ETV Bharat / state

ಕೆ.ಭಕ್ತವತ್ಸಲ ಆಯೋಗದ‌ ಮೂರು ಶಿಫಾರಸಿಗೆ ಸಂಪುಟ ಸಭೆ ಅಸ್ತು: ಸಚಿವ ಹೆಚ್.ಕೆ.ಪಾಟೀಲ್

author img

By ETV Bharat Karnataka Team

Published : Oct 5, 2023, 10:46 PM IST

ಸಚಿವ ಹೆಚ್.ಕೆ ಪಾಟೀಲ್
ಸಚಿವ ಹೆಚ್.ಕೆ ಪಾಟೀಲ್

ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯಗಳನ್ನು ಸಚಿವ ಹೆಚ್.ಕೆ.ಪಾಟೀಲ್​ ವಿವರಿಸಿದರು.

ಸಚಿವ ಸಂಪುಟ ಸಭೆ ಬಳಿಕ ಸಚಿವ ಹೆಚ್​.ಕೆ.ಪಾಟೀಲ್ ಮಾಹಿತಿ

ಬೆಂಗಳೂರು : ಹಿಂದುಳಿದ ವರ್ಗಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಜಸ್ಟೀಸ್ ಡಾ.ಕೆ.ಭಕ್ತವತ್ಸಲ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ಸಲ್ಲಿಸಿರುವ ವರದಿಯಲ್ಲಿನ ಐದು ಶಿಫಾರಸುಗಳ ಪೈಕಿ ಮೂರು ಶಿಫಾರಸುಗಳನ್ನು ಸಚಿವ ಸಂಪುಟ ಸಭೆ ಅಂಗೀಕಾರ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾ, ಮುಂಬರುವ ಸ್ಥಳೀಯ ನಗರ ಮತ್ತು ಗ್ರಾಮೀಣ ಸಂಸ್ಥೆಗಳಲ್ಲಿ 33% ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲು ಮತ್ತು ಒಟ್ಟಾರೆ ಮೀಸಲಾತಿ ಶೇ.50 ರಷ್ಟು ಮೀರದಿರುವಂತೆ ರಾಜಕೀಯ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮುಂದುವರೆಸಿಕೊಂಡು ಹೋಗುವ ಶಿಫಾರಸಿಗೆ ಅನುಮೋದನೆ ನೀಡಲಾಗಿದೆ ಎಂದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಮತ್ತು ಉಪಮೇಯ‌ರ್ ಸ್ಥಾನಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಿರಿಸುವ ಶಿಫಾರಸಿಗೆ ಒಪ್ಪಿಗೆ ನೀಡಲಾಗಿದೆ‌. ಎಲ್ಲಾ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ಶಾಖೆಗಳನ್ನು ಡಿಪಿಎಆರ್ ಹತೋಟಿಗೆ ನೀಡಲು ಭಕ್ತವತ್ಸಲ ಸಮಿತಿ ಮಾಡಿದ ಶಿಫಾರಸನ್ನು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬಿಬಿಎಂಪಿ ಕಾಯ್ದೆ 2020 ರಂದು ಮೇಯರ್ ಮತ್ತು ಸ್ಥಾನಗಳಿಗೆ 30 ತಿಂಗಳು ನಿಗದಿಪಡಿಸುವ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಸ್ತರಿಸಲು ಕರ್ನಾಟಕ ಮುನ್ಸಿಪಲ್ ಕಾಯ್ದೆಯ ಕಲಂ 10ಕ್ಕೆ ತಿದ್ದುಪಡಿ ತರುವ ಶಿಫಾರಸ್ಸಿಗೆ ಒಪ್ಪಿಗೆ ನೀಡಿಲ್ಲ.

ಅದೇ ರೀತಿ 2027-28ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಹಿಂದುಳಿದ ವರ್ಗಗಳ ಕೆಟಗರಿ ಎ ಮತ್ತು ಬಿ ಜೊತೆಗೆ ಅಲ್ಪಸಂಖ್ಯಾತರು ಸೇರಿದಂತೆ ಇತರ ಹಿಂದುಳಿದ ವರ್ಗದವರಿಗಾಗಿ ಪರಿಣಾಮಕಾರಿಯಾದ ರಾಜಕೀಯ ಮೀಸಲು ವ್ಯವಸ್ಥೆ ಕಲ್ಪಿಸಲು ಎರಡು ಹೆಚ್ಚುವರಿ ಕೆಟಗರಿಗಳನ್ನು ಸೇರಿಸಿ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಮಾಡಲು ಕ್ರಮ ಕೈಗೊಳ್ಳಲು ಜಸ್ಟೀಸ್ ಡಾ.ಕೆ.ಭಕ್ತವತ್ಸಲ ಆಯೋಗ ಶಿಫಾರಸ್ಸಿಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ 33% ಒಬಿಸಿ ಮೀಸಲಾತಿ ಅನ್ವಯವಾಗುವುದು ಅನುಮಾನ ಎಂದು ಸಚಿವರು ಹೇಳಿದರು.

33% ಒಬಿಸಿ ಮೀಸಲಾತಿ ಗೊಂದಲ?: ಜನಸಂಖ್ಯೆಯ ಅನುಪಾದಲ್ಲಿ ಎಸ್​ಸಿ-ಎಸ್​ಟಿ ಒಟ್ಟು ಮೀಸಲಾತಿ ಸೀಟುಗಳ ಪ್ರಮಾಣವನ್ನು 50%ನ ಒಟ್ಟು ಮೀಸಲಾತಿ ಗರಿಷ್ಠ ಮಿತಿಯಿಂದ ಕಳೆದು ಉಳಿಯುವ ಮೀಸಲಾತಿಯನ್ನು ಹಿಂದುಳಿದ ವರ್ಗಕ್ಕೆ ನೀಡಲಾಗುವುದು. ಅದರಂತೆ ಲೆಕ್ಕ ಹಾಕಿದರೆ ಸದ್ಯ ಎಸ್​ಸಿ, ಎಸ್​ಟಿಗೆ ಒಟ್ಟು 24% ಮೀಸಲಾತಿ ಇದೆ. ಅದನ್ನು 50% ಮೀಸಲಾತಿ ಮಿತಿಯಿಂದ ಕಳೆದರೆ ಉಳಿಯುವ 26% ಮೀಸಲಾತಿ ಒಬಿಸಿ ಪಾಲಾಗಲಿದೆ. ಆದರೆ, ಅದು 33% ಮೀಸಲಾತಿ ಕಲ್ಪಿಸುವುದಿಲ್ಲ. ಈ ಬಗ್ಗೆ ಸಚಿವರಿಂದ ಸ್ಪಷ್ಟನೆ ಸಿಕ್ಕಿಲ್ಲ. 33% ಮೀಸಲಾತಿ ನೀಡಿದರೆ ಅದು 50% ಮಿತಿಯನ್ನು ಮೀರಲಿದೆ. ಅದರ ಜೊತೆಗೆ 10% ಇಡಬ್ಲ್ಯುಎಸ್ ಮೀಸಲಾತಿಯೂ ಇದೆ‌. ಹೀಗಾಗಿ 33% ಒಬಿಸಿ ಮೀಸಲಾತಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ ಎಂದು ವಿವರಿಸಿದರು.

ಸಚಿವ ಸಂಪುಟದ ಇತರೆ ತೀರ್ಮಾನಗಳು:

  • ಕರ್ನಾಟಕ ರಾಜ್ಯ ಉಗ್ರಾಣ ನಿಗಮ WIF & NWS 2015-16 & RIDF-XXII ಅಪೂರ್ಣಗೊಂಡಿರುವ ಯೋಜನೆಯಡಿಯಲ್ಲಿ ಉಗ್ರಾಣಗಳ ನಿರ್ಮಾಣ ಕಾಮಗಾರಿಗಳು ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅವಶ್ಯವಿರುವ ರೂ. 376.54 ಕೋಟಿಗಳನ್ನು ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ‌. ಇನ್ನು ಐಎಎಸ್ ಅಧಿಕಾರಿಗಳು ಸೇರಿದಂತೆ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸಿವಿಲ್‌ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ಕ್ರಮ ತೆಗೆದುಕೊಳ್ಳಲು ಹಾಗೂ ವಿಳಂಬಕ್ಕೆ ಕಾರಣರಾದ ಸಹಕಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳು ತೀರ್ಮಾನ.
  • ನಿಮ್ಹಾನ್ಸ್ ಸಹಯೋಗದೊಂದಿಗೆ ಆರೋಗ್ಯ ಆರೈಕೆ ಸೇವೆಗಳನ್ನು ಉತ್ತೇಜಿಸಲು ಮತ್ತು ರಾಜ್ಯದ 3 ಜಿಲ್ಲೆಗಳಲ್ಲಿ ಬ್ರೆನ್ ಹೆಲ್ತ್ ಇನಿಶಿಯೇಟಿವ್ (Brain Health Initiative) ಹೆಲ್ತ್ ಎಂಬ ವಿಶಿಷ್ಟವಾದ ಯೋಜನೆಯನ್ನು 25 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿ, ಯಶಸ್ವಿಯಾದರೆ ಬಳಿಕ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಒಪ್ಪಿಗೆ.
  • ರಕ್ತಹೀನತೆಮುಕ್ತ ಪೌಷ್ಟಿಕ ಕರ್ನಾಟಕ (AMPK) ಯೋಜನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ 185.74 ಕೋಟಿ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ.
  • ಬಳ್ಳಾರಿ ನಗರದ ಪಾರ್ವತಿ ನಗರ ಬಡಾವಣೆಯಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯ ರೂ. 121.90 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.
  • ಕರ್ನಾಟಕ ಗೃಹ ಮಂಡಳಿ ವತಿಯಿಂದ ಅನುಪಾತದ ಪಾಲುದಾರಿಕೆಯಡಿ ಭೂಮಿ ಪಡೆದು ವಸತಿ ಯೋಜನೆ ಅನುಷ್ಠಾನ ಮಾಡಲು ಒಂದು ಸಾಮಾನ್ಯ ನೀತಿ ರೂಪಿಸಲು ಒಪ್ಪಿಗೆ. ವಸತಿ ಯೋಜನೆಗಳನ್ನು ತೀರ್ಮಾನಗಳನ್ನು ಪ್ರಕರಣವಾರು ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಲಿಂಗಾಯತ ಕಡೆಗಣನೆ ವಿಚಾರ ಚರ್ಚೆ: ಸಚಿವ ಸಂಪುಡ ಸಭೆಯಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರವೂ ಚರ್ಚೆಗೆ ಬಂತು. ಈಗಾಗಾಲೇ ಹಿರುಯ ಶಾಸಕರು ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಉತ್ತರ ನೀಡಲಾಗಿದ್ದು, ಗೊಂದಲ ನಿವಾರಣೆಯಾಗಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದರು.

ಜಾತಿ ಗಣತಿ ವರದಿ ಬಗ್ಗೆ ಚರ್ಚೆ: ಜಾತಿ ಗಣತಿ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಈಗಾಗಾಲೇ ಹಿಂದುಳಿದ ವರ್ಗಗಳ ಆಯೋಗ ನವೆಂಬರ್‌ನಲ್ಲಿ ವರದಿ ಸಲ್ಲಿಸುವ ಸಾಧ್ಯತೆ ಇದೆ‌. ವರದಿ ಸಲ್ಲಿಕೆ ಬಳಿಕ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ನುಡಿದರು.

ಇದನ್ನೂ ಓದಿ: ತುಂಗಭದ್ರಾ ಅಚ್ಚುಕಟ್ಟು ರೈತರಿಗೆ ನ.30ರ ತನಕ ನೀರು, ಲಭ್ಯತೆಯ ಆಧಾರದಡಿ ತೀರ್ಮಾನ: ಸಚಿವ ಶಿವರಾಜ್ ತಂಗಡಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.