ETV Bharat / state

ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭ, ಹಳ್ಳಿ ಹಳ್ಳಿಗೆ ನಮ್ಮ ವಿಚಾರ ಮುಟ್ಟಿಸುತ್ತೇವೆ: ಅರುಣ್ ಸಿಂಗ್

author img

By

Published : Aug 18, 2022, 5:21 PM IST

Etv Bharatbjp-state-incharge-arun-singh-reaction-after-meeting
Etv Bharatಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭ, ಹಳ್ಳಿ ಹಳ್ಳಿಗೆ ನಮ್ಮ ವಿಚಾರ ಮುಟ್ಟಿಸುತ್ತೇವೆ: ಅರುಣ್ ಸಿಂಗ್

ಸಿದ್ದರಾಮೋತ್ಸವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಹುಟ್ಟುಹಬ್ಬ ನಮಗೆ ದೊಡ್ಡ ಪ್ರಶ್ನೆ ಅಲ್ಲ. ಸಿದ್ದರಾಮಯ್ಯ ಡಿಕೆಶಿಗಿಂದ ಪಾಪ್ಯುಲರ್, ಅದನ್ನ ತೋರಿಸಲು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಾಕತ್ ತೋರಿಸೋದು ಅವರಿಗೆ ಅನಿವಾರ್ಯ. ಜನಸೇವೆ ಮಾಡುವುದಷ್ಟೇ ನಮ್ಮ ಉದ್ದೇಶ. ಹಾಗಾಗಿ ಸಿದ್ದರಾಮೋತ್ಸವದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಆಗಲ್ಲ ಎಂದು ಹೇಳಿದರು.

ಬೆಂಗಳೂರು: ಮುಂದಿನ ಚುನಾವಣೆ ಬಗ್ಗೆ ನಮ್ಮ ಸಿದ್ಧತೆ ನಡೆಯುತ್ತಿದೆ. ಮತ್ತೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಬಿಜೆಪಿ ಸಾಧನೆಗಳನ್ನು ಜನರ ಮುಂದಿಡಲು ನಿರ್ಧರಿಸಿದ್ದೇವೆ. ಪ್ರತಿ ಹಳ್ಳಿಗೆ ತೆರಳಿ ನಮ್ಮ ವಿಚಾರ ತಲುಪಿಸುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನ ಸಭೆ ವಿಶೇಷವೇನಲ್ಲ. ಕಾಲ ಕಾಲಕ್ಕೆ ನಡೆಸುವಂತೆ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಾಗಿದೆ. ಕೇಂದ್ರದ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ನೇಮಕವನ್ನು ಸಭೆಯು ಒಕ್ಕೋರಲಿನಿಂದ ಸ್ವಾಗತಿಸಿದೆ. ಅವರ ನೇಮಕದಿಂದ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಕರ್ನಾಟಕದ ರಾಜಕೀಯದಲ್ಲಿ ಮಹತ್ತರವಾದ ಕಾರ್ಯ ನಿರ್ವಹಿಸಲು ಅವಕಾಶವಾಗಿದೆ ಎಂದರು.

ಸಂಚು ಮಾಡುವ ಪಕ್ಷ ಕಾಂಗ್ರೆಸ್: ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇದನ್ನು ಮಾಧ್ಯಮ ಕೇಳಬಾರದು, ಇದು ಸರಿಯಾದ ಪ್ರಶ್ನೆಯಲ್ಲ ಅಂತ ಅರುಣ್ ಸಿಂಗ್ ಗರಂ ಆದರು. ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ನೇರವಾಗಿ ಉತ್ತರಿಸದ ಅವರು, ಕಾಂಗ್ರೆಸ್ ಪಕ್ಷ ಸಂಚು ಮಾಡುವ ಪಕ್ಷ. ಇದು ಸತ್ಯವಾ? ಇಲ್ಲವಾ ಎಂಬುದನ್ನು ಪರಿಶೀಲಿಸಬೇಕು. ಕಾಂಗ್ರೆಸ್ ನಾಯಕರು ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಕಾಲ್ ರೆಕಾರ್ಡ್ ಮಾಡಿ ಈ ರೀತಿ ಹರಿಬಿಟ್ಟು ಮಿಸ್ ಲೀಡ್ ಮಾಡುತ್ತಿದ್ದಾರೆ ಎಂದರು.

ಪಕ್ಷ, ಸರ್ಕಾರದ ಬಗ್ಗೆ ನಕಾರಾತ್ಮಕವಾಗಿ ಯಾರೂ ಬಹಿರಂಗ ಮಾತಾಡಬಾರದು. ನಾಲ್ಕು ಗೋಡೆ ಒಳಗೂ ನಕಾರಾತ್ಮಕವಾಗಿ ಮಾತಾಡಬಾರದು ಅಂತ ಸೂಚಿಸಲಾಗಿದೆ. ಸಿಎಂ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ, ರೈತರಿಗೆ ಉತ್ತಮ ಯೋಜನೆ ನೀಡಿದ್ದಾರೆ. ಯಾವುದೋ ಒಂದು ವಿಚಾರ ಇಟ್ಟುಕೊಂಡು ಕಾಂಗ್ರೆಸ್​​ನವರು ದೊಡ್ಡದು ಮಾಡುತ್ತಿದ್ದಾರೆ. ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.

ಸಿದ್ದರಾಮೋತ್ಸವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಹುಟ್ಟುಹಬ್ಬ ನಮಗೆ ದೊಡ್ಡ ಪ್ರಶ್ನೆ ಅಲ್ಲ. ಸಿದ್ದರಾಮಯ್ಯ ಡಿಕೆಶಿಗಿಂದ ಪಾಪ್ಯುಲರ್, ಅದನ್ನ ತೋರಿಸಲು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಾಕತ್ ತೋರಿಸೋದು ಅವರಿಗೆ ಅನಿವಾರ್ಯ. ಜನಸೇವೆ ಮಾಡುವುದಷ್ಟೇ ನಮ್ಮ ಉದ್ದೇಶ. ಹಾಗಾಗಿ ಸಿದ್ದರಾಮೋತ್ಸವದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಆಗಲ್ಲ ಎಂದು ಹೇಳಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ: ಸಿಎಂಗೆ ಬಿಟ್ಟ ವಿಚಾರವಾಗಿದೆ. ಸಿಎಂ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸೂಕ್ತ ಸಮಯಕ್ಕೆ ಹೈಕಮಾಂಡ್ ಜೊತೆ ಚರ್ಚಿಸಿ ಸಿಎಂ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಸರ್ಕಾರ ಜನಪರ ಆಡಳಿತ ಮಾಡುತ್ತಿದೆ. ಮಾಧ್ಯಮಗಳು ಸರ್ಕಾರದ ಉತ್ತಮ ಕೆಲಸಗಳನ್ನು ತೋರಿಸಬೇಕು, ಸಣ್ಣ ಸಣ್ಣ ವಿಷಯಗಳನ್ನೇ ಹಿಡಿದು ಸುದ್ದಿ ಮಾಡುವುದು ಬೇಡ ಎಂದು ಮಾಧುಸ್ವಾಮಿ, ಶ್ರೀರಾಮುಲು‌ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದರು.

ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಿಂಗ್, ಶಿವರಾಜ್ ಪಾಟೀಲ್ ನಿರ್ಧಾರ ‌ಕೈಗೊಳ್ಳುವವರಲ್ಲ, ಅವರು ಹೇಳಿದಾಕ್ಷಣ ರಾಯಚೂರು ತೆಲಂಗಾಣ ಸೇರುವುದಿಲ್ಲ ಎಂದರು. ಇದೇ ವೇಳೆ, ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ವಿಚಾರ ಗೊತ್ತಿಲ್ಲ, ನಾನು ಅದನ್ನು ನೋಡಿಲ್ಲ. ಪ್ರಧಾನಿ ನೇತೃತ್ವದಲ್ಲಿ ಶೇ. 100ರಷ್ಟು ಉತ್ತಮ ಸರ್ಕಾರ ನಡೆಯುತ್ತಿದೆ. ರಾಜ್ಯಗಳಲ್ಲಿ ಕೂಡ ಉತ್ತಮ ಆಡಳಿತ ನೀಡುತ್ತೇವೆ ಎನ್ನುತ್ತ ನಿರ್ಗಮಿಸಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಬಿಗ್ ಎಲೆಕ್ಷನ್ ಸ್ಟ್ರಾಟಜಿ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಹೈಕಮಾಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.