ETV Bharat / state

ತವರು ಅಭಿಮಾನಿಗಳ ಬೆಂಬಲದಿಂದ ಬುಲ್ಸ್​​ ಗೆಲುವು ದಾಖಲಿಸಲಿದೆ: ಕೋಚ್ ಹೇಳಿಕೆ

author img

By ETV Bharat Karnataka Team

Published : Dec 6, 2023, 6:44 PM IST

Bangalore Bulls
Bangalore Bulls

Pro Kabaddi-Bengaluru Bulls: ಫ್ಯಾನ್ಸ್, ಹೋಮ್ ಗ್ರೌಂಡ್ ಸಪೋರ್ಟ್​ನಿಂದ ಮುಂದಿನ ಪಂದ್ಯಗಳಲ್ಲಿ ತಂಡ ಗೆಲುವು ದಾಖಲಿಸಲಿದೆ ಎಂದು ಬೆಂಗಳೂರು ಬುಲ್ಸ್ ಕೋಚ್ ರಣದೀಪ್ ಸಿಂಗ್ ಶೆರಾವತ್ ಹೇಳಿದ್ದಾರೆ.

ಬೆಂಗಳೂರು: ಪ್ರೊ ಕಬಡ್ಡಿ ಸೀಸನ್ 10ರಲ್ಲಿ ಎರಡು ಮ್ಯಾಚ್ ಸೋತಿದ್ದೇವೆ. ಮುಂದಿ‌ನ ಪಂದ್ಯಗಳನ್ನು ಗೆಲ್ಲುವ ವಿಶ್ವಾಸವಿದೆ. ಬೆಂಗಳೂರಿನ ಫ್ಯಾನ್ಸ್, ಹೋಮ್ ಗ್ರೌಂಡ್ ಸಪೋರ್ಟ್ ಮೂಲಕ ಗೆಲುವು ದಾಖಲಿಸಲಿದ್ದೇವೆ ಎಂದು ತಂಡದ ಕೋಚ್ ರಣದೀಪ್ ಸಿಂಗ್ ಶೆರಾವತ್ ವಿಶ್ವಾಸ ವ್ಯಕ್ತಪಡಿಸಿದರು.

ಒತ್ತಡವನ್ನು ಅಭಿಮಾನಿಗಳೇ ನಿಭಾಯಿಸುತ್ತಾರೆ: 2023ನೇ ಆವೃತ್ತಿಯಲ್ಲಿನ ಪಂದ್ಯಾವಳಿಗಳು ನಗರದಲ್ಲಿ ನಡೆಯಲಿದ್ದು, ಈ ಕುರಿತು ಬೆಂಗಳೂರು ಬುಲ್ಸ್ ತಂಡ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ರಣದೀಪ್ ಸಿಂಗ್ ಶೆರಾವತ್, 10 ಸೀಸನ್​ನಿಂದ ನಾನು ಬುಲ್ಸ್ ಕೋಚ್ ಆಗಿ ಜೊತೆಗಿದ್ದೇನೆ. ಹೀಗಾಗಿ ನನ್ನ ಮೇಲೆ ಸಾಕಷ್ಟು ಒತ್ತಡವಿದೆ. ಆದರೆ ಬೆಂಗಳೂರಿನ ಅಭಿಮಾನಿಗಳ ಬೆಂಬಲದಿಂದ ಒತ್ತಡವನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವ ವಿಶ್ವಾಸವಿದೆ ಎಂದರು.

ಬುಲ್ಸ್​ ಬಿಡುವುದಿಲ್ಲ: ನನ್ನನ್ನು ಅಭಿಮಾನಿಗಳು ಬಿಡುತ್ತಿಲ್ಲ. ನಾನು ಅಭಿಮಾನಿಗಳನ್ನು ಬಿಡುವುದಿಲ್ಲ ಆದ್ದರಿಂದ ಬೆಂಗಳೂರು ಬುಲ್ಸ್ ತಂಡ ಕುಟುಂಬಂದಂತಾಗಿದೆ. ಆಟಗಾರರು ಬದಲಾಗುತ್ತಿದ್ದಾರೆ, ಕೆಲ ಆಟಗಾರರು ಬಿಟ್ಟು ಹೋಗುತ್ತಿದ್ದಾರೆ. ಆದರೆ ನಾನು ಬುಲ್ಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಉತ್ತಮ ಆಟಗಾರರಿದ್ದಾರೆ: ನಾನು ಎಲ್ಲಾ ಆಟಗಾರರನ್ನು ಗಮನಿಸುತ್ತೇನೆ. ಟ್ರೈನಿಂಗ್ ಸಮಯದಲ್ಲಿ ಎಲ್ಲರ ಸಾಮರ್ಥ್ಯ ಗೊತ್ತಾಗುತ್ತಿದೆ. ತಂಡದಲ್ಲಿ 9 ಜನ ಉತ್ತಮ ಆಟಗಾರರು ಇದ್ದಾರೆ. ಮುಂದಿನ ಪಂದ್ಯಾವಳಿಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಲ್ಲರೂ ಉತ್ತಮ ಆಟ ಪ್ರದರ್ಶಿಸಲಿದ್ದಾರೆ. ಅನುಭವಿ ಆಟಗಾರರು ನಮ್ಮ ತಂಡದಲ್ಲಿದ್ದು ಡಿಫೆಂಡರ್, ರೇಡರ್ ಎಲ್ಲರೂ ಬಲಿಷ್ಠವಾಗಿದ್ದಾರೆ ಎಂದರು.

ತಪ್ಪುಗಳನ್ನು ತಿದ್ದಿ ನಡೆಯುತ್ತೇವೆ: ನಾಯಕ ಸೌರಭ್ ಮಾತನಾಡಿ, ಕಳೆದ ಎರಡು ಪಂದ್ಯಗಳಲ್ಲಿ ಕೆಲವೊಂದು ತಪ್ಪುಗಳಾಗಿದೆ. ಮುಂದಿನ ಪಂದ್ಯಗಳಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಆಡುತ್ತೇವೆ. ಎಲ್ಲ ಆಟಗಾರರು ಒಗ್ಗಟ್ಟಿನಿಂದ ಇದ್ದು, ಮುಂದಿನ ಪಂದ್ಯಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದೇವೆ. ನಮ್ಮ ತಂಡ ಕಳೆದ ಎಲ್ಲ ಸೀಸನ್ ಅಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಫೈನಲ್ ಗೆಲುವು ನಮ್ಮದಾಗಿಲ್ಲ, ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲಿದ್ದೇವೆ ಎಂದು ಹೇಳಿದರು.

ಸ್ಟಾರ್ ರೇಡರ್ ಭರತ್ ಮಾತನಾಡಿ, ಕಳೆದ ಎರಡು ಪಂದ್ಯಗಳಲ್ಲಿ ಸ್ವಲ್ಪ ತಪ್ಪಾಗಿದೆ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಮುಂದಿನ ಪಂದ್ಯಗಳಲ್ಲಿ ಗೆಲುವು ದಾಖಲಿಸುವ ವಿಶ್ವಾಸವಿದೆ ಎಂದರು.

ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ವಿಕಾಸ್ ಖಂಡೋಲ ಮಾತನಾಡಿ, ಕಳೆದ ಸೀಸನ್​ನಲ್ಲಿ ನಾನು ಉತ್ತಮವಾಗಿ ಆಡಿಲ್ಲ. ನನ್ನ ತಪ್ಪುಗಳು ಏನಿದೆ ಎನ್ನುವುದನ್ನು ಅರಿತು ಸರಿಪಡಿಸಿಕೊಂಡಿದ್ದೇನೆ. ಈ ಬಾರಿ ಇಲ್ಲಿನ ಫ್ಯಾನ್ಸ್​ಗಳ ಸಪೋರ್ಟ್​ನಿಂದ ಉತ್ತಮವಾಗಿ ಆಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರವಿ ಬಿಷ್ಣೋಯ್ ವಿಶ್ವದ ನಂ.1 ಟಿ20 ಬೌಲರ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.