ETV Bharat / state

ಜನಾರ್ದನ ರೆಡ್ಡಿ ಪಕ್ಷದ ಪರ ಶ್ರೀರಾಮುಲು ಟ್ವೀಟ್ ಡಿಲೀಟ್: ಟೀಕಿಸಿದ ಕಾಂಗ್ರೆಸ್

author img

By

Published : Jan 18, 2023, 8:43 AM IST

Congress
ಕಾಂಗ್ರೆಸ್

ಜನಾರ್ದನ ರೆಡ್ಡಿ ಪಕ್ಷದ ಪರ ಶ್ರೀರಾಮುಲು ಟ್ವೀಟ್ ಮಾಡಿ ನಂತರ ಡಿಲೀಟ್‌ ಮಾಡಿರುವ ವಿಚಾರವಾಗಿ ಕಾಂಗ್ರೆಸ್‌ ಟೀಕಾಸ್ತ್ರ ಪ್ರಯೋಗಿಸಿದೆ.

ಬೆಂಗಳೂರು : ಜನಾರ್ದನ ರೆಡ್ಡಿಯವರ ಹೊಸ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಸಚಿವ ಶ್ರೀರಾಮುಲು ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದೆ. ಶ್ರೀರಾಮುಲು ಅವರೇ, ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ ಎಂದು ಕೈ ಪಕ್ಷ ಪ್ರಶ್ನಿಸಿದೆ. ಟ್ವೀಟ್​ ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ?. ರಾಮುಲು ಪಕ್ಷ ಬಿಡುವರೇ ಎಂದೆಲ್ಲ ಕೇಳಿ ರಾಜ್ಯ ಕಾಂಗ್ರೆಸ್​ ಕಾಲೆಳೆದಿದೆ. ಈ ಮೂಲಕ ಶ್ರೀರಾಮುಲು ಟ್ವೀಟ್​ನ ಮರ್ಮ ಏನು?. ಅದನ್ನು ಡಿಲೀಟ್ ಮಾಡಲು ಕಾರಣವೇನು ಎಂಬ ಪ್ರಶ್ನೆಗಳನ್ನು ಟ್ವೀಟ್ ಮೂಲಕ ಕೇಳಿ ಟಾಂಗ್​ ಕೊಟ್ಟಿದೆ.

ಮಂಗಳವಾರ ಸಚಿವ ಶ್ರೀರಾಮುಲು ಅವರು ಜನವರಿ 17ನೇ 2023ರಂದು ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಂಧನೂರಿನ ಮಹಾಜನತೆಯನ್ನು ಹೃದಯಪೂರ್ವಕವಾಗಿ ಆಹ್ವಾನಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಆದರೆ ಯಾವಾಗ ಈ ಟ್ವೀಟ್ ಬಗ್ಗೆ ಸಾಕಷ್ಟು ಅನುಮಾನ, ಟೀಕೆ, ವ್ಯಾಖ್ಯಾನಗಳು ಬರಲು ಪ್ರಾರಂಭವಾಯಿತೋ ಶ್ರೀರಾಮುಲು ತಾವು ಮಾಡಿದ್ದ ಟ್ವೀಟ್ ಅನ್ನು ತೆಗೆದು ಹಾಕಿದ್ದರು. ಈ ಎಲ್ಲಾ ಬೆಳವಣಿಗಳು ಶ್ರೀರಾಮುಲು ಮೇಲೆ ಸಾಕಷ್ಟು ಅನುಮಾನ ಉಂಟುಮಾಡಿತ್ತು. ಶ್ರೀರಾಮುಲು ಜನಾರ್ದನ ರೆಡ್ಡಿ ಪಕ್ಷದತ್ತ ಒಲವು ಹೊಂದಿದ್ದಾರೆಯೇ ಎಂದು ಹಲವರು ಕೇಳಿದ್ದರು.

  • ಜನಾರ್ಧನ ರೆಡ್ಡಿಯವರ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ಡಿಲೀಟ್ ಮಾಡಿದ @sriramulubjp ಅವರೇ,

    ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ?

    ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ?

    ರಾಮುಲು ಪಕ್ಷ ಬಿಡುವರೇ @BJP4Karnataka?#BJPvsBJP pic.twitter.com/Q4V3GH7dcz

    — Karnataka Congress (@INCKarnataka) January 17, 2023 " class="align-text-top noRightClick twitterSection" data=" ">

ಐಟಿ ದಾಳಿಗೂ ಟ್ವೀಟ್‌ಗೂ ಲಿಂಕ್‌: ಇತ್ತ ಕಾಂಗ್ರೆಸ್ ಟ್ವೀಟ್​ನಲ್ಲಿ ಬಳ್ಳಾರಿಯ ಉಕ್ಕಿನ ಕಾರ್ಖಾನೆಗಳ ಮೇಲಿನ ಐಟಿ ದಾಳಿಗೂ ಶ್ರೀರಾಮುಲು ಟ್ವೀಟ್‌ಗೂ ಲಿಂಕ್‌ ಮಾಡಿದೆ.‌ ಶ್ರೀರಾಮುಲು ಅವರೇ ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ ಎಂದು ಪ್ರಶ್ನಿಸಿದೆ. ಕಳೆದ ವಾರ ಪ್ರಭಾವಿ ರಾಜಕಾರಣಿಗಳ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲ ಗಣಿ ಉದ್ಯಮಿಗಳ ಮನೆ ಹಾಗೂ ಅವರ ಉಕ್ಕಿನ ಕಾರ್ಖಾನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದರು. ಬೆಂಗಳೂರು, ಬಳ್ಳಾರಿ ಹಾಗೂ ಕೊಪ್ಪಳ ಸೇರಿದಂತೆ ಹಲವು ಸ್ಥಳಗಳಲ್ಲಿ ತೆರಿಗೆ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿತ್ತು.

ಪ್ರಭಾವಿ ರಾಜಕಾರಣಿಗಳು ಹಾಗೂ ಕೈಗಾರಿಕೋದ್ಯಮಿ ಸೇರಿ ಖರೀದಿಸಿದ್ದಾರೆ ಎನ್ನಲಾದ ನೂರಾರು ಕೋಟಿ ರೂ ಬೆಲೆ ಬಾಳುವ ಫ್ಯಾಕ್ಟರಿ ಖರೀದಿಯ ಹಣದ ಮೂಲದ ಬಗ್ಗೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಐಟಿ ಅಧಿಕಾರಿಗಳ ಕೈಗೆ ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಫ್ಯಾಕ್ಟರಿ ಖರೀದಿಯ ಹಣದ ಮೂಲವನ್ನು ಅಧಿಕಾರಿಗಳು ಕೆದಕುತ್ತಿದ್ದಾರೆ. ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿಯಾಗಿದ್ದರಿಂದ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಬಿ.ಶ್ರೀರಾಮುಲು, ನಾನು ಯಾವುದೇ ಕಾರ್ಖಾನೆಯಲ್ಲಿ ಪಾಲುದಾರಿಕೆ ಹೊಂದಿಲ್ಲ. ಈ ಹಿಂದೆಯೂ ಯಾವುದೇ ಕಾರ್ಖಾನೆಗಳೊಂದಿಗೆ ಪಾಲುದಾರಿಕೆ ಹೊಂದಿರಲಿಲ್ಲ. ಐಟಿ ದಾಳಿಗಳು ನಡೆಯುವುದು ಸಾಮಾನ್ಯ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಯಾರ ಮೇಲೆ ದಾಳಿ ನಡೆದರೂ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ :ಕೆಲ ಉಕ್ಕಿನ ಕಾರ್ಖಾನೆಗಳ ಮೇಲೆ ಐಟಿ ದಾಳಿ.. ದಾಖಲೆಗಳ ಪರಿಶೀಲನೆ.. ಪಾಲುದಾರಿಕೆ ಬಗ್ಗೆ ಶ್ರೀರಾಮುಲು ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.