ETV Bharat / state

ಬೆಂಗಳೂರು: ಬೊಗಳಿದ ನಾಯಿಯ ಮಾಲೀಕನೆಂದು ಭಾವಿಸಿ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ.. ಆರೋಪಿ ಬಂಧನ

author img

By ETV Bharat Karnataka Team

Published : Aug 28, 2023, 4:08 PM IST

man-stabbed-for-dog-barking-accused-arrested-police
ಬೊಗಳಿದ ನಾಯಿಯ ಮಾಲೀಕನೆಂದು ಭಾವಿಸಿ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ: ಆರೋಪಿ ಬಂಧನ

ನಾಯಿ ಬೊಗಳಿದ್ದಕ್ಕೆ ಅದರ ಮಾಲೀಕನೆಂದು ಭಾವಿಸಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದ ಆರೋಪಿಯನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು

ಬೆಂಗಳೂರು : ರಸ್ತೆಯಲ್ಲಿ ನಾಯಿ ಬೊಗಳಿದ್ದಕ್ಕೆ ಸಿಟ್ಟಿಗೆದ್ದು ಅದರ ಮಾಲೀಕನೆಂದು ಭಾವಿಸಿ ಬೇರೊಬ್ಬ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ ಆರೋಪಿಯನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಾಲಸುಬ್ರಹ್ಮಣ್ಯ ಎಂಬಾತನಿಗೆ ಚಾಕುವಿನಿಂದ ಹಲ್ಲೆಗೈದ ಆರೋಪಿ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಮಲ್ಲೇಶ್ವರಂನ 8ನೇ ಮುಖ್ಯ ರಸ್ತೆಯ ಗಣೇಶ ದೇವಸ್ಥಾನದ ಬಳಿ ಬಾಲಸುಬ್ರಹ್ಮಣ್ಯ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅವರ ಹಿಂದೆ ಬರುತ್ತಿದ್ದ ಬೀದಿ ನಾಯಿ ಎದುರಿಗೆ ಬರುತ್ತಿದ್ದ ರಾಜುನನ್ನು ನೋಡಿ ಬೊಗಳಿತ್ತು. ಇದರಿಂದ ಸಿಟ್ಟಿಗೆದ್ದ ರಾಜು ಬಾಲಸುಬ್ರಹ್ಮಣ್ಯರನ್ನೇ ನಾಯಿಯ ಮಾಲೀಕನೆಂದು ಭಾವಿಸಿ ಕ್ಯಾತೆ ತೆಗೆದಿದ್ದ.

ಈ ವೇಳೆ ಆರೋಪಿ ರಾಜು ಏಕಾಏಕಿ ಬಾಲಸುಬ್ರಹ್ಮಣ್ಯರ ಕೆನ್ನೆ, ಕಿರುಬೆರಳಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಗಾಯಗೊಂಡಿದ್ದ ಬಾಲಸುಬ್ರಹ್ಮಣ್ಯ ಚಿಕಿತ್ಸೆ ಪಡೆದು ಬಳಿಕ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಜುನನ್ನು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

ರಾಮನಗರದಲ್ಲಿ ಬಾಲಕಿಗೆ ಚಾಕು ಇರಿದು ಕಿಡ್ನಾಪ್​ : ಹಾಡಹಗಲೇ ಕಾಲೇಜು ವಿದ್ಯಾರ್ಥಿನಿಗೆ ಚಾಕು ಇರಿದು ಅಪಹರಣ ಮಾಡಿರುವ ಘಟನೆ ಇಂದು ರಾಮನಗರ ಜಿಲ್ಲೆಯ ಕಾಲೇಜೊಂದರ ಬಳಿ ಇಂದು ನಡೆದಿತ್ತು. ಗಂಭೀರ ಗಾಯಗೊಂಡ ಬಾಲಕಿಯನ್ನು ಬಳಿಕ ಅಪಹರಣಕಾರರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಹರಣದ ವೇಳೆ ವಿದ್ಯಾರ್ಥಿನಿಯ ಕೈಗೆ ಮತ್ತು ಭುಜದ ಭಾಗಕ್ಕೆ ದುಷ್ಕರ್ಮಿಗಳು ಇರಿದಿದ್ದಾರೆ. ಸ್ಥಳಕ್ಕೆ ರಾಮನಗರ ಟೌನ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾಹಿತಿ ಪ್ರಕಾರ, ಕನಕಪುರದ ದಾಳಿಂಬ ಗ್ರಾಮದ ವಿದ್ಯಾರ್ಥಿನಿ ಎಂದಿನಂತೆ ಇಂದು ಬೆಳಗ್ಗೆ ತನ್ನ ಸಹಪಾಠಿಗಳೊಂದಿಗೆ ಕಾಲೇಜಿಗೆ ಬರುತ್ತಿದ್ದಳು. ಈ ವೇಳೆ ವಿದ್ಯಾರ್ಥಿನಿ ಕಾಲೇಜಿನ ಪ್ರವೇಶದ್ವಾರಕ್ಕೆ ಬಳಿ ಬರುತ್ತಿದ್ದಂತೆ ಕಾರಿನಲ್ಲಿ ಬಂದ ದುಷ್ಕರ್ಮಿಗಳಲ್ಲಿ ಓರ್ವ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಬಾಲಕಿಯನ್ನು ಕುಸಿದು ಬಿದ್ದಿದ್ದು, ತಕ್ಷಣ ಕಾರಿನೊಳಕ್ಕೆ ಎಳೆದು ಪರಾರಿಯಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕಾರಿಗೆ ಕಲ್ಲು ತೂರಿ ತಡೆಯಲು ಯತ್ನಿಸಿದ್ದಾರೆ. ಆದರೂ, ಕಾರು ಬಾಲಕಿಯನ್ನು ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಇದನ್ನೂ ಓದಿ : ಬಜ್ಜಿ ತಿನ್ನಲು ಹೋಗಿದ್ದ ಯುವಕನಿಗೆ ಚೂರಿ ಇರಿತ: ಐವರ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.