ETV Bharat / state

ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪರಾಮರ್ಶೆಗೆ ಪ್ರತ್ಯೇಕ ಸಮಿತಿ: ಅಭ್ಯರ್ಥಿ ಆಯ್ಕೆ ಅಧಿಕಾರ ಕೈಗೆತ್ತಿಕೊಂಡ ಹೈಕಮಾಂಡ್

author img

By

Published : Mar 27, 2023, 4:30 PM IST

bjp
ಬಿಜೆಪಿ

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ಪಕ್ಷದ ಟಿಕೆಟ್​ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಮಿತ್​ ಶಾ ಹಲವು ಸೂಚನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಮಾಸ್ಟರ್ ಪ್ಲಾನ್ ರೂಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಓರ್ವ ಸಂಸದ, ಓರ್ವ ಕೋರ್ ಕಮಿಟಿ ಸದಸ್ಯ ಮತ್ತು ಓರ್ವ ಪದಾಧಿಕಾರಿಯನ್ನು ಒಳಗೊಂಡ ಮೂವರ ಸಮಿತಿಯನ್ನು ಪ್ರತಿ ಎರಡು ಜಿಲ್ಲೆಗೆ ರಚಿಸಿ ಆಕಾಂಕ್ಷಿಗಳ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳೊಂದಿಗೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಆಕಾಂಕ್ಷಿಗಳ ಪಟ್ಟಿ ನೀಡುವಂತೆ ರಾಜ್ಯ ಸಮಿತಿಗೆ ಸೂಚನೆ ನೀಡಿದ್ದಾರೆ. ಆ ಮೂಲಕ ಟಿಕೆಟ್ ಹಂಚಿಕೆ ಅಧಿಕಾರವನ್ನು ನೇರವಾಗಿ ಹೈಕಮಾಂಡ್ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಕಳೆದ ರಾತ್ರಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಟಿಕೆಟ್ ವಿಚಾರದ ಕುರಿತು ಚರ್ಚೆ ನಡೆಸುವುದಕ್ಕೆ ನಿರಾಕರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಟಿಕೆಟ್ ಗೆ ಸಮಿತಿ ರಚನೆ ಮಾಡಿ, ಒಬ್ಬ ಸಂಸದ, ಒಬ್ಬ ಕೋರ್ ಕಮಿಟಿ ಸದಸ್ಯ ಒಬ್ಬ ಪದಾಧಿಕಾರಿ ಮೂವರ ಸಮಿತಿ ರಚಿಸಿ ಇವರಿಗೆ ಎರಡು ಜಿಲ್ಲೆಯ ಜವಾಬ್ದಾರಿ ಹಂಚಿಕೆ ಮಾಡಿ, ತಮ್ಮದೇ ಜಿಲ್ಲೆಯ ಸಂಸದರಿಗೆ ಅದೇ ಜಿಲ್ಲೆ ನೀಡಬೇಡಿ. ಪ್ರತಿ ತಂಡ ಎರಡು ಬೇರೆ ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಪಡೆಯಬೇಕು.

bjp
ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ

ಈ ತಿಂಗಳ 31 ಕ್ಕೆ ಸಮಿತಿ ಅಭಿಪ್ರಾಯ ಪಡೆದು ಕೇಂದ್ರಕ್ಕೆ ವರದಿ ನೀಡಬೇಕು. ಆಕಾಂಕ್ಷಿಗಳು ಎಷ್ಟು ಜನ ಇದ್ದಾರೆ, ಹಾಲಿ ಶಾಸಕರ ಬಗ್ಗೆ ಏನು ಅಭಿಪ್ರಾಯ? ಟಿಕೆಟ್ ಬದಲಾವಣೆ ಮಾಡಬೇಕಾ? ಹೊಸಬರಿಗೆ ಅವಕಾಶ ನೀಡಬೇಕಾ? ಯಾವ ಆಕಾಂಕ್ಷಿಗಳ ಪರ ಹೆಚ್ಚು ಒಲವಿದೆ? ಒಂದೇ ದಿನದಲ್ಲಿ ಈ ಕೆಲಸ ಮಾಡಿ. ಕ್ಷೇತ್ರದ ಆಕಾಂಕ್ಷಿಗಳು, ಪದಾಧಿಕಾರಿಗಳು, ಶಾಸಕರು, ಸಂಸದರು, ಪರಿಷತ್ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ನೇರವಾಗಿ ಕೇಂದ್ರಕ್ಕೆ ಈ ವರದಿ ನೀಡಿ. ಬಳಿಕ ಟಿಕೆಟ್ ಯಾರಿಗೆ ಅನ್ನೋದನ್ನು ನಾವು ತೀರ್ಮಾನ ಮಾಡುತ್ತೇವೆ ಎಂದು ಸಭೆಯಲ್ಲಿ ಅಮಿತ್ ಶಾ ಸೂಚನೆ ನೀಡಿದರು ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಂದ ಮಾಹಿತಿ ಸಿಕ್ಕಿದೆ.

ಈ ಹಿಂದೆ ಜಿಲ್ಲಾ ಸಮಿತಿಗಳಿಂದ ಆಕಾಂಕ್ಷಿಗಳ ಪಟ್ಟಿಯನ್ನು ತರಿಸಿಕೊಳ್ಳಲಾಗಿತ್ತು. ಆ ಪಟ್ಟಿಯ ಆಧಾರವಾಗಿ ಕೋರ್ ಕಮಿಟಿಯಲ್ಲಿ ಚರ್ಚಿಸಿ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಕೊಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಅಮಿತ್ ಶಾ ಈ ಬಾರಿ ಜಿಲ್ಲಾ ಸಮಿತಿ ನೀಡಿದ ಪಟ್ಟಿಯ ಬದಲು ಹೊಸದಾಗಿ ಸಮಿತಿ ರಚಿಸಿ ಆ ಸಮಿತಿಯಿಂದ ಪಟ್ಟಿ ತರಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಬಿಜೆಪಿಯ ಮೊದಲ ಪಟ್ಟಿ ಚುನಾವಣಾ ದಿನಾಂಕ ಘೋಷಣೆಯಾದ ನಂತರವೇ ಬಿಡುಗಡೆಯಾಗಲಿದೆ.

ಇನ್ನು, ಕೋರ್ ಕಮಿಟಿ ಸಭೆಯಲ್ಲಿ ಮೋರ್ಚಾಗಳ ಸಮಾವೇಶ, ರಥಯಾತ್ರೆ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲ್ಲಿಕೆ ಮಾಡಿದರು. ಅಲ್ಲದೆ ಈ ಎಲ್ಲಾ ಕಾರ್ಯಕ್ರಮಗಳಿಂದಾಗಿ ಪಕ್ಷಕ್ಕೆ ಲಾಭ ಆಗಿದೆ ಪಕ್ಷದ ಸಂಘಟನೆಗೂ ಹೆಚ್ಚಿನ ಶಕ್ತಿ ಸಿಕ್ಕಂತಾಗಿದೆ ಎಂದರು. ನಂತರ ಮೀಸಲಾತಿ ವಿಚಾರ ಪ್ರಸ್ತಾಪಿಸುತ್ತ ಸರ್ಕಾರದ ತೀರ್ಮಾನದಿಂದ ಲಾಭವಾಗಲಿದೆ. ಒಳ‌ಮೀಸಲಾತಿ ಲಾಭ ನೇರವಾಗಿ ಚುನಾವಣೆ ಮೇಲೆ ಆಗಲಿದೆ ಎಂದರು.

ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ಮೀಸಲಾತಿ ಘೋಷಣೆಯ ಲಾಭ ಪಡೆಯಬೇಕು, ಜನರಿಗೆ ಈ ವಿಷಯ ಸರಿಯಾಗಿ ತಲುಪಿಸಬೇಕು, ಚುನಾವಣೆಗೆ ಮೀಸಲಾತಿ ಲಾಭ ಸಿಗುವಂತೆ ನೋಡಿಕೊಳ್ಳಬೇಕು. ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೂ ಈ ವಿಚಾರದಲ್ಲಿ ಸಾಧ್ಯವಾದಷ್ಟು ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು ಎಂದು ಸೂಚಿಸಿದರು.

ಅಮಿತ್ ಶಾ ಗರಂ: ಇನ್ನು ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಗರಂ ಆದ ಘಟನೆಯೂ ನಡೆಯಿತು. ಹಂತ ಹಂತವಾಗಿ ವಿವಿಧ ವಿಷಯಗಳ ಆಧಾರಿತವಾಗಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ರಥಯಾತ್ರೆಯ ವಿಚಾರ ಬಂದಾಗ ಈ ಕುರಿತ ವರದಿ ನೀಡಿದ ಸಿಎಂ ಬೊಮ್ಮಾಯಿ‌ ಅಗತ್ಯ ವಿವರಣೆ ನೀಡಿದರು. ರಾಜ್ಯಾದ್ಯಂತ ಯಶಸ್ವಿಯಾಗಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ನಡೆದಿದೆ ಆದರೆ ಬೆಂಗಳೂರಿನ ಆರು ಕ್ಷೇತ್ರದಲ್ಲಿ ಮಾತ್ರ ಯಾತ್ರೆ ಆಗಿಲ್ಲ ಇದನ್ನು ಬಿಟ್ಟರೆ ನಮ್ಮ ರಥಯಾತ್ರೆ ಸಕ್ಸಸ್ ಆಗಿದೆ ಎಂದರು.

ಇದಕ್ಕೆ ಸಿಟ್ಟಾದ ಅಮಿತ್ ಶಾ, ಆರ್ ಅಶೋಕ್ ರತ್ತ ತಿರುಗಿ ಪ್ರಶ್ನೆ ಮಾಡುತ್ತಾ ಯಾಕೆ ಆರು ಕ್ಷೇತ್ರದಲ್ಲಿ ರಥಯಾತ್ರೆ ಮಾಡಿಲ್ಲ ಎಂದರು. ಇದಕ್ಕೆ ತಡವರಿಸಿದ ಅಶೋಕ್ ಆರು ಕ್ಷೇತ್ರದಲ್ಲಿ ರಥಯಾತ್ರೆ ಮಾಡುತ್ತೇವೆ ಎಂದರು ಆದರೆ ಇದಕ್ಕೆ ಅಮಿತ್ ಶಾ, ಇನ್ನು ಯಾವಾಗ ಮಾಡ್ತಿರಾ? ವಿಜಯ ಸಂಕಲ್ಪ ಯಾತ್ರೆಯ ಸಮಾರೋಪವೇ ಮುಗಿದು ಹೋಯಿತಲ್ಲ. ಈಗ ಮತ್ತೆ ಹಳೆಯ ರಥಯಾತ್ರೆ ಮಾಡಬೇಡಿ, ಬಾಕಿ ಉಳಿದಿರುವ ಆ ಆರು ಕ್ಷೇತ್ರದಲ್ಲಿ ಬೇರೆ ಕಾರ್ಯಕ್ರಮ ಜೋಡಿಸಿ, ಮುಂದಿನ ಬಾರಿ ಬಂದಾಗ ಅದರ ವರದಿ ನೀಡಿ ಎಂದು ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜೊತೆಗೆ ಮೊದಲಿನ ಪರಿಸ್ಥಿತಿ ಈಗ ಇಲ್ಲ. ಈಗ ಪಕ್ಷದ ವರ್ಚಸ್ಸು ಬದಲಾಗಿದೆ. ಮೋದಿ ಕಾರ್ಯಕ್ರಮದ ಬಳಿಕ ಪಕ್ಷದ ಇಮೇಜ್ ಬದಲಾಗಿದೆ ಮೋದಿಯವರ ಜನಪ್ರಿಯತೆ ಮುಂದೆ ಯಾವುದು ಇಲ್ಲ, ಯಾರು ಇಲ್ಲ, ನಿಮಗೆ ಸಂದೇಹ ಬೇಡ, ನಾವು ನೂರಕ್ಕೆ ನೂರು ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಆದರೆ ನಿಮಗೆ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: ಒಳಮೀಸಲಾತಿ ವಿಚಾರ.. ಪ್ರತಿಭಟನೆ ವೇಳೆ ಯಡಿಯೂರಪ್ಪ‌ ಮನೆ ಮೇಲೆ ಕಲ್ಲು ತೂರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.