ETV Bharat / state

ರಾಜ್ಯದಲ್ಲಿ ಗೋಧ್ರಾ ದುರಂತದ ರೀತಿ ಮತ್ತೊಂದು ಘಟನೆ ನಡೆಯಬಹುದು: ಬಿ.ಕೆ.ಹರಿಪ್ರಸಾದ್

author img

By ETV Bharat Karnataka Team

Published : Jan 3, 2024, 2:07 PM IST

Updated : Jan 3, 2024, 4:55 PM IST

ಬಿ.ಕೆ.ಹರಿಪ್ರಸಾದ್ ಹೇಳಿಕೆ
ಬಿ.ಕೆ.ಹರಿಪ್ರಸಾದ್ ಹೇಳಿಕೆ

ರಾಮ ಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ ಇದೊಂದು ರಾಜಕೀಯ ಕಾರ್ಯಕ್ರಮ ಎಂದು ಬಿ.ಕೆ ಹರಿಪ್ರಸಾದ್​ ಹೇಳಿದ್ದಾರೆ.

ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ನಡೆಯಬಹುದು ಹರಿಪ್ರಸಾದ್​ ಹೇಳಿಕೆ

ಬೆಂಗಳೂರು: ಕರ್ನಾಟಕದಲ್ಲಿ ಗೋಧ್ರಾ ದುರಂತದ ರೀತಿ ಮತ್ತೊಂದು ಘಟನೆ ಆಗಬಹುದು ಎಂದು ಕಾಂಗ್ರೆಸ್ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮಗೆ ಮಾಹಿತಿ ಸಿಗ್ತಾ ಇದೆ. ಮಾಹಿತಿ ಇದ್ದೇ ಹೇಳ್ತಾ ಇದ್ದೇನೆ.‌ ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷದ ನಿಲುವಿಗೂ ನನ್ನ ಹೇಳಿಕೆಗೂ ಸಂಬಂಧ ಇಲ್ಲ.‌ ಕೆಲವು ರಾಜ್ಯಗಳಿಂದ ನನಗೆ ಮಾಹಿತಿ ಬರುತ್ತಿದೆ.‌ ಕೆಲವು ಸಂಘಟನೆಗಳು ಮೀಟಿಂಗ್ ಮಾಡುತ್ತಿವೆ.‌ ಅವುಗಳ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಭದ್ರತೆ ತೆಗೆದುಕೊಳ್ಳಬೇಕು.‌ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಭದ್ರತೆ ನೀಡಬೇಕು. ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.‌

ರಾಮ ಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ.‌ ಇದೊಂದು ರಾಜಕೀಯ ಕಾರ್ಯಕ್ರಮ ಆಗ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು. ಶಂಕರಾಚಾರ್ಯರು ಮೂಲ ಗುರುಗಳು. ಅದೇ ರೀತಿ ಧರ್ಮ ಗುರುಗಳು ನಡೆಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಮೋದಿಯ ಧರ್ಮವೇ ಇನ್ನೂ ಯಾವುದು ಅಂತ ಗೊತ್ತಾಗಿಲ್ಲ. ಅಮಿತ್ ಶಾ ಧರ್ಮವೇ ಯಾವುದೂ ಅಂತ ಗೊತ್ತಾಗಿಲ್ಲ ಎಂದು ಕಿಡಿಕಾರಿದರು.

ಹೋರಾಟಕ್ಕೂ ಅಪರಾಧಕ್ಕೂ ವ್ಯತ್ಯಾಸ ಇದೆ. ಕರಸೇವಕ ಅಂತ ಯಾವುದೋ ಅಪರಾಧ ಪ್ರಕರಣದಲ್ಲಿ ಇರುವವರನ್ನು ಹಾಗೆಯೇ ಬಿಡಲು ಆಗುವುದಿಲ್ಲ. ಬಂಧಿತನ ಮೇಲೆ 13 ಕೇಸ್ ಇವೆ. ಕಾನೂನು ಬಾಹಿರ ಅಪರಾಧ ಮಾಡಿದ್ದಾರೆ. ಧರ್ಮದ ಹೆಸರಲ್ಲಿ ಏನೇನು ಕೆಲಸ ಮಾಡಿದ್ದಾರೆ ಅಂತ ಗೊತ್ತಿದೆ. ಬಿಜೆಪಿಯವರು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ಶಾಂತಿ ಕದಡುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲೇಬೇಕು ಎಂದರು.

30 ವರ್ಷ ಅವರನ್ನು ಬಿಟ್ಟಿದ್ದೇ ತಪ್ಪು. ಎಲ್ ಕೆ ಅಡ್ವಾಣಿಯವರ ಮೇಲೆ ಇರುವ ಕೇಸೇ ಇನ್ನೂ ಕ್ಲಿಯರ್ ಆಗಿಲ್ಲ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇಷ್ಟು ದಿನ ಹಳೆ ಕೇಸ್ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಹಾಗೇ ಬಿಟ್ಟಿದ್ದೇ ತಪ್ಪು ಎಂದು ಅಭಿಪ್ರಾಯಪಟ್ಟರು.

ಬಿ.ವೈ ವಿಜಯೇಂದ್ರ ತಿರುಗೇಟು: ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಅಹಿತಕರ ಘಟನೆ ಕರ್ನಾಟಕದಲ್ಲಿ ಆಗಬಹುದು ಎನ್ನುವ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ತಮಗಿರುವ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಿ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ರಾಜಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು. ಏಕೆಂದರೆ, ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಅಹಿತಕರ ಘಟನೆ ಕರ್ನಾಟಕದಲ್ಲಿ ಆಗಬಹುದು, ನನಗೆ ಈ ಬಗ್ಗೆ ಮಾಹಿತಿ ಸಿಗುತ್ತಿದೆ ಎಂದು ಹೇಳಿದ್ದಾರೆ ಆದರೆ ಗೋದ್ರಾ ಘಟನೆ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ ಅದರ ಬಗ್ಗೆ ಬೇರೆ ಏನೂ ಹೇಳಲ್ಲ. ಯಾರು ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.

ಬಿಜೆಪಿ ಎಂಎಲ್ಸಿ ರವಿಕುಮಾರ್ ಮಾತನಾಡಿ, ಈ ಸರ್ಕಾರ ಕರಸೇವಕ ಶ್ರೀಕಾಂತ್ ಪೂಜಾರಿಯವರನ್ನು ಬಂಧಿಸಿದೆ. 31 ವರ್ಷದ ಹಿಂದಿನ ಘಟನೆ ತೆಗೆದುಕೊಂಡು ಈಗ ಯಾಕೆ ಬಂಧಿಸಿದ್ದೀರಿ, 31 ವರ್ಷದಿಂದ ಏನು ಮಾಡುತ್ತಿದ್ದಿರಿ? ಈಗ ಯಾಕೆ ಬಂಧಿಸಿದಿರಿ? ಅದಕ್ಕೆ ಉತ್ತರಿಸಬೇಕೇ ಹೊರತು ಗೋಧ್ರಾದಲ್ಲಿ ಏನಾಯಿತು? ರಾಮಭಕ್ತರಿಗೆ ಭದ್ರತೆ ಕೊಡಬೇಕು ಎನ್ನುವುದು ಅಪ್ರಸ್ತುತ ಎಂದರು.

ಬಿಕೆ ಹರಿಪ್ರಸಾದ್ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಮಾಜಿ ಸಚಿವ ಆಗರ ಜ್ಞಾನೇಂದ್ರ ಕೂಡ ಒತ್ತಾಯಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಮಾತನಾಡಿರುವ ಅವರು, ಬಿಕೆ ಹರಿಪ್ರಸಾದ್ ಅನೇಕ ಹುದ್ದೆಗಳಲ್ಲಿದ್ದವರು. ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದೆ. ಗೋಧ್ರಾ ಘಟನೆ ನಡೆದಾಗ ಹರಿಪ್ರಸಾದ್ ದೆಹಲಿಯ ಆಡಳಿತದ ಜೊತೆಗೆ ಇದ್ದವರು. ಅಂತವರು ಇದೀಗ ಮತ್ತೆ ಗೋಧ್ರಾ ಘಟನೆ ಮರುಕಳಿಸಬಹುದೆಂದು ನಿರೀಕ್ಷೆ ಮಾಡಿದ್ದಾರೆ. ಈ ಹೇಳಿಕೆ ಗಾಬರಿ ತರಿಸಿದೆ. ಅವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಬೇಕೆಂದು ಒತ್ತಾಯಿಸಿದರು. ಸಂಸದ ಸಂಗಣ್ಣ ಕರಡಿ ಕೂಡ ಬಿಕೆ ಹರಿಪ್ರಸಾದ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: ರಾಮ ಭಕ್ತರ ಅರೆಸ್ಟ್​, ಪಿಎಫ್ಐಗಳ ಬಿಡುಗಡೆ: ಸರ್ಕಾರದ ವಿರುದ್ಧ ಆರ್​.ಅಶೋಕ್​ ಕಿಡಿ

Last Updated :Jan 3, 2024, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.