಮೀನು ಹಂಚಿಕೆಯಲ್ಲಿ ಅಕ್ರಮ ಆಗಿದೆ. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಆಗಿರುವ ತಪ್ಪನ್ನು ಈಗ ನಾವು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಕೆಐಎಡಿಬಿ ವತಿಯಿಂದ ಸತ್ಯಸಾಯಿ ಬಾಬಾ ಆಸ್ಪತ್ರೆಗೆ 5 ಎಕರೆ ಜಾಗವನ್ನು ಸರ್ಕಾರ 2003 ರಲ್ಲಿ ನೀಡಿದೆ. ಅತುರವಾಗಿ ಈ ಸಂಸ್ಥೆಗೆ ಜಾಗ ನೀಡಲಾಗಿದೆ. ಈ ಜಮೀನು ಹಂಚಿಕೆಯಲ್ಲಿ ಅಕ್ರಮ ಆಗಿದೆ. ಈ‌ ಬಗ್ಗೆ ತನಿಖೆ ಆಗಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವ ನಿರಾಣಿ, ಎಸ್.ಎಂ ಕೃಷ್ಣ ಇದ್ದಾಗ ಈ ಪ್ರೋಸೆಸ್ ಪ್ರಾರಂಭ ಆಯಿತು. ಧರ್ಮಸಿಂಗ್ ಸರ್ಕಾರ ಇದ್ದಾಗ ಈ ಜಾಗ ಹಂಚಿಕೆ ಆಗಿದೆ. ಕಾಂಗ್ರೆಸ್ ಸರ್ಕಾರವೇ ಈ ಜಾಗವನ್ನು ಆಸ್ಪತ್ರೆಗೆ ಹಂಚಿಕೆ ಮಾಡಿದೆ. 2017 ರಲ್ಲಿ ಎರಡು ಎಕರೆಯಲ್ಲಿ ಹಾಸ್ಪಿಟಲ್, 3 ಎಕರೆಯಲ್ಲಿ ಐಟಿ ಪಾರ್ಕ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈಗ ಐಟಿ ಪಾರ್ಕ್ ಮಾಡಲ್ಲ ಅಂತ ಹೇಳಿದ್ದಾರೆ. 2016 ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಈ ಅಕ್ರಮ ಆಗಿದೆ. ನಮ್ಮ ಸರ್ಕಾರದಲ್ಲಿ ಯಾವುದೇ ತಪ್ಪು ಆಗಿಲ್ಲ. 2016 ರಲ್ಲಿ ಆದ ತಪ್ಪನ್ನು ನಾವು ಸರಿ ಮಾಡುತ್ತೇವೆ ಎಂದರು.

ಜೂನ್ ಅಂತ್ಯದೊಳಗೆ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣ: ರಾಜ್ಯದಲ್ಲಿ 7 ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಜೂನ್ 2023 ಒಳಗೆ ಎಲ್ಲಾ ಕಾಮಗಾರಿ ಮುಗಿಸಲಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಅಬ್ದುಲ್ ಜಬ್ಬರ್ ಸ್ಮಾರ್ಟ್ ಸಿಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 7 ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಜೂನ್ 2023 ಒಳಗೆ ಎಲ್ಲಾ ಕಾಮಗಾರಿ ಮುಗಿಸಲು ಕೇಂದ್ರ ಸೂಚನೆ ನೀಡಿದೆ. ಒಟ್ಟು 651 ಕಾಮಗಾರಿ ನಡೆಯುತ್ತಿದೆ. ಈ ವರೆಗೆ 522 ಕಾಮಗಾರಿ ಪೂರ್ಣಗೊಂಡಿದೆ. 127 ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ಒದಗಿಸಿದರು.

ಕರ್ನಾಟಕದಲ್ಲಿ ಶೇ80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಾವು ದೇಶದಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಕೇಂದ್ರ ಸರ್ಕಾರ 3,400 ಕೋಟಿ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 3,500 ಕೋಟಿ ಬಿಡುಗಡೆ ಮಾಡಿದೆ. ಜೂನ್ 2023 ಒಳಗೆ ಕಾಮಗಾರಿ ಮುಗಿಸುತ್ತೇವೆ. 2-3 ಕಾಮಗಾರಿಗಳಿಗೆ ಹೆಚ್ಚುವರಿ ಸಮಯ ಕೇಳಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಅ ಕಾಮಗಾರಿಗಳನ್ನ 2024ಕ್ಕೆ ಮುಕ್ತಾಯ ಮಾಡುತ್ತೇವೆ ಎಂದರು.

ಇದನ್ನೂ ಓದಿ: ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದಿಂದ ತೌಡು ಕುಟ್ಟುವ ಕೆಲಸವಾಗಿದೆ: ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.